ಶೃಂಗೇರಿಯಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ಶೃಂಗೇರಿ ಉತ್ಸಾಹಿ ಯುವಕರ ತಂಡವೊಂದು ನಿರಂತರ ಹೋರಾಟ ಮಾಡುತ್ತಿದ್ದು, ಇದೀಗ ನೂರು ಬೆಡ್ ಆಸ್ಪತ್ರೆ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಂತಾಗಿದೆ.
ಹೌದು, ತಾತ್ಕಾಲಿಕ ಕಟ್ಟಡದಲ್ಲಿ ನೂರು ಬೆಡ್ ಆಸ್ಪತ್ರೆಗೆ ಚಾಲನೆ ನೀಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕೊಪ್ಪಕ್ಕೆ ನಿನ್ನೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಸಮಯಾವಕಾಶಬೇಕಾದ ಕಾರಣ ತಾತ್ಕಾಲಿಕವಾಗಿ ಹಳೆಯ ಕಟ್ಟಡದಲ್ಲಿ ಪ್ರಾರಂಭ ಮಾಡಲು ಆದೇಶಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಕ್ಷಣವೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಶೃಂಗೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿತ್ತು, ನಿನ್ನೆ ಧರಣಿ ಸತ್ಯಾಗ್ರಹಕ್ಕೆ ಮಣಿದು ಧರಣಿ ನಿರತರನ್ನು ಮಾತುಕತೆಗೆ ಕರೆದು ಸರ್ವರ ಸಮ್ಮುಖದಲ್ಲಿ ಸಿಎಂ ಆದೇಶಿಸಿದ್ದಾರೆ. ಈ ಮೂಲಕ ನೂರು ಬೆಡ್ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.