Sunday, August 23, 2026
Sunday, August 23, 2026

ಸಕಾಲಿಕ ತಪಾಸಣೆ ಮತ್ತು ಅರಿವಿನ ಮೂಲಕ ಮಧುಮೇಹ ನಿಯಂತ್ರಣ

Date:

ಮಧುಮೇಹಿಗಳಿಗೆ ಸಕಾಲಕ್ಕೆ ತಪಾಸಣೆ ಹಾಗೂ ಮಧುಮೇಹದ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.

ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ರೋಟರಿ ಶಿವಮೊಗ್ಗ ಪೂರ್ವ, ನೇಚರ್ ಬೆಲ್ ಆಯುರ್ವೇದ, ಆಶೀರ್ವಾದ ಕಣ್ಣಿನ ಆಸ್ಪತ್ರೆ ಮತ್ತು ಶ್ರೀ ಸಾಯಿ ಮಹಿಳಾ ಗೃಹ ನಿರ್ಮಾಣ ಸಹಕಾರ ಸಂಘ ವತಿಯಿಂದ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ನೇತ್ರ ತಪಾಸಣೆ, ರಕ್ತಪರೀಕ್ಷೆ ಮತ್ತು ಮಧುಮೇಹ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದೆ. ಸಾರ್ವಜನಿಕರಿಗೆ ಅನುಕೂಲ ಒದಗಿಸುವ ದೃಷ್ಠಿಯಿಂದ ಮುಂದಿನ ದಿನಗಳಲ್ಲಿಯು ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳನ್ನು ಏರ್ಪಡಿಸಲಿದೆ ಎಂದು ತಿಳಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಮಧುಮೇಹ ಕಾಯಿಲೆ ಇರುವವರಿಗೆ ಕುಟುಂಬ ಸದಸ್ಯರ ಸಹಕಾರದ ಪ್ರಾಮುಖ್ಯತೆ ಹಾಗೂ ಕುಟುಂಬ ಸದಸ್ಯರಿಗೆ ಈ ಕಾಯಿಲೆ ಬರದಂತೆ ಹೇಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ನೇಚರ್ ಬೆಲ್ ಆಯುರ್ವೇದ ಕ್ಲಿನಿಕ್ ಮಧುಮೇಹ ತಜ್ಞ ಡಾ. ಹನುಮಂತಪ್ಪ ಸುಂಕಾಪುರ ಮಾತನಾಡಿ, ಆರೋಗ್ಯ ರಕ್ಷಣೆಗಾಗಿ ವಿಶ್ವದಾದ್ಯಂತ ಖರ್ಚು ಮಾಡುತ್ತಿರುವ ಹಣದಲ್ಲಿ ಒಂದು ಪಾಲನ್ನು ಮಧುಮೇಹ ಕಾಯಿಲೆ ನಿರ್ವಹಣೆಗಾಗಿ ವ್ಯಯಿಸಲಾಗುತ್ತಿದೆ. ಈ ರೋಗ ನಿಯಂತ್ರಿಸಲು ಹಾಗೂ ನಿರ್ವಹಣೆ ಮಾಡಲು ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.

ಆಯುರ್ವೇದದಲ್ಲಿ ಮಧುಮೇಹ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ನೇಚರ್ ಬೆಲ್ ಆಯುರ್ವೇದ ಸಂಸ್ಥೆಯು ಈಗಾಗಲೇ ಹೆಚ್ಚಿನ ಜನರಿಗೆ ಮಧುಮೇಹ ರೋಗವು ಸಂಪೂರ್ಣ ಗುಣಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ನಗರದ ಆಶೀರ್ವಾದ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ. ಅರುಣ್ ಎ ಅವರು ಮಧುಮೇಹಿಗಳಿಗೆ ಸಮಯಕ್ಕೆ ಸರಿಯಾಗಿ ವರ್ಷಕ್ಕೆ ಒಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.
ಮಧುಮೇಹ ಬರುವ ಯುವ ವಯಸ್ಕರಲ್ಲಿ ಡಯಾಬಿಟಿಕ್ ರೆಟಿನೋಪತಿ ಬೆಳವಣಿಗೆ ಅಪಾಯವು ದ್ವಿಗುಣಗೊಳ್ಳಬಹುದು. ಮಧುಮೇಹಿಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಕಾಯದಿರುವುದು ಉತ್ತಮ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ವೇಳೆಗೆ ರೋಗವು ಸಾಕಷ್ಟು ಹೆಚ್ಚಾಗಿರಬಹುದು ಎಂದರು.

ನಾವು ಎಷ್ಟು ಮುಂಚಿತವಾಗಿ ರೋಗನಿರ್ಣಯ ಮತ್ತು ಚಿಕಿತ್ಸೆ ಪ್ರಾರಂಭಿಸುತ್ತೇವೆಯೋ ಉತ್ತಮ ದೃಷ್ಟಿ ಕಾಪಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮಧುಮೇಹ ಪತ್ತೆಯಾದ ತಕ್ಷಣ ವಿಶೇಷವಾಗಿ ಟೈಪ್ 2 ಮಧುಮೇಹಿಗಳು ಕಣ್ಣಿನ ತಪಾಸಣೆಯನ್ನು ಪ್ರಾರಂಭಿಸುವುದು ಉತ್ತಮ ಎಂದು ಹೇಳಿದರು.

ಮಧುಮೇಹದ ಆರಂಭಿಕ ಹಂತಗಳಲ್ಲಿ ಕಣ್ಣಿನ ತಪಾಸಣೆಯ ಆವರ್ತನವನ್ನು ವರ್ಷಕ್ಕೊಮ್ಮೆ ಸೀಮಿತಗೊಳಿಸಬಹುದು. ದೀರ್ಘಾವಧಿಯ ಮಧುಮೇಹದಿಂದ ಬಳಲುತ್ತಿರುವ ಜನರು ಅಥವಾ ಗರ್ಭಧಾರಣೆಯಂತಹ ವಿಶೇಷ ಸಂದರ್ಭಗಳಲ್ಲಿ ಆಗಾಗ್ಗೆ ತಪಾಸಣೆ ಮಾಡಿಸುವ ಅಗತ್ಯವಿದೆ ಎಂದು
ತಿಳಿಸಿದರು.

ಆಕಾಶ್ ಲ್ಯಾಬೋರೇಟರಿ ವತಿಯಿಂದ ರಕ್ತಪರೀಕ್ಷೆ ಮಾಡಲಾಯಿತು. ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಕುಮಾರಸ್ವಾಮಿ ಕೆ, ಮಂಜುನಾಥ್ ಕದಂ, ಆಶೀರ್ವಾದ ಕಣ್ಣಿನ ಆಸ್ಪತ್ರೆಯ ಡಾ. ಕೋಮಲ, ಸಾಯಿ ಮಹಿಳಾ ಗೃಹ ನಿರ್ಮಾಣ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...