Karnataka Sanga Shivamogga ಬೆಂಗಳೂರಿನಲ್ಲಿನ ಒಬ್ಬ ವ್ಯಕ್ತಿ ನಾಡಿನ ಮೂಲೆ ಮೂಲೆಗೂ ಶಾಸ್ತ್ರೀಯ ಸಂಗೀತವನ್ನು ತಲುಪಿಸುವ ಪವಿತ್ರ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡು ಪ್ರಸಿದ್ಧರಾದವರೆಂದರೆ ಅವರು ಸಪ್ತಕ ಸಂಸ್ಥೆಯ ಜಿ.ಎಸ್.ಹೆಗಡೆಯವರು ಎಂದು ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್.ಸುಂದರ ರಾಜ್ ಅವರು ತಿಳಿಸಿದ್ದಾರೆ.
ವಿಜ್ಞಾನದ ವಿದ್ಯಾರ್ಥಿಯಾಗಿ, ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರೂ ಸಹ, ಸಂಗೀತದ ಮೇಲೆ ವಿಶೇಷ ಒಲವನ್ನು ಬೆಳೆಸಿಕೊಂಡು, ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿ ಇಂದಿಗೂ ಈ ಎರಡೂ ಕ್ಷೇತ್ರಗಳ ಬಗ್ಗೆ ಸೇವೆ ಸಲ್ಲಿಸುತ್ತಿರುವ ಅಪರೂಪದ ವ್ಯಕ್ತಿತ್ವ ಇವರದ್ದು.
ತಬಲಾ ಮಾಂತ್ರಿಕ ಎಸ್.ಎಂ.ಭಟ್, ಕಟ್ಟಿಗೆ ಇವರ ಶಿಷ್ಯತ್ವ ಪಡೆದು, ಖ್ಯಾತ ಸಂಗೀತಕಾರ ರಾಜೀವ್ ಪುರಂದರೆ ಅವರಿಂದ ಹಿಂದೂಸ್ಥಾನಿ ಸಂಗೀತ ಕಲಿತು ಅವರೊಬ್ಬ ತಬಲಾ ವಾದಕರಾಗಿಯೋ, ಸಂಗೀತಗಾರರಾಗಿಯೋ ಹೆಸರು ಗಳಿಸಬಹುದಿತ್ತು.
ಆದರೆ ಅದು ತಮ್ಮ ವ್ಯಯಕ್ತಿಕ ಬೆಳವಣಿಗೆಗೆ ಮಾತ್ರ ಎಂದರಿತು. ತಮ್ಮ ಇಡೀ ಜೀವನನವನ್ನು ಹಿಂದೂಸ್ಥಾನಿ ಸಂಗೀತ ಪ್ರಸಾರಕ್ಕೆ ಮುಡುಪಾಗಿಟ್ಟರು.
ಅವರ ಮೂಲ ಉದ್ದೇಶ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವುದು ಮತ್ತು ಹೆಸರಾಂತ ಕಲಾವಿದರನ್ನು ದೇಶದ ಮೂಲೆ ಮೂಲೆಗೂ ಕರೆದೊಯ್ದು ಕಾರ್ಯಕ್ರಮ ನಡೆಸುವುದು. ಈ ಎರಡರಲ್ಲೂ ಯಶಸ್ಸು ಸಾಧಿಸಿರುವ ಹೆಗಡೆಯವರದ್ದು ಭಗೀರಥ ಪ್ರಯತ್ನ. ಅದರಲ್ಲಿ ಯಶಸ್ಸನ್ನೂ ಕಂಡಿರುವುದೊಂದು ವಿಶೇಷ.
ಶಾಸ್ತ್ರಿಯ ಸಂಗೀತ ಅವರ ಉಸಿರಾಗಿದೆ. ಅದನ್ನು ಸದಾ ಜೀವಂತವಾಗಿರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಪುತ್ರ ಧನಂಜಯ ಸಹ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಗಾರನಾಗಿದ್ದು, “ ಔಟ್ ಲುಕ್ “ ಪತ್ರಿಕೆ ಇವರನ್ನು ಅತ್ಯುತ್ತಮ ಹಿಂದೂಸ್ಥಾನಿ ಗಾಯಕ ಎಂದು ಕರೆದಿದೆ. ಜಿ.ಎಸ್. ಹೆಗಡೆ ಅವರ ಪತ್ನಿ ಗೀತಾ ಸಹ ಇವರ ಯಶಸ್ಸಿನ ಹಿಂದೆ ಬೆನ್ನೆಲುಬಾಗಿದ್ದಾರೆ.
ಒಂದು ಅಚ್ಚರಿಯ ವಿಷಯವೆಂದರೆ, ಇದುವರೆಗೂ 499 ಸಂಗೀತ ಕಚೇರಿಗಳನ್ನು ಏರ್ಪಡಿಸಿ ದಾಖಲೆ ಸ್ತಾಪಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಯಾವ ಸಂಗೀತ ಕಚೇರಿಗೂ ಟಿಕೇಟು ಇಟ್ಟು ಏರ್ಪಡಿಸದೆ, ಶ್ರೋತೃಗಳಿಗೆ ಉಚಿತವಾಗ ಸಂಗೀತ ಸುಧೆಯನ್ನು ಹರಿಸಿದ್ದಾರೆ. ಬೆಂಗಳೂರು, ಮುಂಬೈ, ನಾಸಿಕ್, ಕೊಲ್ಲಾಪುರ, ನಾಂದೇಡ್, ಹೈದರಾಬಾದ್ ಮುಂತಾದೆಡೆ ಖ್ಯಾತ ಗಾಯಕರಿಂದ ಸಂಗೀತ ಕಚೇರಿ ಏರ್ಪಡಿಸಿದ್ದಾರೆ.
ಶಾಸ್ತ್ರೀಯ ಸಂಗೀತ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಇದುವರೆಗೆ ಹನ್ನೆರಡು ಲಕ್ಷ ರೂಪಾಯಿಗೂ ಮೀರಿ ನೀಡಿದ ವಿದ್ಯಾರ್ಥಿವೇತನ ವಿತರಿಸಿದ್ದಾರೆ. ಅಲ್ಲದೆ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಸಂಗೀತ ಪರಿಕರಗಳನ್ನು ಸಂಗೀತಗಾರರಿಗೆ ಕೊಡಿಸಿಕೊಟ್ಟಿದ್ದಾರೆ. ಗ್ರಾಮಾಂತರ ಮಟ್ಟದಲ್ಲಿ ನೂರಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ಏರ್ಪಡಿಸಿ, ಕಲಾವಿದರಿಗೆ ಸಪ್ತಕದ ಮೂಲಕ ಸಂಭಾವನೆ ನೀಡಿದ್ದಾರೆ. ನೂರಾರು ಸಂಗೀತಗಾರರನ್ನು ಸನ್ಮಾನಿಸಿ ಸಾರ್ಥಕತೆ ಪಡೆದಿದ್ದಾರೆ.
Karnataka Sanga Shivamogga ಅಷ್ಟೇ ಅಲ್ಲ, ಅಶಕ್ತ ಸಂಗೀತ ಕಲಾವಿದರಿಗೆ ಆರ್ಥಿಕ ಸಹಾಯ, ‘ಸಪ್ತ ಸಭಾಂಗಣ’ ವನ್ನು ಬೆಂಗಳೂರಿನಲ್ಲಿ ನಿರ್ಮಿಸಿ ಸಂಗೀತಗಾರರಿಗೆ ವೇದಿಕೆ ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ಮೂರುಲಕ್ಷಕ್ಕೂ ಹೆಚ್ಚು ಹಣವನ್ನು ಕೋವಿಡ್ ಸಂತ್ರಸ್ತರಿಗಾಗಿ ವೆಚ್ಚ ಮಾಡಿದ್ದಾರೆ. ಇವರ ಕಾರ್ಯ ಚಟುವಟಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವು ನೀಡುತ್ತಿರುವುದು ಜಿ.ಎಸ್.ಹೆಗಡೆಯವರಿಗೆ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಲು ಹುಮ್ಮಸ್ಸು ತುಂಬಿದೆ ಎಂದು ತಿಳಿಸಿದ್ದಾರೆ.
ಇಂತಹ ಒಬ್ಬ ಪ್ರತಿಭಾನ್ವಿತ ವ್ಯಕ್ತಿ, ಸಂಗೀತ ಕ್ಷೇತ್ರದ ಹರಿಕಾರ ಸಪ್ತಕದ ಜಿ.ಎಸ್.ಹೆಗಡೆ ಅವರನ್ನು ಕರ್ನಾಟಕ ಸಂಘ ದಿನಾಂಕ 08 ರಂದು ಸಂಜೆ 5:30ಕ್ಕೆ ಸನ್ಮಾನಿಸುತ್ತಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಂ.ಎನ್. ಸುಂದರ ರಾಜ್ ಅವರು ಕೋರಿದ್ದಾರೆ