70 ವರ್ಷ ಬಳಿಕ ಭಾರತದ ಅರಣ್ಯಕ್ಕೆ ನಮೀಬಿಯಾ ದೇಶದಿಂದ ವಿಮಾನದಲ್ಲಿ ಎಂಟು ಚೀತಾಗಳನ್ನು ಕರೆತಂದ ತಂಡದಲ್ಲಿದ್ದ ಭಾರತದ ಏಕೈಕ ವನ್ಯಜೀವಿ ಅರಿವಳಿಕೆ ತಜ್ಞ ಕನ್ನಡಿಗರಾಗಿದ್ದು, ಅವರು ಕರ್ನಾಟಕದ ಪುತ್ತೂರಿನವರು ಎಂಬುದು ವಿಶೇಷ.
ದೆಹಲಿಯ ನ್ಯಾಷನಲ್ ಝೂಲಾಜಿಕಲ್ ಪಾರ್ಕ್ನ ಅಸಿಸ್ಟಂಟ್ ವೆಟರ್ನರಿ ಅಧಿಕಾರಿಯಾಗಿರುವ ಇವರು ಭಾರತದ ಮೂರು ಮಂದಿಯ ತಂಡದಲ್ಲಿದ್ದರು. ಇವರಲ್ಲದೆ ಭಾರತದ ನಮೀಬಿಯಾ ಹೈಕಮಿಷನರ್ ಪ್ರಶಾಂತ್ ಅಗರ್ವಾಲ್, ಪ್ರಾಜೆಕ್ಟ್ ಚೀತಾದ ಮುಖ್ಯ ವಿಜ್ಞಾನಿ ಮತ್ತು ಡೆಹರಾಡೂನ್ ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಡೀನ್ ಡಾ.ವೈ.ವಿ.ಜಲಾಲ್ ಮತ್ತು ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿಯ ನಿರ್ದೇಶಕ ಅನಿಶ್ ಗುಪ್ತಾ ಇವರಿಬ್ಬರಿದ್ದರು.
ಚೀತಾಗಳನ್ನು ನಮೀಬಿಯಾದಿಂದ ದೇಶಕ್ಕೆ ಕರೆತರುವಲ್ಲಿಯವರೆಗೆ ಸನತ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಚೀತಾಗಳಿಗೆ ಸಣ್ಣ ಪ್ರಮಾಣದಲ್ಲಿ ಅರಿವಳಿಕೆ ನೀಡಿ 16 ಗಂಟೆಗಳ ವಿಶೇಷ ವಿಮಾನ ಪ್ರಯಾಣದಲ್ಲಿ ಶನಿವಾರ ಭಾರತ ತಲುಪಿದ್ದಾರೆ.
ಪ್ರಯಾಣದುದ್ದಕ್ಕೂ ವಿಮಾನದಲ್ಲಿ ಗಂಟೆಗೊಮ್ಮೆ ಚೀತಾಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು. ಮೋದಿ ವನ್ಯಜೀವಿ ತಜ್ಞರ ತಂಡದ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಡಾ.ಸನತ್ ಕೃಷ್ಣ ಜತೆಯೂ ಮಾತನಾಡಿದ್ದರು.
ಸನತ್ ಕೃಷ್ಣ ಹುಲಿ ಹಾಗೂ ಆನೆಗೆ ರೇಡಿಯೋ ಕಾಲರ್ ಅಳವಡಿಕೆಯಲ್ಲಿ ಪರಿಣತ ತಜ್ಞ. ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಹುಲಿ ಗಣತಿ ವೇಳೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರಸಿದ್ಧ ಮುಳಿಯ ಸ್ವರ್ಣೋದ್ಯಮಿ ಮನೆತನದ ಕೃಷ್ಣ ಭಟ್ ಮತ್ತು ಕಾವೇರಿ ದಂಪತಿಯ ಮೊಮ್ಮಗನಾಗಿ, ಕೇಶವ ಭಟ್ ಮತ್ತು ಉಷಾ ದಂಪತಿ ಪುತ್ರನಾದ ಸನತ್ ಕೃಷ್ಣ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು.
ಬಳಿಕ ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವನ್ಯಜೀವಿ ವಿಭಾಗದಲ್ಲಿ ಬಿವಿಎಸ್ಸಿ ಮತ್ತು ಎಂವಿಎಸ್ಸಿ ವ್ಯಾಸಂಗ ಮಾಡಿದ ಅವರು ಅಮೆರಿಕದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ಪ್ರಸ್ತುತ ದೆಹಲಿಯ ರಾಷ್ಟ್ರೀಯ ವನ್ಯಜೀವಿ ಪಾರ್ಕ್ನಲ್ಲಿ ಉಪ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ.
ಇವರ ಪತ್ನಿ ಡಾ.ಪ್ರಿಯಾಂಕ ಜಸ್ತಾ ಪ್ರಸಕ್ತ ಡೆಹರಾಡೂನ್ನ ವನ್ಯಜೀವಿ ಸಂಶೋಧನಾ ವಿವಿಯಲ್ಲಿ ತಜ್ಞೆಯಾಗಿದ್ದಾರೆ.