KMF Nandini ಪ್ರಸ್ತಾಪಿತ ನಂದಿನಿ ಹಾಲಿನ ಬೆಲೆ ಅಂದಾಜು 5 ರೂಪಾಯಿ ದರ ಏರಿಕೆ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ (ಕೆಎಸ್ಎಚ್ಎ) ವಿರೋಧ ವ್ಯಕ್ತಪಡಿಸಿದೆ.
ಈ ಸಂಬoಧ ರಾಜ್ಯ ಸರಕಾರ ಹಾಗು ಕರ್ನಾಟಕ ಹಾಲು ಮಹಾಮಂಡಳ (ಕೆ.ಎಂ.ಎಫ್) ಗಳಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಶ್ರೀ ಜಿ.ಕೆ ಶೆಟ್ಟಿ, ಒಂದೊಮ್ಮೆ ದರ ಹೆಚ್ಚಳ ಮಾಡಿದರೆ ಹೋಟೆಲ್ ಉದ್ಯಮದ ಮೇಲೆ ಅದು ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಕಾಫಿ ಪುಡಿ ದರ ಆಕಾಶಕ್ಕೇರಿದೆ. ಈಗ ಹಾಲಿನ ಬೆಲೆ ಹೆಚ್ಚಳಗೊಂಡರೆ ಚಹಾ, ಕಾಫಿ ಯಂತಹ ನಾನಾ ಬಿಸಿ ಪಾನೀಯಗಳ ಬೆಲೆ ಏರಿಕೆ ಹೋಟೆಲ್ ಮಾಲೀಕರಿಗೆ ಅನಿವಾರ್ಯವಾಗಲಿದೆ. ಇದು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿರುವ ಹಾಗು ಸರಕಾರ ಹಾಗು ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಮಟ್ಟದ ತೆರಿಗೆ ಮೂಲವಾಗಿರುವ ಹೋಟೆಲ್ ಉದ್ಯಮ ಕ್ಷೇತ್ರಕ್ಕೆ ಕಂಟಕ ಪ್ರಾಯವಾಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಹೋಟೆಲ್ ಗಳು ತಮ್ಮ ಗ್ರಾಹಕರಿಗೆ ಆಹಾರ ಸುರಕ್ಷತಾ ನೀತಿಗೆ ಅನುಗುಣವಾಗಿ ಎಲ್ಲ ಶುಚಿತ್ವ ಹಾಗು ಗುಣಮಟ್ಟದ ನೀತಿಗಳನ್ನು ಅನುಸರಿಸುತ್ತಾ ಗುಣಮಟ್ಟದ ಚಹಾ, ಕಾಫಿ, ಹಾಗು ಇತರ ಪಾನೀಯಗಳನ್ನು ಒದಗಿಸುತ್ತವೆ. ಒಚಿದೊಮ್ಮೆ ಹಾಲಿನ ದರ ಹೆಚ್ಚಳಗೊಂಡರೆ, ಇವುಗಳ ಬೆಲೆ ಏರಿಕೆ ಅನಿವಾರ್ಯವಾಗಲಿದೆ. ಆಗ ಗ್ರಾಹಕರು ಅಗ್ಗದ ದರದಲ್ಲಿ ದೊರೆಯುವ ಆದರೆ ಯಾವುದೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸದೆ ಮಾರಾಟ ಮಾಡಲಾಗುವ ಚಹಾ, ಕಾಫಿ ಸೇವನೆ ಆರಂಭಿಸಬಹುದು.
ಇದು ಸಾರ್ವಜನಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಪ್ರತಿಕೂಲ ಪರಿಣಾಮ ಬೀರಬಹುದು ಎಂದು,” ಅವರು ಎದ್ಚರಿಸಿದ್ದಾರೆ.
ಸರಕಾರ ಸಾರ್ವಜನಿಕ ಆರೋಗ್ಯ ಮತ್ತು ಹೋಟೆಲ್ ಉದ್ಯಮದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಹಾಲಿನ ಬೆಲೆ ಏರಿಕೆ ಪ್ರಸ್ತಾಪವನ್ನು ತಕ್ಷಣ ಕೈ ಬಿಡುವಂತೆ ಅವರು ಆಗ್ರಹಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 98440 06736 ಸಂಪರ್ಕಿಸಬಹುದು