ವಿಶ್ವದಾದ್ಯಂತ ಆತಂಕ ಮೂಡಿಸಿರುವ ಕೋವಿಡ್ ವೈರಾಣುವಿನ ಓಮಿಕ್ರಾನ್ ರೂಪಾಂತರಿ ಭಾರತಕ್ಕೂ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾದಿಂದ ದುಬೈ ಮೂಲಕ ಬೆಂಗಳೂರಿಗೆ ಬಂದ ಒಬ್ಬರು ಹಾಗೂ ಬೆಂಗಳೂರು ನಿವಾಸಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಓಮಿಕ್ರಾನ್ ನಮ್ಮ ದೇಶಕ್ಕೆ ಬಂದಿರುವುದು ಅಚ್ಚರಿಯಲ್ಲ. ಭಯಪಡುವ ಅಗತ್ಯವಿಲ್ಲ. ಯಾವುದೇ ಕೋವಿಡ್ ವೈರಸ್ ಇದ್ದರೂ ತಡೆಗಟ್ಟುವ ಕ್ರಮಗಳು ಒಂದೇ. ಆದಷ್ಟು ಬೇಗ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಬೇಕು ಎಂದು ಕೋವಿಡ್ ತಾಂತ್ರಿಕ ಸಮಿತಿ ಸದಸ್ಯ ಹಾಗೂ ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸುದರ್ಶನ ಬಲ್ಲಾಳ್ ಅವರು ತಿಳಿಸಿದ್ದಾರೆ.
66 ವರ್ಷದ ದಕ್ಷಿಣ ಆಫ್ರಿಕಾ ಪ್ರಜೆ ನ.20ರಂದು ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ವೇಳೆ ಪಾಸಿಟಿವ್ ಬಂದಿತ್ತು. ಅವರನ್ನು ಹೋಟೆಲ್ ನಲ್ಲಿ ಐಸೋಲೇಷನ್ ಇರಿಸಲಾಗಿತ್ತು. ಬಳಿಕ ಆ ವ್ಯಕ್ತಿ ಖಾಸಗಿಯಾಗಿ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿತ್ತು. ಆ ವರದಿಯೊಂದಿಗೆ ನ.27ರಂದು ಆ ವ್ಯಕ್ತಿ ಭಾರತದಿಂದ ಮತ್ತೆ ಆಫ್ರಿಕಾಕ್ಕೆ ವಾಪಸಾಗಿದ್ದಾರೆ. 46 ವರ್ಷದ ಬೆಂಗಳೂರಿನ ಆರೋಗ್ಯ ಕಾರ್ಯಕರ್ತರೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿದೆ. ಅವರು ವಿದೇಶಿ ಪ್ರಯಾಣ ಮಾಡದಿದ್ದರೂ ಓಮಿಕ್ರಾನ್ ದೃಢಪಟ್ಟಿದೆ. ಅವರ ಸಂಪರ್ಕದಲ್ಲಿರುವ ಐವರಿಗೂ ಪೋಸಿಟಿವ್ ಬಂದಿದ್ದು, ರೂಪಾಂತರಿ ಪತ್ತೆಗೆ ಅವರ ಸ್ಯಾಂಪಲ್ ಗಳನ್ನು ಕಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಭಾರತಕ್ಕೆ ಹೊಸ ರೂಪಾಂತರಿ ಕಾಲಿಟ್ಟ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವರಾದ ಮನ್ಸುಖ್ ಮಾಂಡವಿಯ ಅವರು ಸಭೆ ನಡೆಸಿದ್ದಾರೆ.
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಿ. ಹಾಗೆಯೇ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸುವುದು, ಕ್ಷಿಪ್ರಗತಿಯಲ್ಲಿ ತಪಾಸಣೆ ಮಾಡುವ ದಿಸೆಯಲ್ಲೂ ವೇಗವಾಗಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದ್ದಾರೆ.
ತಪಾಸಣೆ ನಡೆಸಿ ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ : ಮನ್ಸುಖ್ ಮಾಂಡವಿಯಾ
Date: