ಶಿವಮೊಗ್ಗ ಅಣಬೆ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಮತ್ತು ಸಸ್ಯಾಭಿವೃದ್ದಿ ಈ ತರಹದ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಯಾವುದೋ ಕಾರಣಾಂತರಗಳಿಂದ ಬಂಧಿಗಳಾಗಿರುವವರು ಇಲ್ಲಿಂದ ಹೊರಗೆ ಹೋದ ಮೇಲೆ ಸ್ವಾವಲಂಬಿ ಜೀವನ ಮಾಡಿ ಉತ್ತಮ ಸನ್ನಡತೆಯಿಂದ ಮುಂದುವರೆಯಬೇಕೆಂದು ಜಿಲ್ಲಾ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ.ಅನಿತಾ ರವರು ಖೈದಿಗಳಿಗೆ ಕರೆ ನೀಡಿದರು.
ಶಿವಮೊಗ್ಗ ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಕೃಷಿ ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವಿ ಶಾಸ್ತ್ರ ವಿಭಾಗ ಹಾಗೂ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಧುನಿಕ ಅಣಬೆ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಮತ್ತು ಸಸ್ಯಾಭಿವೃದ್ದಿ ತಂತ್ರಜ್ಞಾನ ಕುರಿತಾದ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯುತ್ತಮ ಪೋಷಕಾಂಶಯುಕ್ತ ಹಾಗೂ ಬಹಳ ಬೇಡಿಕೆ ಇರುವ ಅಣಬೆ ಕೃಷಿ, ಸಾವಯವ ಕೃಷಿಗೆ ಒತ್ತು ನೀಡುವ ಎರೆಹುಳು ಗೊಬ್ಬರ ತಯಾರಿಕೆ ಮತ್ತು ಸಸ್ಯಾಭಿವೃದ್ದಿ ಮಾಡಿ ಉತ್ತಮ ದುಡಿಮೆಯನ್ನು ಕಂಡುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕಾರಾಗೃಹದಲ್ಲಿಯೇ ತರಬೇತಿ ನೀಡುವುದಲ್ಲದೆ ಅಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಸಹಕಾರಿಯಾಗಲು ಬಯಸುತ್ತೇನೆ ಎಂದು ಅವರು ಹೇಳಿದರು.
ಡಾ.ನಂದೀಶ್, ಡಾ.ಸಂತ್ತೋಷ್ ಹಾಗೂ ಡಾ.ಸೌಮ್ಯ ರವರುಗಳು ಕ್ರಮವಾಗಿ ಅಣಬೆ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಮತ್ತು ಸಸ್ಯಾಭಿವೃದ್ದಿ ತಂತ್ರಜ್ಞಾನ ಕುರಿತಾದ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕೃಷಿ ತಂತ್ರಜ್ಞರ ಸಂಸ್ಥೆಯ ರಾಜ್ಯ ನಿರ್ದೇಶಕರಾದ ಡಾ. ಕೋಟೆ ಲೋಕೇಶ್ವರ್, ಕಾರಾಗೃಹದ ಜೈಲರ್ ಮಹೇಶ್, ಸಹಾಯಕ ಅಧೀಕ್ಷಕರಾದ ಶಿವಾನಂದಶಿವಪ್ಪ ರವರುಗಳು ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರಾಗೃಹದ ಶಿಕ್ಷಕ ಗೋಪಾಲಕೃಷ್ಣ ನಿರೂಪಿಸಿ ವಂದಿಸಿದರು.