ಭಾರತೀಯ ವಿಮಾನಯಾನ ಸೇವೆ ಅತ್ಯಂತ ಸುರಕ್ಷಿತವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ರಕ್ಷಣಾ ಗುಣಮಟ್ಟವನ್ನು ಪಾಲನೆ ಮಾಡಲಾಗುತ್ತಿದೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಂತರ ಸುಮಾರು 6 ಸಾವಿರ ಕಾರ್ಯಾಚರಣೆಗಳು ನಡೆದಿವೆ. ಕೆಲವು ವೇಳೆ ಒತ್ತಡದ ಸಂದರ್ಭದಲ್ಲಿ ಅದು 7 ಸಾವಿರಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸಕ್ತ ವರ್ಷದ ಏಪ್ರಿಲ್ 1ರಿಂದ ಜೂ.30ರವರೆಗೆ ಸುಮಾರು 150 ಕಾರ್ಯಾಚರಣೆ ದೋಷಗಳು ಕಂಡುಬಂದಿವೆ.
ಮೇ 2ರಿಂದ ಜು.13ರ ನಡುವೆ 353 ಸ್ಥಳ ಪರಿಶೀಲನೆ ನಡೆಸಲಾಗಿದೆ. ವಿಶೇಷ ಕಾರ್ಯಾಚರಣೆ ಮೂಲಕ ಭಾರತೀಯ ವಿಮಾನ ಸಂಚಾರ ಸುರಕ್ಷಿತ ಎಂಬುದು ಪುನರುಚ್ಚರಿಸಲ್ಪಟ್ಟಿದೆ ಎಂದರು.
ಕಳೆದ 15 ದಿನಗಳಲ್ಲಿ 15 ಸಣ್ಣ ಪ್ರಮಾಣದ ತಾಂತ್ರಿಕ ಸಮಸ್ಯೆಗಳು ಕಂಡುಬಂದಿವೆ.
ಆದರೆ ಇವಾವೂ ದೊಡ್ಡ ಸಮಸ್ಯೆಗಳಲ್ಲ. ಭಾರತೀಯ ವಿಮಾನಯಾನ ಸೇವಾ ವ್ಯವಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟದ ಖಾತ್ರಿಯನ್ನು ಹೊಂದಿದೆ ಎಂದಿದ್ದಾರೆ.
ಸಾವಿರಾರು ವಿಮಾನಗಳು ಲಕ್ಷಾಂತರ ಪ್ರಯಾಣಿಕರನ್ನು ಸಾಗಾಟ ಮಾಡುತ್ತದೆ. 40ರಿಂದ 50 ಗಂಟೆಗಳ ಕಾಲ ಆಕಾಶದಲ್ಲಿ ತೇಲುವ ವಿಮಾನಗಳ ಸುರಕ್ಷತೆಗೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದಿದ್ದಾರೆ.
ಸ್ಪೈಸ್ಜೆಟ್ನ ಶೇ.50ರಷ್ಟು ವಿಮಾನಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 8 ವಾರಗಳ ಕಾಲ ಅವುಗಳ ಮೇಲೆ ತೀವ್ರ ನಿಗಾ ಇಟ್ಟು ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈವರೆಗಿನ ಎಲ್ಲ ವರದಿಯ ಪ್ರಕಾರ ಅಪಾಯಕಾರಿಯಾಗಿರುವ ಯಾವುದೇ ಸಂಭವಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ವಿಮಾನಯಾನ ಸಚಿವ ಜ್ಯೋತಿರಾತ್ಯ ಶಿಂಧೆ ಅವರು ಕಳೆದೆರಡು ದಿನಗಳ ಹಿಂದೆ ಲೋಕಸಭೆಯಲ್ಲಿ ಉತ್ತರ ನೀಡಿ, 2021ರ ಜುಲೈ 1ರಿಂದ 2022ರ ಜೂ.30ರ ನಡುವೆ 478 ತಾಂತ್ರಿಕ ದೋಷಗಳು ಕಂಡುಬಂದಿರುವುದಾಗಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ವಿಮಾನಯಾನದ ಸುರಕ್ಷತೆಯ ಬಗ್ಗೆ ಪ್ರಶ್ನೆ ಉದ್ಭವಿಸಿತ್ತು.