Shivamogga DC ಶಿವಮೊಗ್ಗ ಜಿಲ್ಲೆಯಲ್ಲಿ ಕುಷ್ಟರೋಗದ ಕುರಿತು ಹೆಚ್ಚಿನ ಅರಿವು ಮೂಡಿಸುವುದು ಹಾಗೂ ಈ ರೋಗವನ್ನು ನಿರ್ಮೂಲನೆಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸಂಬಂಧಿಸಿದ ಅಧಿಕರಿಕಾರಿಗಳಿಗೆ ತಿಳಿಸಿದರು.
ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಸ್ಪರ್ಶ್’ ಕುಷ್ಟರೋಗ ಜಾಗೃತಿ ಅಭಿಯಾನ-2024 ಕುರಿತಾದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮಾಗಾಂಧೀಜಿಯವರ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ರಾಜ್ಯದಾದ್ಯಂತ ಕುಷ್ಟರೋಗ ನಿರ್ಮೂಲನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಜನವರಿ ಮಾಹೆಯಲ್ಲಿ ಕುಷ್ಟೋಗ ವಿರೋಧಿ ಮಾಸಾಚರಣೆ ಹಾಗೂ ಜ.30 ರಿಂದ ಫೆ.13 ರವರೆಗೆ ‘ಸ್ಪರ್ಶ್’ ಕುಷ್ಟರೋಗ ಜಾಗೃತಿ ಅಭಿಯಾನ-2024 ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮವನ್ನು ಜಾರಿಗೊಳಿಸಬೇಕು ಎಂದರು.
ಕುಷ್ಟರೋಗದ ಕುರಿತು ಎಲ್ಲೆಡೆ ಅರಿವು ಮೂಡಿಸಬೇಕು. ತಾಲ್ಲೂಕುಗಳಲ್ಲಿ ರೋಗ ಪತ್ತೆ ಹೆಚ್ಚಬೇಕು. ಗ್ರಾಮಸಭೆಗಳಲ್ಲಿ ಗ್ರಾಮದ ಮುಖ್ಯಸ್ಥರು ಸೇರಿದಂತೆ ಎಲ್ಲರೂ ಈ ರೋಗ ಕಳಂಕವಲ್ಲ ಎಂಬ ಬಗ್ಗೆ ಅರಿವು ಮೂಡಿಸಬೇಕು. ಕುಷ್ಟರೋಗದ ಕುರಿತು ಮಾಹಿತಿ, ಶಿಕ್ಷಣ ಸಂವಹನ ಕಾರ್ಯಚಟುವಟಿಕೆಗಳು ಹೆಚ್ಚಬೇಕು. ಹಾಗೂ ಹೆಚ್ಚು ಪ್ರಕರಣಗಳು ಇರುವೆಡೆ, ಸಂಶಯ ಇರುವೆಡೆ ತಪಾಸಣೆ ಮತ್ತು ಪರೀಕ್ಷೆಯನ್ನು ಮಾಡಬೇಕು. ಪ್ರಸ್ತುತ ಕುಷ್ಟರೋಗ ಇರುವವರಿಗೆ ಚಿಕಿತ್ಸೆಯನ್ನು ಸಮರ್ಪಕವಾಗಿ ನೀಡಬೇಕು. ಹಾಗೂ ಮುಖ್ಯವಾಗಿ ರೋಗ ಹರಡುವಿಕೆಯನ್ನು ತಡೆಯಬೇಕು.
ಶಿಕಾರಿಪುರದಲ್ಲಿ ಹೆಚ್ಚಿನ ಪ್ರಕರಣಗಳಿದ್ದು, ಶಿಕಾರಿಪುರ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಜನನಿಭಿಡ ಪ್ರದೇಶಗಳಾದ ಬಸ್ಸ್ಟ್ಯಾಂಡ್, ಶಾಲೆಗಳು, ಹಾಸ್ಟೆಲ್ಗಳಲ್ಲಿ ಇಓ ಮತ್ತು ಬಿಇಓ ಸಹಯೋಗದಲ್ಲಿ ಅರಿವು ಕಾರ್ಯಕ್ರಗಳನ್ನು ಮಾಡಬೇಕು ಹಾಗೂ ಸರ್ವೇಕ್ಷಣೆ, ಪತ್ತೆ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸೂಚನೆ ನೀಡಿದರು.
Shivamogga DC ಡಿಎಲ್ಓ ಡಾ.ಕಿರಣ್ ಮಾತನಾಡಿ, ಈ ಬಾರಿ ‘ಕಳಂಕವನ್ನು ಕೊನೆಗೊಳಿಸಿ, ಘನತೆಯನ್ನು ಎತ್ತಿ ಹಿಡಿಯಿರಿ’ ಎಂಬ ಘೋಷವಾಕ್ಯದೊಂದಿಗೆ ಅಭಿಯಾನವನ್ನು ನಡೆಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 47 ಕುಷ್ಟರೋಗ ಪ್ರಕರಣಗಳಿದ್ದು 01 ಪ್ರಕರಣದಲ್ಲಿ ಮಾತ್ರ ಅಂಗವೈಕಲ್ಯತೆ ಇದೆ. ಆಶಾ ಅಂಗನವಾಡಿ ಕಾರ್ಯಕರ್ತೆಯರ ಮೂಲಕ, ಕೇಂದ್ರೀಕೃತ ಕುಷ್ಟರೋಗ ಅಭಿಯಾನ ಹಾಗೂ ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನದ ಮೂಲಕ ಕುಷ್ಟರೋಗವನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಹಾಗೂ ಅಂಗವೈಕಲ್ಯ ಆಗದಂತೆ ಕ್ರಮ ಹಾಗೂ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಕುಷ್ಟರೋಗವು ಎಂ.ಲೆಪ್ರೆ ಎಂಬ ರೋಗಾಣುವಿನಿಂದ ಬರುವ ಕಾಯಿಲೆ. ಇದು ನಿಧಾನಗತಿಯಲ್ಲಿ ಹರಡುವ ಸಾಂಕ್ರಾಮಿಕ ರೋಗ. ಇದರಿಂದ ಉಂಟಾಗುವ ಅಂಗವಿಕಲತೆಯಿಂದ ಈ ರೋಗಕ್ಕೆ ಸಾಮಾಜಿಕ ಕಳಂಕ ಅಂಟಿದೆ. ಆದರೆ ಕುಷ್ಟರೋಗ ಮುಟ್ಟುವುದು, ಜೊತೆಯಲ್ಲಿ ಇರುವುದರಿಂದ ಹರಡುವುದಿಲ್ಲ.
ಆದ್ದರಿಂದ ಕುಷ್ಟರೋಗದ ಕುರಿತು ಅರಿವು ಮೂಡಿಸಲು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜನರಲ್ಲಿ ಕುಷ್ಟರೋಗದ ಕುರಿತು ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಸ್ಪರ್ಶ್ ಕುಷ್ಟರೋಗ ಜಾಗೃತಿ ಆಂದೋಲನದ ಪೋಸ್ಟರ್ನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಡಿಹೆಚ್ಓ ಡಾ.ರಾಜೇಶ್ ಸುರಗಿಹಳ್ಳಿ, ಟಿಹೆಚ್ಓ ಗಳು, ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.