ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೊರಡಿಸಿದ ಇತ್ತೀಚಿನ ಸುತ್ತೋಲೆಯಂತೆ ಇನ್ನು ಮುಂದೆ ನೀವು ಸರ್ಕಾರಿ ಸಬ್ಸಿಡಿಗಳು ಹಾಗೂ ಪ್ರಯೋಜನಗಳನ್ನು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ.
ಇಲ್ಲವೇ, ಆಧಾರ್ ದಾಖಲಾತಿ ಚೀಟಿಯಾದರೂ ಹೊಂದಿರಲೇಬೇಕು.
ಆಧಾರ್ ಸಂಖ್ಯೆ ಇಲ್ಲದಿದ್ದರೆ ಸರ್ಕಾರದ ಯಾವುದೇ ಸವಲತ್ತು ಹಾಗೂ ಸಬ್ಸಿಡಿಗಳು ನಿಮಗೆ ಸಿಗುವುದಿಲ್ಲ ಎಂದು ಸುತ್ತೋಲೆ ತಿಳಿಸಿದೆ.
ಯುಐಡಿಎಐ ಕಳೆದ ವಾರ ಎಲ್ಲಾ ಕೇಂದ್ರ ಸಚಿವಾಲಯಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಈ ಸುತ್ತೋಲೆ ಹೊರಡಿಸಿದೆ.
ಆಧಾರ್ ಸಂಖ್ಯೆ ಹೊಂದಿಲ್ಲದೆ ಸರ್ಕಾರ ನೀಡುವ ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಪಡೆಯುತ್ತಿರುವವರಿಗೆ ಆಧಾರ್ ನಿಯಮಗಳನ್ನು ಬಿಗಿಗೊಳಿಸಲು ಆಗಸ್ಟ್ 11 ರಂದು ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಎನ್ನಲಾಗಿದೆ. ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬರುವ ಸವಲತ್ತುಗಳು, ಸಬ್ಸಿಡಿಗಳು ಹಾಗೂ ಸೇವೆಗಳನ್ನು ನೀಡಲು ಫಲಾನುಭವಿಗಳ ಅರ್ಹತೆಯನ್ನು ನಿರ್ಧರಿಸುವ ಸಲುವಾಗಿ ಈಗ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ ಸರ್ಕಾರದ ಪ್ರಮಾಣ ಪತ್ರಗಳನ್ನು ಬಯಸಿದರೂ ಕೂಡ ಆಧಾರ್ ಕಡ್ಡಾಯ ಎಂದು ತಿಳಿಸಲಾಗಿದೆ.