Shimoga News ಸಾಗರ ಪ್ರಕೃತಿಯ ವಿಸ್ಮಯಗಳಲ್ಲಿ ವನ್ಯ ಜೀವಿಗಳ ಪಾತ್ರ ಮಹತ್ವದ್ದು, ಮನುಷ್ಯನಿಗಿಂತ ವನ್ಯ ಜೀವಿಗಳೇ ಪರಿಸರ ಸಂರಕ್ಷಕರು. ಭೂಮಿಯ ಮೇಲೆ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ. ಹಾವುಗಳ ಪಾತ್ರ ಆಹಾರ ಸರಪಳಿಯಲ್ಲಿ ಮುಖ್ಯವಾದದ್ದು.
“ಎಲ್ಲಾ ಹಾವುಗಳೂ ವಿಷಕಾರಿಯಲ್ಲ. ಹಾವಿಗೆ ಬೇಕಾಗಿರುವುದು ಇಲಿ, ಹಲ್ಲಿ, ಕಪ್ಪೆ, ಕೋಳಿಯಂತಹ ಆಹಾರ. ಹಾವುಗಳ ಬಗ್ಗೆ ಸಿನಿಮಾ, ಧಾರವಾಹಿಗಳ ಮೂಲಕ ಭ್ರಮೆ ಭಿತ್ತಲಾಗಿದೆ. ಧಾರ್ಮಿಕವಾಗಿಯೂ ಹಾವು ವಿಲನ್ ಆಗಿದೆ. ದೋಷಮುಕ್ತಿಗಾಗಿ ದೊಡ್ಡ-ದೊಡ್ಡ ದೇವಸ್ಥಾನಗಳನ್ನು ಕಟ್ಟುತ್ತಾರೆ. ನಾಗಿಣಿಯಾಗಿ ಕುಣಿಯುವುದಿಲ್ಲ. ದ್ವೇಷ ಸಾಧಿಸುವುದಿಲ್ಲ. ನಾಗಲೋಕ ಇಲ್ಲ. ಜನರಲ್ಲಿ ಭಯ, ಮೌಢ್ಯ ಭಿತ್ತುತ್ತಾರೆ. ಇದರಿಂದ ಜನರು ಹಾವುಗಳ ಬಲಿದಾನ ಮಾಡುತ್ತಾರೆ. ಪ್ರಕೃತಿಯ ಸಮತೋಲನ ಸಹಜವಾಗಿ ಏರುಪೇರಾಗಿ ಮನುಷ್ಯ ಕುಲಕ್ಕೆ ಧಕ್ಕೆಯಾಗಿದೆ. ತಾನು ಮಾತ್ರವೇ ಮುಖ್ಯ ಎನ್ನುವ ಮನುಷ್ಯನ ನಿಲುವು ವಿವೇಕವನ್ನು ಕಳೆಯುತ್ತಿದೆ. ವಿದ್ಯಾರ್ಥಿಗಳು ಹಾವಿನ ಬಗ್ಗೆ ಅರಿವು, ಅದರ ಸಂರಕ್ಷಣೆ ಬಗ್ಗೆ ಅರಿತು ನಡೆಯಿರಿ” ಎಂದು ಖ್ಯಾತ ವನ್ಯ ಜೀವಿ ಛಾಯಾಗ್ರಾಹಕ ಶ್ರೀ ಜಿ.ಆರ್. ಪಂಡಿತ್ರವರು ಸಾಗರದ ಎಲ್.ಬಿ. ಕಾಲೇಜಿನಲ್ಲಿ ಹಾವು ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ವಿದ್ಯಾರ್ಥಿಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
Shimoga News ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಬೆಂಗಳೂರು, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ರಿ.), ಸಾಗರ ಮತ್ತು ಪಂಚವಟಿ ನಿಸರ್ಗ ಸಂಶೋಧನಾ ಅಕಾಡೆಮಿ ಆಶ್ರಯದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ, ಶ್ರೀ ಪುರುಷೋತ್ತಮ ತಲವಾಟ, ರಾಷ್ಟ್ರೀಯ ರಂಗ ಪ್ರಶಸ್ತಿ ವಿಜೇತರು, ಕವಲಕೋಡು ವೆಂಕಟೇಶ, ನಿಕಟಪೂರ್ವ ಜೀವವೈವಿಧ್ಯ ಮಂಡಳಿ ಸದಸ್ಯರು, ವೃಕ್ಷಲಕ್ಷ ಆಂದೋಲನ, ಸಂಚಾಲಕರು ಮಾತನಾಡಿ, “ಜನವಸತಿ, ಹೊಲ, ಹುತ್ತಗಳ ಸುತ್ತ-ಮುತ್ತಲೂ ಹಾವುಗಳು ಕಂಡುಬರುತ್ತದೆ. ಇವುಗಳಲ್ಲಿ ಕೊಳಕ ಮಂಡಲ, ಕಾಮನ್ ಕ್ರೇಟ್, ನಾಗರ ಹಾವು, ಕಾಳಿಂಗ ಸರ್ಪಗಳು ಹೆಚ್ಚು ವಿಷಕಾರಿ ಹಾವುಗಳು. ಇವು ಕಚ್ಚಿದರೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಕೆರೆ ಹಾವು, ನೀರು ಹಾವು, ಹಸಿರು ಹಾವು, ಹೆಬ್ಬಾವು ಅಪಾಯಕಾರಿಯಲ್ಲ. ಎಲ್ಲಿಯಾದರೂ ಹಾವು ಕಂಡರೆ ಕಲ್ಲು ಎಸೆಯಬೇಡಿ. ಬದಲಾಗಿ ಒಂದು ಫೋಟೋ ತೆಗೆದು ಗೂಗಲ್ನಲ್ಲಿ ಅಪ್ಲೋಡ್ ಮಾಡಿ ಅದರ ಬಗೆಗಿನ ಮಾಹಿತಿಯನ್ನು ಅರಿಯಿರಿ” ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಎಸ್. ಲಕ್ಷ್ಮೀಶ ಇವರು ವಹಿಸಿದ್ದರು. ಕಾರ್ಯಕ್ರಮದ ಮೊದಲು ಡಾ. ಗಿರೀಶ್ ಜನ್ನೆ, ನಿರ್ದೇಶಕರು, ಪಂಚವಟಿ ನಿಸರ್ಗ ಸಂಶೋಧನಾ ಅಕಾಡೆಮಿ, ಇವರು ಎಲ್ಲರನ್ನೂ ಸ್ವಾಗತಿಸಿ, ಡಾ. ಸವಿನಯ ಮಾಲ್ವೆ, ವಿಜ್ಞಾನಿಗಳು, ಕಾರ್ಯಾಗಾರದ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಎಲ್.ಬಿ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವನ್ಯಜೀವಿ ಛಾಯಾಗ್ರಾಹಕರಾದ ಶ್ರೀ ಸತೀಶ್ ಆರ್, ಶ್ರೀ ಅಶೋಕ, ಶ್ರೀ ಈಶಾನ್ಯ ಶರ್ಮ, ಶ್ರೀ ಕಲಗಾರ್ ಗಿರಿಧರ್, ಶ್ರೀ ವಿವೇಕ್ ಹಾಸ್ಯಗಾರ್, ಶ್ರೀ ಜಿ.ಆರ್. ಪಂಡಿತ್ ಇವರುಗಳು ಸೆರೆಹಿಡಿದ ವಿವಿಧ ಹಾವುಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಸಂಸ್ಥೆಯ ತಾಂತ್ರಿಕ ತಂತ್ರಜ್ಞರಾದ ಶ್ರೀ ಶಿವರಾಜ್ ಹಾಗೂ ಸಹಾಯಕರಾದ ಶ್ರೀಮತಿ ಹರ್ಷಿತಾ ಭಾಗವಹಿಸಿ ಮಾಹಿತಿ ನೀಡಿದರು.
Shimoga News ಎಲ್ಲಾ ಹಾವುಗಳು ವಿಷಕಾರಿಯಲ್ಲ. ಮಾಧ್ಯಮಗಳಲ್ಲಿ ಅವುಗಳ ಬಗ್ಗೆ ಭ್ರಮೆ,ಮೌಢ್ಯ ಬಿತ್ತಲಾಗಿದೆ- ಜಿ.ಆರ್.ಪಂಡಿತ್
Date:
