ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ನ ವೇಯ್ಟ್ ಲಿಪ್ಟಿಂಗ್ ವಿಭಾಗದ 61 ಕೆಜಿ ವಿಭಾಗದಲ್ಲಿ ಕನ್ನಡಿಗ ಉಡುಪಿ ಮೂಲದ ಗುರುರಾಜ್ ಪೂಜಾರಿ ಕಂಚಿನ ಪದಕ ಗೆಲ್ಲುವ ಭಾರತದ ತ್ರಿವರ್ಣ ಧ್ವಜ ಹಾರಿಸುವುದರ ಜೊತೆಗೆ ರಾಜ್ಯಕ್ಕೂ ಹೆಮ್ಮೆ ತಂದಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪು ತಾಲೂಕಿನ ವಂಡ್ಸೆ ಗ್ರಾಮದ ಮಹಾಬಲ ಹಾಗೂ ಪದ್ದು ಪೂಜಾರಿ ದಂಪತಿ ಮಗನಾಗಿರುವ ಗುರುರಾಜ್ ಪೂಜಾರಿ ಬರ್ಮಿಂಗ್ ಹ್ಯಾಮ್ನಲ್ಲಿ ಪದಕ ಖಚಿತಪಡಿಸಿಕೊಳ್ಳುತ್ತಿದ್ದಂತೆ ಕುಟುಂಬಸ್ಥರು ಗುರುರಾಜ್ ಗೆಲುವನ್ನು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಕುಣಿದು ಸಂಭ್ರಮಿಸಿದ್ದಾರೆ.
ಗುರುರಾಜ್ ಪೂಜಾರಿ ಅವರು ಪುರುಷರ 61 ಕೆ.ಜಿ ವಿಭಾಗದಲ್ಲಿ 269 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಜಯಿಸಿ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಮಲೇಷ್ಯಾದ ಕ್ರೀಡಾಪಟು ಚಿನ್ನ ಹಾಗೂ ಪಪುವಾ ನ್ಯೂಗಿನಿಯಾ ಕ್ರೀಡಾಪಟು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.
ಟ್ರಕ್ ಚಾಲಕನ ಮಗನಾಗಿರುವ ಗುರುರಾಜ ಬಡತನದಲ್ಲೇ ಬೆಳೆದರೂ, ಸಾಧನೆ ಮಾಡಬೇಕೆಂಬ ಛಲ ಮತ್ತು ಕ್ರೀಡೆ ಮೇಲಿನ ಆಸಕ್ತಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದೆ. ವಿಶೇಷವೆಂದ್ರೆ ವೇಟ್ ಲಿಫ್ಟರ್ ಆಗಿರುವ ಗುರುರಾಜ ಮೊದಲು ಕುಸ್ತಿಪಟು ಆಗಿದ್ದರು.
2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಸುಶೀಲ್ ಕುಮಾರ್ ಒಲಂಪಿಕ್ ಪದಕ ಗೆದ್ದಿದ್ದನ್ನು ನೋಡಿ ಪ್ರಭಾವಿತರಾಗಿದ್ದ ಗುರುರಾಜ್ ಕುಸ್ತಿಯಲ್ಲಿ ಮೊದಲು ಅಭ್ಯಾಸ ಪ್ರಾರಂಭಿಸಿದ್ದರು. ಆದರೆ, ಶಾಲೆಯ ಶಿಕ್ಷಕರ ಸಲಹೆಯ ನಂತರ ವೇಟ್ಲಿಫ್ಟಿಂಗ್ ಕಡೆಗೆ ಜಾರಿದ್ದರು. ಇದೀಗ ಕಾಮನ್ವೆಲ್ತ್ ಗೇಮ್ಸ್ನಲ್ಲಿ ತಮ್ಮ 2ನೇ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.