Adichunchanagiri Mutt ಇಂದಿನ ದಿನಮಾನಗಳಲ್ಲಿ ಮಕ್ಕಳ ಮನೋಭಾವದಲ್ಲಿ ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಯಾವ ಮನೆಯಲ್ಲಿ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರ ಮನೆ ಹಾಗೂ ಮನ ಚೆನ್ನಾಗಿ ಹಾಗೂ ಏಳಿಗೆಯ ಸ್ಥಿತಿಯಲ್ಲಿ ಗುರುತಿಸಿಕೊಳ್ಳುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿ ಹೇಳಿದರು.
ಶಿವಮೊಗ್ಗ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆದಿಚುಂಚನಗಿರಿ ಸಮುದಾಯ ಭವನ ಹಾಗೂ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಐವತ್ತಕ್ಕೂ ಹೆಚ್ಚು 50 ವರ್ಷಕ್ಕೂ ಹೆಚ್ಚು ಕಾಲ ದಾಂಪತ್ಯ ಜೀವನ ಪೂರೈಸಿದ ಹಿರಿಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
Adichunchanagiri Mutt ಕೃತಜ್ಞತೆ ಹಾಗೂ ಕೃತಘ್ನತೆ ಎಂಬ ಎರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ನಾವು ಪಡೆದದ್ದನ್ನು ಕೃತಜ್ಞರಾಗಿ ಸ್ವೀಕರಿಸಿ ಅದನ್ನು ಗೌರವಿಸುವ ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಶ್ರೀಗಳು ಹೇಳಿದರು.
ಬದುಕಿನಲ್ಲಿ ಬೇರೆಯವರಿಂದ ಪಡೆದಾಗ ಧನ್ಯವಾದ ಹೇಳುವ ಮನೋಭಾವ ನಮ್ಮಲ್ಲಿರಬೇಕು. ಕೇವಲ ಪಡೆದು ಅದನ್ನು ಬರಿಸದೇ ಇರುವುದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ಹಾಗಾಗಿ ಧನ್ಯವಾದ ಹೇಳುವುದು ಪ್ರತಿ ಹಂತದಲ್ಲಿ ಎಲ್ಲರ ಬಳಿಯೂ ನೆಲೆಯಾಗಿರಬೇಕು ಎಂದು ತಿಳಿಸಿದರು.
ಮನೆಯ ಅಜ್ಜ, ಅಜ್ಜಿ ಹಾಗೂ ಮೊಮ್ಮಕ್ಕಳ ನಡುವೆ ಆತ್ಮೀಯ ಸಂಬಂಧ ಎದ್ದು ಕಾಣುತ್ತದೆ. ಇದು ಒಂದು ಬಗೆಯಲ್ಲಿ ಪ್ರೀತಿ ವಿಶ್ವಾಸ ಹಾಗೂ ಸ್ನೇಹದ ಸಂಕೇತ ಎಂದ ಅವರು ಮಹಾಭಾರತದ ಭೀಷ್ಮ ರವರ ಕೊನೆಯ ಹಂತದ ಕಾಲದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅವರ ಮೊಮ್ಮಕ್ಕಳಿಗೆ ಅಂದರೆ ಪಾಂಡವರಿಗೆ ರಾಜ್ಯಭಾರ ಮಾಡುವ ಈ ಮಾತು ಹೇಳಿಸುವ ಉದಾಹರಣೆಯನ್ನು ನೀಡಿದರು.
ಈ ಉದಾಹರಣೆಯಲ್ಲಿ ವಂಶದ ಹಿರಿಯರ ಹಿತವಚನದ ಬಗ್ಗೆ ಶ್ರೀ ಕೃಷ್ಣನು ಜಾಣ್ಮೆಯ ನಡೆ ತೆಗೆದುಕೊಂಡ ಬಗೆಯನ್ನು ವಿವರಿಸಿದರು.
