Sahyadri Narayana Hospital ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿಆರೋಗ್ಯ ಸೇವೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ವೈದ್ಯರು ಹಾಗೂ ಆರೊಗ್ಯ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ನಿರ್ಮಲ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ನಿರ್ಮಲಾ ಎಚ್.ಟಿ, ಜ್ಯೋತಿ ಪಾಲಿ ಕ್ಲಿನಿಕ್ನ ಸ್ತ್ರೀರೋಗ ತಜ್ಞೆ ಡಾ. ವಿಮಲಾ ಶೆಟ್ಟಿ, ಶಿವಮೊಗ್ಗ ಐಎಂಎ ಮಹಿಳಾ ವೈದ್ಯರ ಘಟಕದ ಅದ್ಯಕ್ಷೆ ಸ್ತ್ರೀರೋಗ ತಜ್ಞೆ ಡಾ. ವಿಶಾಲಾಕ್ಷಿ ಮೂಗಿ, ಕೋಟೆ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿ ರೂಪಾ ಎಚ್.ಜಿ, ಹಾಗೂ ಆಶಾ ಕಾರ್ಯಕರ್ತೆ ಭಾಗ್ಯ ಬಿ.ಆರ್. ಸನ್ಮಾನ ಸ್ವೀಕರಿಸಿದರು.
ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸಿ ಕುಟುಂಬ ಮತ್ತು ಮಕ್ಕಳ ಕ್ಷೇಮಕ್ಕೆ ಆದ್ಯತೆ ಕೊಡುತ್ತಾರೆ. ಆದರೆ ಅವರು ತಮ್ಮ ದೈಹಿಕ ಮತ್ತು ಮಾನಸಿಕ ಕ್ಷೇಮವನ್ನು ಗಮನಕ್ಕೆ ತೆಗೆದುಕೊಳ್ಳುವುದು ಅಗತ್ಯ, ಇದರಿಂದ ಅವರು ತಮ್ಮ ಕುಟುಂಬದ ಜನರನ್ನು ಚೆನ್ನಾಗಿ ನೋಡಿಕೊಳ್ಳಲು ಮತ್ತು ತಮ್ಮ ವೃತ್ತಿಯಲ್ಲಿ ಉತ್ತಮವಾಗಿ ಯಶಸ್ವಿಯಾಗಲು ಸಾಧ್ಯ, ಎಂದು ಡಾ. ವಿಶಾಲಕ್ಷಿ ಮೂಗಿ ಹೇಳಿದರು.
ಡಾ. ವಿಶಾಲಕ್ಷಿ ಅವರು, “ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ, ಕೆಲವೊಮ್ಮೆ ಪುರುಷರಿಗಿಂತಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ತಮ್ಮ ಆರೋಗ್ಯವನ್ನು ಕಡೆಗಣಿಸಿದರೆ, ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಾಧ್ಯವಾಗದು. ಮಹಿಳೆಯರು ಆರೋಗ್ಯವಂತರಾಗಿದ್ದರೆ, ಅವರು ದೇಶವನ್ನೇ ಆಳುವ ಸಾಮರ್ಥ್ಯ ಹೊಂದಿರುತ್ತಾರೆ,” ಎಂದು ತಿಳಿಸಿದರು. ಮಹಿಳಾ ದಿನಾಚರಣೆಯ ಮಹತ್ವ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು; ಮಹಿಳಾ ಹಕ್ಕುಗಳ ಮತ್ತು ಶಿಕ್ಷಣದ ಬಗ್ಗೆ ನಿರಂತರ ಜಾಗೃತಿಯ ಅಗತ್ಯವಿದೆ. “ಶಿಕ್ಷಣದಿಂದ ಜ್ಞಾನ ಬರುತ್ತದೆ, ಮಹಿಳೆ ಶಿಕ್ಷಣ ಪಡೆದರೆ ಮಾತ್ರ ತನ್ನ ಹಕ್ಕುಗಳನ್ನು ಅರಿತುಕೊಳ್ಳಬಲ್ಲಳು” ಎಂದರು.
Sahyadri Narayana Hospital ಮಹಿಳೆಯರ ಆರೋಗ್ಯದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಎಸ್ ಎಂ ಎನ್ ಎಚ್ನ ವೈದ್ಯಕೀಯ ಆಂಕೋಲೊಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ, ಮಹಿಳೆಯರು ಪ್ರತಿದಿನವೂ ಕನಿಷ್ಠ 30 ನಿಮಿಷ ವ್ಯಾಯಾಮಕ್ಕೆ ಮುಡಿಪಾಗಬೇಕೆಂದು ಸಲಹೆ ನೀಡಿದರು. ಅವರು ದಿನನಿತ್ಯದ ಕೆಲಸಗಳ ಕಾರಣಗಳನ್ನು ನೀಡದೆ, ಆರೋಗ್ಯಕ್ಕಾಗಿ ಕೆಲವು ಬದಲಾವಣೆಗಳನ್ನು ಅಥವಾ ಕೆಲವು ತ್ಯಾಗಗಳನ್ನು ಮಾಡಿ ಇದಕ್ಕಾಗಿ ಸಮಯ ಹೊಂದಿಸ ಬೇಕೆಂದು ಹೇಳಿದರು. “ಒಂದು ಧಾರಾವಾಹಿ ನೋಡುವುದನ್ನು ತ್ಯಜಿಸುವದರ ಮೂಲಕ ಅಥವಾ ಅರ್ಧ ಗಂಟೆ ಬೇಗ ಎದ್ದು ವ್ಯಾಯಾಮ ಮಾಡುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸೂರ್ಯ ನಮಸ್ಕಾರ ಅಥವಾ ನೆಲದ ಮೇಲೆ ಮಾಡುವ ಸರಳ ವ್ಯಾಯಾಮಗಳು ಕೂಡ ಉತ್ತಮ ಆಯ್ಕೆಯಾಗಬಹುದು” ಎಂದು ಅವರು ಸಲಹೆ ನೀಡಿದರು. ಅದರೊಂದಿಗೆ, ಮಹಿಳೆಯರು ತಮ್ಮ ನಾಯಕತ್ವದ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕೆಂದು, ಅವಕಾಶ ಬಂದಾಗ ಅದನ್ನು ಸ್ವೀಕರಿಸಬೇಕೆಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ. ಜಾನ್, ಡಾ. ರೇಖಾ ಟಿ.ಎಸ್, ಡಾ. ರಶ್ಮಿ ವೈಧ್ಯ, ಡಾ. ನಿವೇದಿತಾ ಹೆಗಡೆ, ಡಾ. ಆಶಾಶ್ರಿ ಉಪಾಧ್ಯ, ಡಾ. ಮಿಸ್ಬಾ ಎಚ್. ನಜಮ್, ಡಾ. ರಶ್ಮಿ ಎಚ್, ಡಾ. ಸ್ಮಿತಾ ಟಿ.ಎಂ, ಡಾ. ಸುಜಾತಾ ಕೆ. ಮಾರ್ಕೇಟಿಂಗ್ ಜನರಲ್ ಮ್ಯಾನೇಜರ್ ರಾಜಸಿಂಗ್ ಎಸ್.ವಿ., ಮಾರ್ಕೆಟಿಂಗ್ ಮ್ಯಾನೇಜರ್ ಶೈಲೇಶ್ ಎಸ್.ಎನ್., ಮತ್ತಿತರರು ಭಾಗವಹಿಸಿದರು.
ಇದಲ್ಲದೆ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೆ.ಸಿ.ಐ ಕ್ಲಬ್, ಹೊಯ್ಸಳ ಕ್ಲಬ್, ಧರ್ಮಸ್ಥಳ ಸಂಘ, ಶಾಶ್ವತಿ ಮಹಿಳಾ ಸಂಘ, ಸಹ್ಯಾದ್ರಿ ಮಹಿಳಾ ಪಟ್ಟಣ ಬ್ಯಾಂಕ್ ಸಮಿತಿ ಹಾಗೂ ಆಶಾ ಕಾರ್ಯಕರ್ತೆಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.