Alone Protest ಹೊಸನಗರ ತಾಲೂಕಿನ ಗ್ರಾಮೀಣ ಪ್ರದೇಶದ ಅನೇಕ ಕಡೆ ಕಳೆದ ಒಂದೂವರೆ ತಿಂಗಳಿನಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಸರ್ಕಾರದಿಂದ ಇದಕ್ಕಾಗಿ ಯಾವುದೇ ಹಣ ಬಿಡುಗಡೆಯಾಗಿಲ್ಲ. ಅಧಿಕಾರಿಗಳಿಗೆ ಜನ ಪರ ಕಾಳಜಿ ಇಲ್ಲ ಎಂದು ಹೊಸನಗರದ ಮೂಡುಗೊಪ್ಪ ಗ್ರಾ. ಪಂ. ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ತಾ. ಪಂ. ಕಚೇರಿ ಎದುರು ಗೋಮೂತ್ರ, ಸಗಣಿ ನೀರು ಮೈಮೇಲೆ ಸುರಿದುಕೊಂಡು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ ತಾವು ಜಿಲ್ಲಾ ಪಂಚಾಯತ್ ಸಿಇಒ, ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಗಮನ ಸೆಳೆದಿದ್ದೇನೆ. ಕಳೆದ ಒಂದುವರೆ ತಿಂಗಳಿನಿಂದ ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ಜನರು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇಲಾಖೆ ಸೂಚನೆ ಮೇರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಇದಕ್ಕೆ ಅಗತ್ಯ ಅನುದಾನ ಗ್ರಾಮ ಪಂಚಾಯಿತಿಯಲ್ಲಿಲ್ಲ. ವಿಶೇಷ ಅನುದಾನ ಬಿಡುಗಡೆ ಮಾಡಬೇಕಾಗಿರುವ ಅಧಿಕಾರಿಗಳು ಇನ್ನಿಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
Alone Protest ಬರಗಾಲದ ಛಾಯೆ ಕಾಣಿಸಿಕೊಂಡಿದೆ. ಟಾಸ್ಕ್ ಫೋರ್ಸ್ ಮೀಟಿಂಗ್ನಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೆ ಪ್ರತೀ ತಾಲೂಕಿಗೆ 15 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡುವುದಾಗಿ ಪಿಡಿಒಗಳಿಗೆ ತಿಳಿಸಲಾಗಿತ್ತು. ಆದರೆ, ಅಧಿಕಾರಿಗಳು ಮಾತು ತಪ್ಪಿದ್ದಾರೆ. ಜನಸಾಮಾನ್ಯರಿಂದ ಬೈಸಿಕೊಂಡು ಬೇಸರವಾಗಿದೆ. ಮೊದಲು ನಾವು ಶುದ್ಧ ಆಗಬೇಕಾದ ಪರಿಸ್ಥಿತಿ ಬಂದಿದೆ. ಆದ್ದರಿಂದ, ಗೋಮೂತ್ರ, ಸಗಣಿ ನೀರು ಮೈಮೇಲೆ ಹಾಕಿಕೊಂಡು ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.