ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶನಿವಾರ ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ವರ್ಧಂತೋತ್ಸವ ಸಮಾರಂಭವು ಪರಮ ಪೂಜ್ಯ ಡಾ. ಶ್ರೀ ವಿಶ್ವ ಸಂತೋಷ ಭಾರತಿ ಶ್ರೀ ಪಾದಂಗಳವರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.
ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ಕಾಯಕಯೋಗಿಗಳಾದ ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸಿದ್ದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಮಾತನಾಡಿ, ಭೂಲೋಕದ ಪ್ರತ್ಯಕ್ಷ ದೇವರೆಂದರೆ ಸೂರ್ಯ. ಉತ್ತರಾಯಣದ ಬಳಿಕ ಸೂರ್ಯ ದಕ್ಷಿಣಾಯಣದತ್ತ ತನ್ನ ಪಥವನ್ನು ಬದಲಿಸುತ್ತಾನೆ. ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಮಹಾಭಾರತದ ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆ ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ. ಅಂತ ಒಂದು ಪುಣ್ಯಕಾಲವಿದು ಎಂದರು.
ಸಂಕ್ರಾಂತಿಯಂದು ನಡೆಯುವ ಈ ದೇವರ ಆರಾಧನೆಯೇ ಒಂದು ವಿಶೇಷ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷ ಸಂಪ್ರದಾಯ, ಆಚರಣೆಯ ಮಹತ್ವವಿದೆ. ಹಾಗೆಯೇ ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ಹಾಗೂ ಗರುಡ ದರ್ಶನದ ಕಂಡು ನಾವೆಲ್ಲಾ ಪುನೀತರಾಗುತ್ತೇವೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾ, ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಪೂಜೆ ಸಲ್ಲಿಸಿ ಸುಗ್ಗಿಯ ಹಬ್ಬವಾಗಿ ಸಂಭ್ರಮಿಸುತ್ತಾರೆ. ಈ ಹಬ್ಬವು ನಾಡಿಗೆ ಸಮೃದ್ದಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ರಕ್ಷಣಾ ಮತ್ತು ಪ್ರವಾಸೋದ್ಯಮದ ರಾಜ್ಯ ಸಚಿವರಾದ ಶ್ರೀಪಾದನಾಯಕ್ , ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ನಿರ್ದೇಶಕರಾದ ಆರ್. ಮದನ್ ಮತ್ತಿತರ ಗಣ್ಯರು ಹಾಜರಿದ್ದರು. ಹಾಗೂ ಸಾವಿರಾರು ಅಯ್ಯಪ್ಪಸ್ವಾಮಿ ಭಕ್ತರು ಸೇರಿದ್ದರು.