ಕಳೆದ ಗುರುವಾರ ಆರ್ ಎಸ್ ಎಸ್ ಪ್ರಮುಖರಾದ ಮೋಹನ್ ಭಾಗವತ್ ರವರು ದೆಹಲಿಯ ಕಸ್ತೂರಿ ಬಾ ಗಾಂಧಿ ಮಾರ್ಗದಲ್ಲಿನ ಮಸೀದಿಗೆ ಭೇಟಿ ನೀಡಿದ್ದರು. ಆಜಾದ್ ಪುರದಲ್ಲಿನ ತಜ್ವಿದುಲ್ ಖುರಾನ್ ಮದರಸಾಕ್ಕೂ ಭೇಟಿ ನೀಡಿದ್ದರು. ಇದು ಮದರಸಕ್ಕೆ ಮೋಹನ್ ಭಾಗವತ್ ರವರ ಮೊದಲ ಭೇಟಿಯಾಗಿದೆ. ಮದರಸಾದ ಮಕ್ಕಳೊಂದಿಗೆ ಅವರು ಸಂವಾದ ಮಾಡಿದ್ದಾರೆ. ಮಕ್ಕಳು ಖುರಾನ್ ಪಠಣ ಮಾಡಿದರು. ಅಲ್ಲದೇ ವಂದೇ ಮಾತರಂ ಮತ್ತು ಜೈ ಹಿಂದ್ ಘೋಷಣೆಯನ್ನೂ ಮಾಡಿದರು.
ಎಲ್ಲಾ ಧರ್ಮಗಳನ್ನೂ ನಾವು ಗೌರವಿಸಬೇಕು ಎಂದು ಭಾಗವತ್ ನುಡಿದರು ಎಂದು ವರದಿಯಾಗಿದೆ.
ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹಮ್ಮದ್ ಇಲಿಯಾಸಿ ಅವರು ಮೋಹನ್ ಭಾಗವತ್ ಅವರನ್ನ ರಾಷ್ಟ್ರಪಿತ ಎಂದು ಕರೆದಾಗ ಭಾಗವತ್ ಅವರು ತಕ್ಷಣ ಆಕ್ಷೇಪಿಸಿ ರಾಷ್ಟ್ರ ಪಿತರು ಒಬ್ಬರೇ ಆಗಿದ್ದಾರೆ ಮತ್ತು ನಾವೆಲ್ಲರೂ ಭಾರತದ ಮಕ್ಕಳು ಎಂದರು.
ಇದಕ್ಕೂ ಮುನ್ನ ಮೋಹನ್ ಭಾಗವತ್ ರವರು ಮುಸ್ಲಿಂ ಸಮುದಾಯದ ಬುದ್ದಿಜೀವಿಗಳನ್ನ ಭೇಟಿ ಮಾಡಿದರು.
ದೆಹಲಿಯ ಮಾಜಿ ಲೇ. ಗವರ್ನರ್ ನಜೀಬ್ ಜಂಗ್, ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಎಸ್.ವೈ. ಖುರೇಶಿ , ಅಲಿಘಡ್ ಮುಸ್ಲಿಂ ವಿವಿಯ ಮಾಜಿ ಕುಲಪತಿ ಜಮೀರ್ ಉದ್ದಿನ್ ಶಾ, ಮಾಜಿ ಸಂಸದ ಶಹೀದ್ ಸಿದ್ದಿಕಿ, ಉದ್ಯಮಿ ಸಯೀದ್ ಶರ್ವಾನಿ,ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬಳಿಕ ಮಹತ್ವದ ಮಾತುಕತೆ ಬಗ್ಗೆ ಪ್ರತಿಕ್ರಿಯಿಸಿದ ಇಲ್ಯಾಸಿ, ಮೋಹನ್ ಭಾಗವತ್ ಅವರಿಗೆ ಭೇಟಿಯಾಗಿ ನಾನೇ ಆಹ್ವಾನ ನೀಡಿದ್ದೆ. ಅವರು ಒಬ್ಬ ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಕೂಡ ಹೌದು. ಸರ್ವರ ಭಾಜನರಾಗುವ ಮೇರು ವ್ಯಕ್ತಿತ್ವದವರು ಎಂದು ಕೊಂಡಾಡಿದರು.
ನಮ್ಮ ಈ ದೇಶವಾಸಿಗಳ ಡಿಎನ್ ಎ ಒಂದೇ ಆಗಿದೆ. ಆದರೆ ಧಾರ್ಮಿಕ ರೀತಿ ರಿವಾಜು ಭಿನ್ನವಾಗಿದೆ. ದೇವರನ್ನು ಪೂಜಿಸುವ ವಿಧಾನ ಕೂಡ ಬೇರೆಯೇ ಇದೆ. ಹಾಗಿದ್ದೂ ಈ ಜಗತ್ತಿನಲ್ಲಿ ಮಾನವೀಯತೆಗಿಂತ ದೊಡ್ಡ ಧರ್ಮ ಬೇರೊಂದು ಇಲ್ಲ. ಜೊತೆಗೆ ಎಲ್ಲಕ್ಕಿಂತ ಮೊದಲು ನಮ್ಮ ದೇಶ ಹಾಗೂ ಅದರ ರಕ್ಷಣೆಯಾಗಿದೆ. ಒಂದೇ ಕುಟುಂಬದಂತೆ ನಾವು ಮುಖಂಡರು ಸಭೆ ನಡೆಸಿದ್ದು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.