Demand of Farmers Union ಚಿಕ್ಕಮಗಳೂರು, ತಾಲ್ಲೂಕಿನ ಹಲವಾರು ಗ್ರಾಮಗಳಿಗೆ ನೀರುಣಿಸುವ ಪ್ರಮುಖ ಕೆರೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ರೈತಾಪಿ ವರ್ಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ರೈತಪರ ಸಂಘಟನೆ ಹಾಗೂ ವಿವಿಧ ಪಕ್ಷದ ಮುಖಂಡರುಗಳು ಶಾಸಕ ಹೆಚ್.ಡಿ. ತಮ್ಮಯ್ಯ ಅವರನ್ನು ಒತ್ತಾಯಿ ಸಿದರು.
ಈ ಸಂಬಂಧ ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಭೆ ನಡೆಸುವ ಮೂಲಕ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಗ್ರಾಮೀಣ ಪ್ರದೇಶದ ಜಮೀನುಗಳಿಗೆ ನೀರೋದಗಿಸುವ ಪ್ರಮುಖ ಕೆರೆಗಳಾದ ರಣಘಟ್ಟ, ಮಾದರಸನಕೆರೆ, ದಾಸರಹಳ್ಳಿ, ಲಕ್ಷಾದೀಕೆರೆ ಹಾಗೂ ಭದ್ರಾ ಕಣಿವೆ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೆರೆಗೆ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದ ಅವರು ಮುಂಬರುವ ಬಜೆಟ್ನಲ್ಲಿ ಕೆರೆ ಕಾಮಗಾರಿಗೆ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಕೆರೆಯು ಈ ಹಿಂದಿನ ಸಮಯದಲ್ಲಿ ಹೊಂದಿದ್ದ ನೀರಿನ ಮಟ್ಟವನ್ನು ಪ್ರಸ್ತುತ ದಿನಗಳಲ್ಲಿ ಸಂಗ್ರಹ ಮಾಡಿಲ್ಲ. ಕೂಡಲೇ ಕೆರೆ ಸಂಬಂಧ ಹಿಂದಿನ ನೀರಿನ ಮಟ್ಟ ವನ್ನು ಕೆರೆಯಲ್ಲಿ ಸಂಗ್ರಹಿಸಬೇಕು. ಜೊತೆಗೆ ಸುತ್ತಮುತ್ತಲಿನ ಒತ್ತುವರಿಯಾಗಿರುವ ಜಾಗದ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ರಾಜ್ಯ ವಕ್ತಾರ ರವೀಶ್ ಬಸಪ್ಪ ಮಾತನಾಡಿ ರಣಘಟ್ಟಕೆರೆ ಕಾಮಗಾರಿಗೆ ಸಂಬಂಧಿಸಿದಂತೆ ಶಾಸಕರು ಒಂದು ದಿನ ಬಿಡುವು ಮಾಡಿಕೊಂಡು ಸ್ಥಳಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಒಂದು ಕೆರೆಯ ನೀರು ಕೇವಲ ಒಂದು ಸಮಾಜಕ್ಕೇ ಸೀಮಿ ತವಾಗಿರುವುದಿಲ್ಲ. ಎಲ್ಲಾ ಸಮಾಜಕ್ಕೂ ಅನುಗುಣವಾಗಲಿದೆ. ಆ ನಿಟ್ಟಿನಲ್ಲಿ ಕೆರೆಗಳ ಕಾಮಗಾರಿಗಳ ಸಂಬಂಧ ಅಧಿವೇಶನದಲ್ಲಿ ಚರ್ಚಿಸುವ ಮೂಲಕ ಕಾಮಗಾರಿ ತ್ವರಿತಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಬಸವನಹಳ್ಳಿ ಕೆರೆ ಸಂಬಂಧ ಪ್ರತಿಕ್ರಿಯಿಸಿದ ಅವರು ಅಂದಿನ ಕಾಲದಲ್ಲಿ ರಾಮೇಶ್ವರ ಕೆರೆ ಮೂಲಕ ಬಸವನ ಹಳ್ಳಿ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಕೈಹಾಕಿದ್ದರೆ ಬಹಳಷ್ಟು ಗ್ರಾಮಗಳಿಗೆ ಅನುಕೂಲವಾಗಿತ್ತು. ಆದರೆ, ರಾಮೇಶ್ವರ ಕೆರೆಯ ನೀರನ್ನು ಉಪ್ಪಳ್ಳಿ ಚಾನಲ್ ಮೂಲಕ ಹರಿಬಿಡುತ್ತಿರುವುದರಿಂದ ಸಮಸ್ಯೆಯಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
Demand of Farmers Union ಈ ಸಂದರ್ಭದಲ್ಲಿ ವಿವಿಧ ಪಕ್ಷದ ಮುಖಂಡರುಗಳಾದ ಬಿ.ಅಮ್ಜದ್, ಹೇಮಾವತಿ, ರೇಣುಕಾರಾಧ್ಯ, ಅಚ್ಯುತ್ರಾವ್, ಕೆಂಗೇಗೌಡ, ಮುಖಂಡರುಗಳಾದ ಎಸ್.ಬಿ.ಬಸವರಜ್, ಸಿ.ಎಸ್.ಅಶೋಕ್, ಬೆಳವಾಡಿ ಶಿವಣ್ಣ, ಅಮೀರ್ ಮತ್ತಿತರರು ಹಾಜರಿದ್ದರು.