World Zoonosis Day ಪ್ರಾಣಿಗಳಿಂದ ಮನುಷ್ಯರಿಗೆ ಹಲವಾರು ಸೋಂಕುಗಳು ಹರಡುವ ಕಾರಣ ಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಈ ಕುರಿತು ಹೆಚ್ಚಿನ ಅರಿವು, ಜಾಗೃತಿ ಮತ್ತು ನಿಯಂತ್ರಣದ ಉದ್ದೇಶದಿಂದ ವಿಶ್ವ ಝೂನೋಸಸ್ ದಿನವನ್ನು ಆಚರಿಸಲಾಗುತ್ತಿದೆ ಎಂದು ಡಿಹೆಚ್ಓ ಡಾ.ನಟರಾಜ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಝೋನೊಸಸ್ ದಿನಾಚರಣೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
World Zoonosis Day ಝೂನೋಸಸ್ ಎಂದರೆ ಪ್ರಾಣಿಗಳಿಂದ ಮನುಷ್ಯರಿಗೆ (ಮತ್ತು ಪ್ರಾಣಿಗಳಿಗೆ) ಸೋಂಕು ಹರಡುವ ರೋಗಗಳು. ಇವು ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಅಥವಾ ಫಂಗಸ್ ಕಾರಣದಿಂದ ಉಂಟಾಗುತ್ತವೆ. ನಾಯಿ, ಬೆಕ್ಕು, ಕರಡಿ ಇತರೆ ಪ್ರಾಣಿಗಳಿಂದ ರೇಬೀಸ್, ಹಂದಿಗಳಿಂದ ಸ್ವೈನ್ ಫ್ಲೂ, ಹಾಲು, ಮಾಂಸದಿಂದ ಬ್ರುಸೆಲ್ಲೋಸಿಸ್, ಹುಳುಗಳಿಂದ ಲೈಮ್ ರೋಗ, ಉಣ್ಣೆಗಳಿಂದ ಮಂಗನ ಖಾಯಿಲೆ, ಲೆಪ್ಟೊಸೈರಾ ಬ್ಯಾಕ್ಟಿರಿಯಾದಿಂದ ಇಲಿ ಜ್ವರ ಹೀಗೆ ಪ್ರಾಣಿಗಳಿಂದ ಹಲವಾರು ಸೋಂಕುಗಳು ಮನುಷ್ಯರಿಗೆ ಹರಡುತ್ತದೆ. ಆದ್ದರಿಂದ ಪ್ರಾಣಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾಲ ಕಾಲಕ್ಕೆ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ಒಮ್ಮೆ ರೇಬಿಸ್ ಬಂದರೆ ಎಂತಹ ಬಲಿಷ್ಟರನ್ನು ಸಹ ಇದು ಬಲಿ ತೆಗೆದುಕೊಳ್ಳುತ್ತದೆ. ಆದ್ದರಿಂದ ಬಾರದಂತೆ ಎಚ್ಚರದಿಂದ ಇರಬೇಕು ಎಂದರು.
ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ಪ್ರಾಣಿಗಳು ಅದರಲ್ಲೂ ಸಾಕು ಪ್ರಾಣಿಗಳ ಕುರಿತು ಹೆಚ್ಚಿನ ಎಚ್ಚರಿಕೆ ಅಗತ್ಯ. ನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಬೇಕು. ಬೆಕ್ಕು ಪರಚಿರುವುದರಿಂದಲೂ ರೇಬಿಸ್ ಬಂದು ರೋಗಿ ಮೃತಪಟ್ಟಿರುವ ಪ್ರಕರಣಗಳು ಇವೆ. ಆದ್ದರಿಂದ ಸಾಕಷ್ಟು ಎಚ್ಚರಿಕೆ ಅಗತ್ಯವಿದೆ. ಇಲಿ ಜ್ವರದ ಬಗ್ಗೆಯೂ ಜಾಗೃತರಾಗಿರಬೇಕು. ಇಲಿ ಮೂತ್ರವು ಆಹಾರ ಸೇರಿ ಸೋಂಕು ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ನೀರು, ಆಹಾರ, ಕೈ ಕಾಲುಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು. ಇನ್ನು ಮಲೆನಾಡಿನಲ್ಲಿ ಉಣ್ಣೆಗಳಿಂದ ಮಂಗನ ಕಾಯಿಲೆ ಬರುತ್ತದೆ. ಆದ್ದರಿಂದ ಈ ಕುರಿತು ಅರಿವು ಮತ್ತು ಎಚ್ಚರಿಕೆ ಅತ್ಯಗತ್ಯ. ನಾಯಿ, ಬೆಕ್ಕು ಕಡಿತಕ್ಕೊಳಗಾದ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ. ಈ ದಿನವು ಪ್ರಾಣಿ-ಮಾನವರ ಆರೋಗ್ಯ ಸಂರಕ್ಷಣೆಗೆ ಸಂಬAಧಿಸಿದ ಪ್ರಮುಖ ಅಂಶಗಳನ್ನು ಹಂಚಿಕೊಳ್ಳುವ ದಿನ. ಪ್ರತಿವರ್ಷ ಜುಲೈ 6 ರಂದು ವಿಶ್ವಾದ್ಯಂತ ಝೂನೋಸಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಡಾ. ಲೂಯಿಸ್ ಪಾಶ್ಚರ್ ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ, ಏಕೆಂದರೆ ಅವರು ಝೂನೋಸಸ್ ರೋಗಗಳ ವಿರುದ್ಧ ಅಭಿವೃದ್ಧಿಪಡಿಸಿದ್ದ ರೇಬಿಸ್ ಲಸಿಕೆಯನ್ನು ಈ ದಿನದಂದು ನೀಡಲಾಗಿತ್ತು. ಆದ್ದರಿಂದ ಈ ದಿನದ ಮೂಲಕ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನಾಚರಣೆ ಮಾಡಲಾಗುತ್ತಿದೆ.
