Rotary Club Shivamogga ಹೆತ್ತವರ ಹಾಗೂ ಓದಿದ ಶಾಲೆಯ ಋಣವನ್ನು ತೀರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಪ್ರತಿಯೊಬ್ಬರಿಗೂ ಶಿಕ್ಷಣ ಬೇಕೇ ಬೇಕು ಶಿಕ್ಷಣದಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದು ವಿಐಎಸ್ಎಲ್ ಶಿಕಾರಿಪುರ ಕದಂಬ ಅಧ್ಯಕ್ಷರಾದ ಎ.ಎಸ್.ಶಿವಪ್ರಕಾಶ್ ಅಭಿಮತ ವ್ಯಕ್ತಪಡಿಸಿದರು.
ತೊಗರ್ಸಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನಲಿ-ಕಲಿ ಟೇಬಲ್, ಕುರ್ಚಿ, ಬೆಂಚ್ ಹಾಗೂ ಶಿಕ್ಷಣ ಸಾಮಗ್ರಿಗಳನ್ನ ವಿತರಿಸಿ ಮಾತನಾಡಿದ ಅವರು, ಬಾಲ್ಯದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಒಳ್ಳೆಯ ಸಂಸ್ಕಾರಯುತವಾದ ವಿದ್ಯಾರ್ಥಿಗಳಾಗಿ ಹೊರ ಬರುತ್ತಾರೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ. ಅವರ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಕರ್ತವ್ಯ. ಶಿಕ್ಷಣಕ್ಕೆ ಪೂರಕವಾದ ವಾತಾವರಣವೂ ಕೂಡ ಅಷ್ಟೇ ಅಗತ್ಯ ಎಂದು ನುಡಿದರು.
ಇದೇ ಸಂದರ್ಭದಲ್ಲಿ ವಲಯ ಹತ್ತರ ಸಹಾಯಕ ಗವರ್ನರ್ ನಾಗರಾಜ್.ಎಸ್.ಆರ್ ಮಾತನಾಡಿ, ದಾನಿಗಳಿಂದ ನೀಡಿದ ವಸ್ತುಗಳು ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳು ಮೊದಲು ನೆಲದ ಮೇಲೆ ಕೂತು ಓದುವಾಗ ಇರುವ ಆಸಕ್ತಿಗಿಂತ, ಈಗ ನಲಿ ಕಲಿ ಕುರ್ಚಿಯ ಮೇಲೆ ಕೂತು ವಿದ್ಯಾಭ್ಯಾಸ ಮಾಡುವಾಗ ಆ ಮುಖದಲ್ಲಿ ಬದಲಾವಣೆಯನ್ನು ಕಾಣಬಹುದು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಸರ್ಕಾರದಿಂದ ಎಷ್ಟೇ ಸೌಲಭ್ಯಗಳು ಇದ್ದರೂ ಸಹ ಸಂಘ ಸಂಸ್ಥೆಗಳ ನೆರವು ತುಂಬಾ ಅಗತ್ಯ. ಈ ನಿಟ್ಟಿನಲ್ಲಿ ಇಂದು ಶಿಕಾರಿಪುರ ರೋಟರಿ ಕ್ಲಬ್ ನವರು ಶಿಕ್ಷಣಕ್ಕೆ ಒತ್ತು ನೀಡಿ ಬಹಳ ಪವಿತ್ರವಾದ ಕಾರ್ಯವನ್ನು ಮಾಡಿದ್ದಾರೆ ಎಂದು ನುಡಿದರು.
ಯು.ರವೀಂದ್ರನಾಥ್ ಐತಾಳ್, ಮಕ್ಕಳಿಗೆ ಶುಭಾಶಯ ತಿಳಿಸಿದರು. ಆರ್ ಎಂ ಬಿ ಅಧ್ಯಕ್ಷ ಹೆಚ್.ಎಸ್.ಮೋಹನ್ ಮಾತನಾಡಿ, ರೋಟರಿ ಕಂಪನಿ ಸ್ನೇಹ ಒಡನಾಟ ಹಾಗೂ ಸೇವೆಗೆ ಮಿಸಲಾಗಿದ್ದು, ಈಗ ಗ್ರಾಮಾಂತರ ಪ್ರದೇಶದಲ್ಲೂ ಸಹ ಇಂತಹ ಸೇವಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ನುಡಿದರು.
Rotary Club Shivamogga ಸಮಾರಂಭದಲ್ಲಿ ಎಸ್.ಪಿ.ಶಂಕರ್, ಆನಂದ್, ರಂಗೇಗೌಡ, ಕಾರ್ಯದರ್ಶಿ ವೀರೇಂದ್ರವಾಲಿ, ಮುಖ್ಯೋಪಾಧ್ಯಯರಾದ ಬಸವರಾಜಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ್ ಜೋಗಿಹಳ್ಳಿ, ಮನೋಜ್ ಗೌಳಿ, ಹುರುಳಿ ಬಸವರಾಜ್, ದಾನಿಗಳಾದ ಪುಷ್ಪ, ಪಿ ಓ ಶಿವಕುಮಾರ್, ಹಾಲಪ್ಪ ಉಳ್ಳೆಹಳ್ಳಿ ಉಪಸ್ಥಿತರಿದ್ದರು.