District Legal Services Authority ಬಾಲಕಾರ್ಮಿಕ ಪದ್ದತಿ ಈ ಸಮಾಜದ ಅನಿಷ್ಠ ಹಾಗೂ ಕಳಂಕವಾಗಿದ್ದು, ಅದನ್ನು ಬೇರುಸಹಿತ ಕಿತ್ತುಹಾಕುವಲ್ಲಿ ಸಮಾಜದ ಎಲ್ಲಾ ಸ್ಥರದ ನಾಗರೀಕರು ಸಹಕರಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ಎಂ.ಎಸ್.ಅವರು ಹೇಳಿದರು.
ಜಿಲ್ಲಾ ಕಾರ್ಮಿಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ ಮತ್ತು ಶಿವಮೊಗ್ಗ ಹಾಲು ಒಕ್ಕೂಟ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮೇಲು-ಕೀಳು, ಜಾತಿ-ಮತ-ಪಂಥಗಳೆಲ್ಲವನ್ನು ಮೀರಿ, ಈ ಸಮಾಜದ ಪ್ರತಿ ವ್ಯಕ್ತಿಯೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು. ಶಿಕ್ಷಣ ಪಡೆದ ಎಲ್ಲರೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಮಾತ್ರವಲ್ಲ ಅವರು ಭವಿಷ್ಯದಲ್ಲಿ ನೆಮ್ಮದಿಯ ಜೀವನ ನಿರ್ವಹಣೆಗೆ ಸೂಕ್ತ ವಾತಾವರಣ ಕಲ್ಪಿಸುವಲ್ಲಿ ಮಾರ್ಗದರ್ಶಿಗಳಾಗಬೇಕೆಂದವರು ನುಡಿದರು.
ಅನೇಕ ಕಡೆಗಳಲ್ಲಿ ಇಂದಿಗೂ ಅಸಂಖ್ಯಾತ ಬಾಲಕರನ್ನು ಅತ್ಯಂತ ಕಡಿಮೆ ಕೂಲಿಗೆ ಬಳಸಿಕೊಂಡು ಅವರು ಬಾಲ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ. ಅಲ್ಲದೇ ಅವರ ಭವಿಷ್ಯಕ್ಕೆ ಪೆಟ್ಟುಕೊಡುತ್ತಿದ್ದಾರೆ. ಇದರಿಂದಾಗಿ ಅನೇಕ ಸಂದರ್ಭಗಳಲ್ಲಿ ಮಾನವ ಕಳ್ಳಸಾಗಾಣೆ ಪ್ರಕರಣಗಳೂ ಗೋಚರಿಸುತ್ತಿವೆ. ಮಕ್ಕಳು ಬಾಲಕಾರ್ಮಿಕರಾಗಿ ತಮ್ಮ ಅಮೂಲ್ಯ ಬಾಲ್ಯವನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಅನೇಕ ಕಾಯ್ದೆ-ಕಾನೂನುಗಳನ್ನು ಜಾರಿಗೊಳಿಸಿದ್ದಾಗ್ಯೂ ಈ ಅನಿಷ್ಟ ಇನ್ನೂ ಜೀವಂತವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ ಎಂದರು.
District Legal Services Authority ಬಾಲಕಾರ್ಮಿಕರನ್ನು ಕೆಲಸ-ಕಾರ್ಯದಿಂದ ಮುಕ್ತಿಗೊಳಿಸಿ, ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಬಾಲಕಾರ್ಮಿಕರನ್ನು ಬಳಸಿ ಉತ್ಪಾದಿಸುವ ಯಾವುದೇ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸುವುದನ್ನು ತಕ್ಷಣದಿಂದ ನಿಲ್ಲಿಸುವಂತೆ ಸೂಚಿಸಿದ ಅವರು ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಗುವಿನ ಹಕ್ಕು. ಅದನ್ನು ಪ್ರತಿ ಮಗುವಿಗೆ ದೊರಕಿಸಿಕೊಡುವುದು ಪ್ರತಿ ನಾಗರೀಕರ ಕರ್ತವ್ಯವಾಗಿದೆ ಎಂದರು.
ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು, ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳವುದು ಶಿಕ್ಷಾರ್ಹ ಅಪರಾಧ. ಕಾರ್ಮಿಕ ಪದ್ದತಿಯನ್ನು ಪ್ರೋತ್ಸಾಹಿಸುವ ಪೋಷಕರಿಗೂ ಕಾನೂನಿನಲ್ಲಿ ಶಿಕ್ಷೆಗೆ ಅವಕಾಶವಿರುವುದನ್ನು ಮರೆಯಬಾರದು. ಸಾರ್ವಜನಿಕರು ಅಂತಹ ಮಕ್ಕಳ ಶಿಕ್ಷಣ ಮತ್ತು ಪುನರ್ವಸತಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಮಕ್ಕಳನ್ನು ಕೇವಲ ಬಾಲಕಾರ್ಮಿಕ ಕಾನೂನು ದೃಷ್ಠಿಯಿಂದ ನೋಡದೆ ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಪೋಷಿಸಬೇಕು. ಪ್ರತಿ ಮಕ್ಕಳೂ ದೇಶದ ಭವಿಷ್ಯದ ಪ್ರತೀಕ. ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಿಂದ ವಿಮುಖರನ್ನಾಗಿ, ಅನ್ಯ ಕೆಲಸಗಳಲ್ಲಿ ತೊಡಗಿಸಿಕೊಂಡು ಶೋಷಿಸುವುದು ಆರೋಗ್ಯವಂತ ನಾಗರೀಕ ಸಮಾಜಕ್ಕೆ ಕಳಂಕವಾಗಿದೆ. – ಎಂ.ಪಿ.ವೇಣುಗೋಪಾಲ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಇಲಾಖೆ, ಶಿವಮೊಗ್ಗ.
ಬುದ್ದಿಜೀವಿಗಳನ್ನೇ ಹೊಂದಿರುವ ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿಹೆಚ್ಚು ಬಾಲ್ಯವಿವಾಹ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮಕ್ಕಳಿಗೆ ಕಳೆದು ಹೋದ ಅಮೂಲ್ಯ ಬಾಲ್ಯವನ್ನು ಮತ್ತೆ ದೊರಕಿಸಿಕೊಡುವುದು ಸಾಧ್ಯವಿಲ್ಲ. ಮಕ್ಕಳು ತಮ್ಮ ಬಾಲ್ಯವನ್ನು ಸಂಭ್ರಮಿಸುವಂತಾಗಬೇಕು. – ತಾಜುದ್ದೀನ್ಖಾನ್, ಅಧ್ಯಕ್ಷರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಶಿವಮೊಗ್ಗ.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9.30ಕ್ಕೆ ನಗರದ ಶಿವಪ್ಪನಾಯಕ ವರ್ತುಲದಿಂದ ಬಿ.ಹೆಚ್.ರಸ್ತೆಯ ಸರ್ಕಾರಿ ಪ್ರೌಢಶಾಲೆಯವರೆಗೆ ಸ್ಥಬ್ಧ ಚಿತ್ರದ ವಾಹನದ ಮೆರವಣಿ ಹಾಗೂ ಕರಪತ್ರಗಳ ಮೂಲಕ ಕಾನೂನು ಅರಿವು ಜಾಥಾಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ.ಮಂಜುನಾಥ ನಾಯಕ್ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ಖಾನ್, ಕಾರ್ಮಿಕ ನಿರೀಕ್ಷಕಿ ಶ್ರೀಮತಿ ಸುಖಿತಾ ಕೆ.ಸಿ., ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಘುನಾಥ್ಎ.ಎಸ್.ಮತ್ತಿತರರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ದಾದಾಪೀರ್ಮತ್ತಿತರರು ಉಪಸ್ಥಿತರಿದ್ದರು.
