ದಾವಣಗೆರೆ : ಸಾಧನೆಯ ಹಾದಿಗೆ ಪ್ರೇರೇಪಿಸುವಂತಹ ಶಿಕ್ಷಣವು ಇಂದಿನ ಅವಶ್ಯವಾಗಿದೆ. ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವು ಶಿಕ್ಷಣ ಸಂಸ್ಥೆಗಳಿಂದ ಆಗಬೇಕಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಖಜಾಂಚಿ ಎ.ಎಸ್.ನಿರಂಜ ಅವರು ಅಭಿಪ್ರಾಯಪಟ್ಟರು.
ಅವರು, ದಾವಣಗೆರೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ವೇದಿಕೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ನಾಯಕತ್ವ ಗುಣ ಸೋದರತ್ವ ಭಾವ ಶಿಕ್ಷಣದೊಂದಿಗೆ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವರೂಪಣೆಗೆ ಶಿಕ್ಷಣ ಒಂದೇ ಸಾಲದು, ಪಠ್ಯೇತರ ಚಟುವಟಿಕೆಗಳಲ್ಲಿನ ಅನುಭವವೂ ಪೂರಕವಾಗಿ ಬೇಕು ಎಂದರಲ್ಲದೆ ಶಿಕ್ಷಕರ ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸಹಾ ನಿರ್ಲಕ್ಷಿಸದೆ ಸ್ವೀಕರಿಸಿ ಅಳವಡಿಸಿಕೊಳ್ಳಬೇಕು ಎಂದರು.
ಪದವೀಧರರಾದರೂ ಕೃಷಿ ಕ್ಷೇತ್ರವನ್ನು ಪ್ರವೇಶಿಸಿ ರೈತರಾಗಲು ಹಿಂಜರಿಕೆ ಬೇಡ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಪಡೆದು ಭಾಗವಹಿಸಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕು ಇದಕ್ಕಾಗಿ ಮೊಬೈಲ್ ಚಟದಿಂದ ದೂರವಿದ್ದು ವಿದ್ಯಾರ್ಜನೆಯ ಕಡೆಗೆ ಗಮನ ನೀಡಿರಿ ಎಂದು ಕರೆಕೊಟ್ಟರು. ಪ್ರಸ್ತುತ ದೇಶದ ರಾಷ್ಟ್ರಪತಿ ಹಾಗೂ ಹಣ ಕಾಸು ಸಚಿವರಾಗಿ ಮಹಿಳೆಯರು ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಇದು ವಿದ್ಯಾರ್ಥಿನಿಯರಿಗೆ ಸ್ಪೂರ್ತಿದಾಯಕ ಅಂಶವಾಗಿದೆ ಎಂದರು.
ಸಮಾರೋಪ ಭಾಷಣ ಮಾಡಿದ ಶ್ರೀಮತಿ ಸರ್ವ ಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ಹೆಚ್. ದೊಡ್ಡ ಗೌಡರ್ ಸಾಧನೆ ಎಂದರೆ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದು ಅಷ್ಟೇ ಅಲ್ಲ. ನಿಮ್ಮಲ್ಲಿನ ವಿಶೇಷತೆಯನ್ನು ನೀವೇ ಗುರುತಿಸಿಕೊಂಡು ಅದನ್ನು ಪ್ರತಿಭೆಯಾಗಿ ಮಾರ್ಪಡಿಸಿಕೊಂಡು ಬೆಳೆಯುವುದೇ ಸಾಧನೆ ಎಂದರಲ್ಲದೇ ಸ್ನೇಹ, ವಾಹನ ಹಾಗೂ ಮೊಬೈಲ್ ಮೋಹದ ಬಗ್ಗೆ ಜಾಗೃತರಾಗಿರಬೇಕು. ಇದು ಅತಿಯಾದರೆ ಹಾದಿತಪ್ಪುವ ಸಂಭವವಿದೆ ಎಂದರು.
ಅಭ್ಯಾಸಕ್ಕೆ ಸಮಯ ನಿಗದಿ ಪಡಿಸಿಕೊಂಡು ವೇಳಾಪಟ್ಟಿಯಂತೆ ಶಿಸ್ತು ಬದ್ಧವಾಗಿ ವ್ಯಾಸಂಗ ಮಾಡಬೇಕು. ಓದನ್ನು ತಪಸ್ಸು ಎಂದು ತಿಳಿಯಬೇಕೆ ಹೊರತು ಭಯಪಡಬಾರದು ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಪಿ. ರುದ್ರಪ್ಪನವರು ಪ್ರಯತ್ನವಿಲ್ಲದೆ ಹೋದರೆ ಪ್ರತಿಭೆಯು ಪ್ರಕಟವಾಗುವುದಿಲ್ಲ, ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳು ಜೀವನ ಪರೀಕ್ಷೆಗೆ ಅವಶ್ಯ, ಓದು ಶಾಲಾ ಪರೀಕ್ಷೆಗೆ ಅವಶ್ಯ ಎಂದರು.
ಅನೇಕ
ಸ್ಪರ್ಧೆಗಳ ವಿಜೇತರಿಗೆ ಯುವ ನಟ ಪೃಥ್ವಿ ಶಾಮನೂರು ಬಹುಮಾನ ವಿತರಿಸಿ ಮಾತನಾಡಿದರು.
ಕೀರ್ತಿ ಮತ್ತು ಸಹನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಜಯಶೀಲ ಹಾಡಿದರು. ಭಾವನಾ ಸ್ವಾಗತ ಕೋರಿದರೆ ಮುಖ್ಯ ಅತಿಥಿಗಳ ಪರಿಚಯವನ್ನು ಆಯಿಷಾ ಸಿದ್ಧಿಕ, ಅರ್ಪಿತ ಮಾಡಿದರು. ವಾರ್ಷಿಕ ವರದಿ ವಾಚನವನ್ನು ಜೀವಶಾಸ್ತ್ರ ಉಪನ್ಯಾಸಕಿ ಎಲ್.ಎಸ್. ಶರ್ಮಿಳ ಮಾಡಿದರು. ಬಹುಮಾನಿತರ ಹೆಸರುಗಳನ್ನು ರಸಾಯನ ಶಾಸ್ತ್ರ ಉಪನ್ಯಾಸಕ ಬಿ.ಎಂ. ಶಿವಕುಮಾರ್ ಘೋಷಿಸಿದರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಭುವನೇಶ್ವರಿ, ಯಶೋಧ, ಸಂಜನಾ ನಿರ್ವಹಿಸಿದರು. ವಿದ್ಯಾರ್ಥಿ ವೇದಿಕೆ ಪದಾಧಿಕಾರಿಗಳಾದ ಶ್ರೀದೇವಿ, ಗೌತಮ್, ಸಚಿನ್, ಕೀರ್ತಿ, ದರ್ಶನ್ ಪಾಟೀಲ್, ಅಂಜಿನಿ, ಸಿಂಧು, ದೀಪಿಕಾ,ಅರುಣ್, ಪ್ರೀತಿ, ಬೀರೇಶ್ ಉಪಸ್ಥಿತರಿದ್ದು ಮಹಮ್ಮದ್ ಹುಜೇಫಾ ವಂದನೆ ಸಲ್ಲಿಸಿದರು.