ಈ ಬಾರಿ ದಸರಾ ಮಹೋತ್ಸವದಲ್ಲಿ ಮಂಗಳೂರಿನ ರಥಬೀದಿ ಶಾರದೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿ ಸೀರೆಯೊಂದಿಗೆ ಮಿಂಚಲಿದ್ದಾಳೆ. ಈ ಸೀರೆಯನ್ನು ವಾರಣಾಸಿ ಜ್ಞಾನವ್ಯಾಪಿ ದೇಗುಲ ಬಳಿಯ ಮುಸ್ಲಿಂ ಕುಟುಂಬವೊಂದು ಕಳೆದ 6 ತಿಂಗಳಿನಿಂದ ತಯಾರಿಸುತ್ತಿದೆ.
ಪ್ರತಿವರ್ಷ ಶಾರದೆಯ ಶೋಭಾಯಾತ್ರೆ ಸಂದರ್ಭ ಬೆಳ್ಳಿಯ ಜರಿಯಿರುವ ರೇಷ್ಮೆ ಸೀರೆಯನ್ನು ಶಾರದಾ ದೇವಿಗೆ ಉಡಿಸಲಾಗುತ್ತಿದ್ದು, ನಗರದ ದಾನಿಯೊಬ್ಬರು ಈ ಸೀರೆಯನ್ನು ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ. ಹಲವು ವರ್ಷಗಳಿಂದ ವಾರಣಾಸಿ ಮುಸ್ಲಿಂ ಕುಟುಂಬವೇ ಈ ಸೀರೆಯನ್ನು ತಯಾರಿಸುತ್ತಿದ್ದು, ಈ ಬಾರಿ ಶಾರದೆಯ ಸೀರೆ ತಯಾರಿಸುವವರು ಆ ಕುಟುಂಬದ 5ನೇ ತಲೆಮಾರಿನವರಾಗಿದ್ದಾರೆ.
ಮಂಗಳೂರು ಶಾರದಾ ಮಹೋತ್ಸವದ ಶತಮಾನೋತ್ಸವದ ಈ ಪರ್ವಕಾಲದಲ್ಲಿ ಶಾರದಾ ಮಹೋತ್ಸವ ಸಮಿತಿ ಮತ್ತು ಭಕ್ತಾದಿಗಳು ಒಟ್ಟು ಸೇರಿ 200 ಪವನ್ ತೂಕದ ಸ್ವರ್ಣಾಭರಣಗಳನ್ನು ಸಮರ್ಪಿಸಲಿದ್ದಾರೆ. ಅದರಲ್ಲಿ ಶಾರದೆಗೆ ಚಿನ್ನದ ವೀಣೆ, ನವಿಲೂ ಸೇರಿದೆ. ಇದು ಮಾತ್ರವಲ್ಲದೆ ಶಾರದೆಗೆ ರಜತ ಬೆಳ್ಳಿ ದೀಪಗಳು ಸಮರ್ಪಣೆಯಾಗುತ್ತಿವೆ.