ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ದಿಕ್ಸೂಚಿ ನಾಯಕ ಶಾಂತವೇರಿ ಗೋಪಾಲಗೌಡ ಸಾಧನೆಯ ಸ್ಮರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಕುರಿತು ಖ್ಯಾತ ಲೇಖಕರು , ಸಮಾಜಸೇವಕರಾದ ಶ್ರೀ. ಬಿ.ಪೀರ್ ಭಾಷಾ ಅವರು ಮಾತನಾಡಿ, ಶಾಂತವೇರಿ ಗೋಪಾಲಗೌಡರ ಬಗ್ಗೆ ಕೇವಲ ಶಿವಮೊಗ್ಗದವರಲ್ಲದೇ ಎಲ್ಲರೂ ತಿಳಿದುಕೊಳ್ಳಬೇಕಾದ ರಾಜಕೀಯ ಕ್ಷೇತ್ರದ ಶ್ರೇಷ್ಠ ವ್ಯಕ್ತಿ ಎಂದರೆ ತಪ್ಪಾಗಲಾರದು ಎಂದರು.
ಶಾಂತವೇರಿ ಗೋಪಾಲಗೌಡರು ಕೇವಲ ರಾಜಕೀಯ ವ್ಯಕ್ತಿಯಾಗಿರದೇ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾದ ಶಾಂತವೇರಿ ಗೋಪಾಲಗೌಡರು ನಮ್ಮೆಲ್ಲರಿಗೂ ಆದರ್ಶ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಶ್ರೀರಾಮ ಮನೋಹರ ಶಾಂತವೇರಿಯವರು ಮಾತನಾಡಿ, ತಂದೆಯವರಾದ ಶಾಂತವೇರಿ ಗೋಪಾಲಗೌಡರು ಹಲವಾರು ಆದರ್ಶಗಳನ್ನ ಮೈಗೂಡಿಸಿಕೊಂಡಿದ್ದರು. ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವವನ್ನು ಆಚರಿಸಬೇಕು ಎನ್ನುವುದು ಬಹು ದಿನಗಳ ಕನಸು. ಅದು ಇಂದಿಗೆ ಈಡೇರಿದೆ. ತಂದೆಯವರ ಎಲ್ಲಾ ಬರಹಗಳನ್ನ ಕಲೆಹಾಕಿ ಅದಕ್ಕೆ ಒಂದು ಆಧುನಿಕ ಸ್ಪರ್ಶವನ್ನು ನೀಡಿ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಗುವುದು. ಈ ಮೂಲಕ ಪುಸ್ತಕ ಪ್ರೇಮಿಗಳು ಶಾಂತವೇರಿ ಗೋಪಾಲಗೌಡರ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಒಳ್ಳೆಯ ಆದರ್ಶಗಳನ್ನ ಮೈಗೂಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಬಿ. ಧನಂಜಯ್, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಡಾ. ಹಾಲಮ್ಮ ಎಂ , ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಮೋಹನ್ ಚಂದ್ರಗುತ್ತಿ, ಹಾಗೂ ಇನ್ನಿತರ ಗಣ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.