ಪ್ರಾಣಿ-ಮಾನವ ಸೋಂಕು ರೋಗಗಳ ಬಗ್ಗೆ ಅರಿವು ಮೂಡಿಸುವುದು. ರೋಗ ನಿರೋಧನೆ ಮತ್ತು ನಿಯಂತ್ರಣದ ಕ್ರಮಗಳನ್ನು ಪ್ರಚಾರ ಮಾಡುವುದು. ಪ್ರಾಣಿ ಆರೋಗ್ಯ ಮತ್ತು ಮಾನವ ಆರೋಗ್ಯದ ನಡುವಿನ ಸಂಬಂಧವನ್ನು ಒತ್ತಿಹೇಳುವುದು ಈ ದಿನದ ಉದ್ದೇಶವಾಗಿದೆ.
ಈ ರೋಗಗಳನ್ನು ತಡೆಗಟ್ಟಲು ಪ್ರಾಣಿಗಳಿಗೆ ನಿಯಮಿತ ಲಸಿಕೆ ಹಾಕಿಸಬೇಕು ಸೋಂಕು ಹರಡಿದ ಪ್ರಾಣಿಗಳ ಸಂಪರ್ಕದಿಂದ ದೂರವಿರಬೇಕು. ಮಾಂಸ ಮತ್ತು ಹಾಲನ್ನು ಚೆನ್ನಾಗಿ ಬೇಯಿಸಿ/ಶುದ್ಧೀಕರಿಸಿ ಸೇವಿಸಬೇಕು. ನೀರು ಮತ್ತು ಪರಿಸರದ ಸ್ವಚ್ಛತೆ ಕಾಪಾಡುವುದು. ರೋಗಲಕ್ಷಣಗಳು ಕಂಡಾಗ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
ಶೇ.60 ಸೋಂಕುಗಳು ಪ್ರಾಣಿಗಳಿಂದ ಹರಡುತ್ತಿದ್ದು ಹೆಚ್ಚು ಜನಸಂಖ್ಯೆ ಇರುವ ಭಾರತದಂತಹ ನಮ್ಮ ದೇಶದಲ್ಲಿ ಜನರು ಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸಿ ಜಾಗೃತರಾಗಬೇಕು. ಜಿಲ್ಲೆಯಲ್ಲಿ ನಾಯಿ ಕಡಿತದ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಕೆಎಫ್ಡಿ, ಹಂದಿ ಜ್ವರ, ಇಲಿಜ್ವರ, ಬ್ರುಸೆಲ್ಲೋಸಿಸ್, ಸ್ಕೈಬ್ಟೈಪಸ್ ಸೋಂಕುಗಳು ಸೇರಿದಂತೆ ಇತರೆ ಪ್ರಾಣಿಗಳಿಂದ ಹರಡುವ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸಿ, ಇತರರಲ್ಲೂ ಅರಿವು ಮೂಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಿಮ್ಸ್ ವಿಆರ್ಡಿಎಲ್ ಸಹ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಕೊಪ್ಪದ್ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುನೀಲ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವಿಡಿಎಲ್ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಹರ್ಷವರ್ಧನ್, ಸಿಮ್ಸ್ನ ಡಾ.ಪ್ರವೀಣ್ ಭಟ್, ಡಾ.ಕವಿತಾ ರಾಣಿ, ಪಶು ವೈದ್ಯಾಧಿಕಾರಿ ಡಾ.ರೇಖಾ, ನರ್ಸಿಂಗ್ ಕಾಲೇಜಿನ ಮೇರಿ, ಶುಶ್ರೂಕಾಧೀಕ್ಷಕಿ ಎಲಿಜಬೆತ್ , ಆರೋಗ್ಯ ಇಲಾಖೆಯ ದೊಡ್ಡವೀರಪ್ಪ, ಇತರೆ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
World Zoonosis Day ಪ್ರಾಣಿಜನ್ಯ ಸೋಂಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವೇ ಝೋನೊಸಸ್ ದಿನಾಚರಣೆ- ಡಾ.ನಟರಾಜ್
Date:
