Rotary Club Shivamogga ವಿದ್ಯಾರ್ಥಿಗಳು ಬಾಲ್ಯದಿಂದಲೇ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು. ಪ್ರತಿ ದಿನ ಯೋಗ, ವ್ಯಾಯಾಮ ಅಭ್ಯಾಸ ಮಾಡಬೇಕು ಎಂದು ಡಾ. ಬಿ.ಸುರೇಶ್ ಹೇಳಿದರು.
ಶಿವಮೊಗ್ಗ ನಗರದ ರೋಟರಿ ಪೂರ್ವ ಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಐಎಂಎ ಹಾಗೂ ಆರ್ಥೋಪೆಡಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತೆ ಜಾಗೃತಿ, ಸಿಪಿಆರ್ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಅವಶ್ಯಕ. ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ರಸ್ತೆ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ರಸ್ತೆ ಅಪಘಾತಗಳು ತಪ್ಪಿಸಬಹುದು. ವಿದ್ಯಾರ್ಥಿಗಳು ಪಾಲಕರಿಗೆ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಕಾನೂನಿನ ನಿಯಮದಂತೆ ವಾಹನ ಚಲಾವಣೆ ಮತ್ತು ಅರ್ಹತೆ ನಂತರ ವಾಹನ ಚಲಾಯಿಸಬೇಕು ಎಂದರು.
ರೋಟರಿ ಶಿವಮೊಗ್ಗ ಪೂರ್ವ ಆಂಗ್ಲ ಶಾಲೆಯ ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ, ಸಂಚಾರಿ ನಿಯಮಗಳು ಹಾಗೂ ಸಿಪಿಆರ್ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ರಸ್ತೆಯಲ್ಲಿ ಅಪಘಾತವಾದಾಗ ಪ್ರಥಮ ಚಿಕಿತ್ಸೆ ಮಾಡಿ ಆಂಬುಲೆನ್ಸ್ ಗೆ ಕರೆ ಮಾಡಿ ಸಹಾಯ ಮಾಡಬೇಕು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಹಾಗೂ ಅರಿವು ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದೆ. ವಿದ್ಯಾರ್ಥಿಗಳು ಪೋಷಕರಿಗೆ ಸಂಚಾರಿ ನಿಯಮಗಳ ಪಾಲನೆ ಮಹತ್ವ ತಿಳಿಸಬೇಕು ಎಂದರು.
Rotary Club Shivamogga ಇದೇ ಸಂದರ್ಭದಲ್ಲಿ ಸಂಚಾರ ನಿಯಮಗಳ ಬಗ್ಗೆ ಹಾಗೂ ಅಪಘಾತವಾದಾಗ ಪ್ರಥಮ ಚಿಕಿತ್ಸೆ ಹೇಗೆ ಕೊಡಬೇಕೆಂದು ಪಿಪಿಟಿ ಮುಖಾಂತರ ವಿಡಿಯೋ ತೋರಿಸಿ ಮತ್ತು ಸಿಪಿಆರ್ ರಸ್ತೆ ಅಪಘಾತದಲ್ಲಿ ಯಾರಾದರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರೆ ಅವರಿಗೆ ಪ್ರಥಮ ಚಿಕಿತ್ಸೆಯಾಗಿ ಹೇಗೆ ಉಸಿರಾಡುವುದು ಹಾಗೂ ಹೃದಯಬಡಿತವನ್ನು ಸರಿ ಮಾಡುವುದನ್ನು ಸಿಪಿಆರ್ ಮುಖಾಂತರ ಹೇಗೆ ಮಾಡಬೇಕೆಂದು ಉದಾಹರಣೆ ಕೊಟ್ಟು ವಿವರಿಸಲಾಯಿತು.
ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ. ಅರುಣ್ ಆರೋಗ್ಯ ಜಾಗೃತಿಯ ಮಾಹಿತಿ ನೀಡಿದರು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಶಾಲೆಯ ಖಜಾಂಚಿ ಜಿ.ವಿಜಯ್ ಕುಮಾರ್, ಶಾಲೆಯ ಕಾರ್ಯದರ್ಶಿ ರಾಮಚಂದ್ರ ಎಸ್ ಸಿ, ಜಂಟಿ ಕಾರ್ಯದರ್ಶಿ ನಾಗವೇಣಿ, ರೋಟರಿ ಸದಸ್ಯರಾದ ಮಂಜುನಾಥ್ ಕದಂ, ಪ್ರಜ್ವಲ್ ಸುರೇಂದ್ರ ಕೋಟ್ಯಾನ್, ಶಾರದಾ ಶೇಷಗಿರಿ ಗೌಡ, ದಿವ್ಯ ಪ್ರವೀಣ್ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.