Hanuman Jayanti ಭಾವ ಬುದ್ಧಿ ಮತ್ತು ದೇಹ ಮಟ್ಟದಲ್ಲಿ ಬಲ ಇದ್ದರೂ ಮೌಲ್ಯ ಪ್ರಜ್ಞೆ ಕಳೆದುಕೊಳ್ಳದೆ ಇರುವವರು ಮಾತ್ರ ಪರಿಪೂರ್ಣ ವ್ಯಕ್ತಿ ಎನ್ನಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ್ ಅಭಿಪ್ರಾಯ ಪಟ್ಟರು.
ರಾಜನಹಳ್ಳಿ ಹನುಮಂತಪ್ಪನವರ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಶ್ರೀ ಹನುಮ ಜಯಂತಿ ಹಾಗೂ ರಥೋತ್ಸವ ನಿಮಿತ್ತವಾಗಿ ಏರ್ಪಡಿಸಿದ್ದ ಆಧ್ಯಾತ್ಮಿಕ ಸಭೆಯ ಉಪನ್ಯಾಸ ಮಾಡುತ್ತಾ ಪುರಾಣೇತಿಹಾಸದ ದೇವತಾ ಪಾತ್ರಗಳಲ್ಲಿ ಶ್ರೀ ಆಂಜನೇಯನೇ ಇಂತಹ ಪರಿಪೂರ್ಣ ವ್ಯಕ್ತಿತ್ವವುಳ್ಳವನಾಗಿದ್ದು ಭಯ ಶೋಕ ಮೋಹಗಳಿಂದ ನಿವೃತ್ತನಾದ ಆನಂದ ಸ್ಥಿತಿಯನ್ನು ತಾನೂ ಹೊಂದಿ ಇತರರಿಗೂ ಕರುಣಿಸಬಲ್ಲವನಾದ ದೇವತೆಯೇ ಹನುಮಂತ. ಇಂತಹ ವಾಯುಪುತ್ರ ಕೇಸರಿ ತನಯ ರುದ್ರಾಂಶ ಸಂಭೂತ ಆಂಜನೇಯನ ಮಹತ್ತರ ಗುಣ ವಿಶೇಷಗಳಲ್ಲಿ ಸ್ವಲ್ಪ ಅಂಶವಾದರೂ ನಾವು ಅಳವಡಿಸಿಕೊಂಡು ಆಚರಿಸಿದಲ್ಲಿ ಅದೇ ನಿಜವಾದ ಹನುಮನ ಆರಾಧನೆ, ತನ್ಮೂಲಕ ಪರಿಪೂರ್ಣತೆಯುತ್ತ ನಾವು ಸಾಗಲು ಮಾರ್ಗ ಸುಗಮ ಎಂದರು.
ದಾನ ಧರ್ಮಗಳಿಗೆ ಪ್ರಖ್ಯಾತರಾಗಿದ್ದ ಕೀರ್ತಿ ಶೇಷ ರಾಜನಹಳ್ಳಿ ಹನುಮಂತಪ್ಪನವರು ದಾವಣಗೆರೆಯ ಧಾರ್ಮಿಕ ಅಧ್ಯಾತ್ಮಿಕ ಔದ್ಯಮಿಕ ಕೈಗಾರಿಕಾ ಹಾಗೂ ಶೈಕ್ಷಣಿಕ ಅಭಿವೃದ್ಧಿಯಲ್ಲಿ ನೀಡಿದ ದಾನ, ಮಾಡಿದ ಕಾರ್ಯಗಳು ಇಂದಿಗೂ ಸ್ಮರಣೀಯ ಮತ್ತು ಅನುಕರಣೀಯ, ಆದರ್ಶ ಎಂದರು.
Hanuman Jayanti ರಾಜನಹಳ್ಳಿ ವಂಶಸ್ಥರಾದ ಆರ್ ಎಸ್ ಹನುಮಂತರಾಜು, ಆರ್ ಆರ್ ರಮೇಶ್ ಬಾಬು ಆರ್ ಡಿ ಬದರೀನಾಥ್, ಆರ್ ಆರ್ ರಘುನಾಥ್ ಮುಂತಾಗಿ ರಾಜನಹಳ್ಳಿ ವಂಶಸ್ಥರು, ರಾಜನಹಳ್ಳಿ ಚಾರಿಟಬಲ್ ಟ್ರಸ್ಟ್ ನವರು ಆರ್ಯವೈಶ್ಯ ರಾಜನಹಳ್ಳಿ ಸಂಘದವರು ಉಪಸ್ಥಿತರಿದ್ದರು.
ಎಚ್ ಬಿ ಮಂಜುನಾಥರನ್ನು ಫಲ ಸಮರ್ಪಿಸಿ ಗೌರವಿಸಿದರು, ನಂತರ ಶ್ರೀ ಆಂಜನೇಯ ಸ್ವಾಮಿಯ ಸಾಲಂಕೃತ ರಥೋತ್ಸವವೂ ಪ್ರಮುಖ ಬೀದಿಗಳಲ್ಲಿ ನೆರವೇರಿತು.