ಇಂದು ಮಕ್ಕಳು ಚೆನ್ನಾಗಿರಲೆಂದು ಪೋಷಕರು ಕಷ್ಟಪಟ್ಟು ಓದಿಸುತ್ತಾರೆ. ಮಕ್ಕಳು ಓದಿ ಬೆಳೆದ ನಂತರ ಅನ್ಯ ದೇಶಗಳಿಗೆ ಹೋಗಿ ನೆಲೆಸುತ್ತಾರೆ. ತಂದೆ ತಾಯಿಗಳು ಮತ್ತೆ ಅನಾಥ ಪ್ರಜ್ಞೆಯಿಂದ ಬಳಲುತ್ತಾರೆ. ಬುಡದ ಬೇರಿನ ಸಂಸ್ಕೃತಿಯನ್ನು ಮರೆಯಲಿಕ್ಕಾಗದ ಮನೋಭಾವ ಬೆಳೆಯಬೇಕಿದೆ ಎಂದು ತಾವರೆ ಹೂವಿನ ಸೌಂದರ್ಯದ ಜೊತೆ ಅದು ಬೆಳೆದ ಬೇರಿನ ಕೆಸರಿನ ಬಗ್ಗೆ ಮನೋಜ್ಞ ಕಥೆಯನ್ನು ಹೇಳಿದರು.
ಒಟ್ಟಾರೆ ಹಿರಿಯರ ಬಗ್ಗೆ ಗೌರವವನ್ನು ಹೊಂದುವ ಸಂಸ್ಕೃತಿ ನಮ್ಮದು ಅದನ್ನು ಇಂದಿನ ಮಕ್ಕಳು ಪಾಲಿಸಬೇಕು. ಮನೆಯ ಹಿರಿಯ, ಮನೆಯ ಬಾಗಿಲಷ್ಟೇ ಅಲ್ಲ ಮನೆಯ ದೇವರು ಸಹ ಹೌದು ಎಂದು ಶ್ರೀಗಳು ತಿಳಿಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಶಾಖಾ ಮಠದ ರೂವಾರಿಗಳು ಆದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಆದಿಚುಂಚನಗಿರಿ ಸಮುದಾಯ ಭವನ ಹಾಗೂ ಶ್ರೀ ಕಾಲಭೈರವೇಶ್ವರ ದೇವಾಲಯ ನಿರ್ಮಾಣ ಹಂತದ ಬಗ್ಗೆ ವಿವರಣೆ ನೀಡಿದರು.
ಈ ವರ್ಷ ಈ ಆಚರಣೆಯ ಸಂದರ್ಭದಲ್ಲಿ ಎಂದಿನಂತೆ ನಡೆಯಬೇಕಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ನವ ವಧು ವರರಿಗೆ ಬೆಳಗುವ ಒಳ್ಳೆಯ ಶುಭ ಗಳಿಗೆ ಇಲ್ಲದ ಕಾರಣ ಅದನ್ನು ಮುಂದೂಡಲಾಗಿದೆ.
ಪ್ರತಿವರ್ಷ ಸಾಮೂಹಿಕ ವಿವಾಹದ ಜೊತೆಗೆ 50 ವರ್ಷ ದಾಂಪತ್ಯ ಪೂರೈಸಿದ ಹಿರಿಯರನ್ನು ಗೌರವಿಸುವ ಮೂಲಕ ನವ ವಧುವರರಿಗೆ ಅನ್ಯೂನ್ಯವಾಗಿ ಬಾಳಿ ಬದುಕುವ ಪೂರ್ವ ಪೀಠಿಕೆಯನ್ನು ನಮ್ಮ ಮಠ ಹಾಕಿಕೊಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಅರ್ಥಶತಕ ದಾಂಪತ್ಯ ಜೀವನವನ್ನು ಪೂರೈಸಿದ ಹಿರಿಯ ದಂಪತಿಗಳಿಗೆ ಆತ್ಮೀಯವಾಗಿ ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಆದಿಚುಂಚನಗಿರಿ ಮಠದ ಶ್ರೀ ಗುಣನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಟ್ರಸ್ಟ್ ನ ಪ್ರಮುಖರು ಮತ್ತು ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.