Chamber Of Commerce ಉತ್ತಮ ಸಂಗೀತದಿಂದ ಧ್ವನಿಯ ಸಂಸ್ಕರಣವಾಗುವುದರ ಜೊತೆಗೆ ಸಂಸ್ಕಾರ ದೊರೆಯುತ್ತದೆ. ಸಂಗೀತ ಮನುಷ್ಯನ ಮನಸ್ಸಿಗೆ ಮತ್ತುತರುವ ದಿವ್ಯ ಔಷಧ. ಒಳ್ಳೆಯ ಸಂಗೀತವನ್ನು ಕೇಳುವುದರ ಮುಖಾಂತರ ನಮಗೆ ಮಾನಸಿಕ ಖಿನ್ನತೆ ಕಡಿಮೆಯಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್ ಅಭಿಮತ ವ್ಯಕ್ತಪಡಿಸಿದರು.
ನಗರದ ಉಷಾ ನರ್ಸಿಂಗ್ ಹೋಂ ಬಳಿಯ ಬ್ಲಡ್ ಬ್ಯಾಂಕ್ ಹಾಲ್ ನಲ್ಲಿ ಭಾನುವಾರ ಸಪ್ತಸ್ವರ ಟ್ರಸ್ಟ್ ರಿಜಿಸ್ಟರ್ ಶಿವಮೊಗ್ಗ, ಸುಚ ಮ್ಯೂಸಿಕ್ ಆಯೋಜಿಸಿರುವ ಜಿಲ್ಲಾ ಮಟ್ಟದ ಕನ್ನಡ ಹಾಗೂ ಹಿಂದಿ ಕರೋಕೆ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ತಂತ್ರಜ್ಞಾನ ಹೆಚ್ಚಾದಂತೆ ಕರೋಕೆ ಗಾಯನ ಕಲಾವಿದರು ಹೆಚ್ಚಾಗುತ್ತಿದ್ದಾರೆ. ಉತ್ತಮವಾದ ಅಭ್ಯಾಸದಿಂದ ಹಾಗೂ ಸತತ ಪರಿಶ್ರಮದಿಂದ ಮಾತ್ರ ಆ ಸಂಗೀತವನ್ನು ಒಲಿಸಿಕೊಳ್ಳಲು ಸಾಧ್ಯ. ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಜನ ಕಲಾವಿದರು ಕರೋಕೆ ಗಾಯನದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ ಎಂದರು.
ಬಾಲ್ಯದಲ್ಲೇ ಮಕ್ಕಳಿಗೆ ಸಂಗೀತದ ಅಭಿರುಚಿಯನ್ನ ಕಲಿಸಬೇಕು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಭೆ ಅನಾವರಣಗೊಳ್ಳುತ್ತದೆ. ಸೋಲು ಗೆಲುವು ನಂತರದ ಲೆಕ್ಕಾಚಾರ, ಆದ್ದರಿಂದ ಪ್ರತಿಯೊಬ್ಬ ಕಲಾವಿದರು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು.
Chamber Of Commerce ಶಿವಮೊಗ್ಗ ಜಿಲ್ಲೆಯ ಹಿರಿಯ ಕಲಾವಿದ ಭದ್ರಾವತಿ ವಾಸು ಅವರು ಮಾತನಾಡಿ, ತಾಳ, ಶ್ರುತಿ, ಸಂಗೀತ ಹಾಗೂ ಏರಿಳಿತಗಳನ್ನು ಮತ್ತು ಸಂಗತಿಗಳನ್ನು ಗಮನಿಸಬೇಕು. ಯಾವುದೇ ಹಾಡುಗಳನ್ನು ಅನುಭವಿಸಿ ಹಾಡಬೇಕು. ಹಾಡುಗಳು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರ ಜೊತೆಗೆ ಮನಸ್ಸಿಗೆ ಸದಾ ಲವಲವಿಕೆಯನ್ನು ಉಂಟುಮಾಡುತ್ತವೆ. ಒಳ್ಳೆಯ ಕಲಾವಿದನಿಗೆ ಸದಾ ವೇದಿಕೆ ಸಿದ್ಧವಾಗಿರುತ್ತದೆ. ಉತ್ತಮವಾದ ಅಭ್ಯಾಸದಿಂದ ಸಂಗೀತ ಮೈಗೂಡಿಕೊಳ್ಳುತ್ತದೆ ಎಂದು ನುಡಿದರು.
ಕಾರ್ಯದರ್ಶಿ ಚಂದ್ರಶೇಖರ್ ಭಟ್ ಮಾತನಾಡಿ, ಬೆಳಿಗ್ಗೆಯಿಂದ ಸಂಜೆಯವರೆಗಿನ ಈ ಕಾರ್ಯಕ್ರಮ, ಹೊಸ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಿದ್ದು, ವೇದಿಕೆಯ ಭಯ ಹೋಗುವುದರ ಜೊತೆಗೆ ಕಲಾಸಕ್ತಿ ಮೈಗೂಡುತ್ತದೆ ಎಂದು ನುಡಿದರು.
ಸಮಾರಂಭದಲ್ಲಿ ಶಿವಕುಮಾರ್, ರಘು ಭಟ್, ಹಾಗೂ ಗಾಯಕರು, ಸುಗಮ ಸಂಗೀತ ಪರಿಷತ್ತಿನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು