ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನ ಕೇಂದ್ರ (ಇಎಂಆರ್ಸಿ)ದ ತಾಂತ್ರಿಕ ಸಿಬ್ಬಂದಿ ಕೆ.ಗೋಪಿನಾಥ್ ಅವರ ಸಾಕ್ಷ್ಯಚಿತ್ರಗಳು ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.
ಆ.22ರಿಂದ 26ರವರೆಗೆ ಮಧ್ಯಪ್ರದೇಶದ ಭೂಪಾಲ್ನಲ್ಲಿ ರಾಷ್ಟ್ರೀಯ ವಿಜ್ಞಾನ ಸಾಕ್ಷ್ಯಚಿತ್ರಗಳ ಚಿತ್ರೋತ್ಸವ ನಡೆಯಲಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಪ್ರಸಾರ ಸಂಸ್ಥೆಯು ಆಯೋಜಿಸುತ್ತಿದೆ.
ದೇಶದಾದ್ಯಂತ 71 ಸಾಕ್ಷ್ಯಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
‘ದಿ ಫಸ್ಟ್ ಫೈಟ್’-ಇಂಡಿಯನ್ ಗ್ರೇ ಹಾರ್ನ್ ಬಿಲ್ ಪಕ್ಷಿ (ಮುಂಗಟ್ಟೆ ಪಕ್ಷಿ)ಯ ಜೀವನ ಶೈಲಿ ಕುರಿತಾದ ಸಾಕ್ಷ್ಯಚಿತ್ರವು 21 ನಿಮಿಷಗಳದಾಗಿದ್ದು, ಇಂಗ್ಲಿಷ್ ಭಾಷೆಯಲ್ಲಿದೆ. ‘ಲಿಕ್ವಿಡ್ ವೆಸ್ಟ್ ಮ್ಯಾನೆಜೈಂಟ್-ಸ್ವಚ್ಛ ಪರಿಸರ’ ಗೃಹ ಬಳಕೆಯ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಸುಲಭ ವಿಧಾನ ಕುರಿತಾದ ಸಾಕ್ಷ್ಯಚಿತ್ರವು 11 ನಿಮಿಷಗಳದಾಗಿದ್ದು, ಕನ್ನಡ ಭಾಷೆಯಲ್ಲಿದೆ. ಇವುಗಳಿಗೆ ಗೋಪಿನಾಥ್ ಛಾಯಾಗ್ರಹಣ, ಬರಹ, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ.
‘ದಿ ಜರ್ನಿ ಆಫ್ ಸಿಲ್ಕ್’- ರೇಷ್ಮೆ ಕೃಷಿ ಸಮಗ್ರ ಮಹಿತಿ ಮತ್ತು ಉಪಯೋಗಗಳ ಕುರಿತಾದ ಸಾಕ್ಷ್ಯಚಿತ್ರವು 15 ನಿಮಿಷಗಳದಾಗಿದ್ದು, ಇಂಗ್ಲಿಷ್ ಭಾಷೆಯದಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ಸಂಶೋಧನೆ ಮತ್ತು ಬರಹವನ್ನು ಮೈಸೂರು ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿಜ್ಞಾನ ವಿಭಾಗದ ಡಾ.ಆರ್.ಎಸ್. ಉಮಾಕಾಂತ್ ಮಾಡಿದ್ದಾರೆ. ಕೆ.ಗೋಪಿನಾಥ್ ಛಾಯಾಗ್ರಹಣ, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ.
‘ಈ ಮೂರೂ ಸಾಕ್ಷ್ಯಚಿತ್ರಗಳು ಕಳೆದ ವರ್ಷ ನವದೆಹಲಿಯ ಸಿಇಟಿ-ಎನ್ಸಿಇಆರ್ಟಿ ಆಯೋಜಿಸಿದ್ದ 25ನೇ ಅಖಿಲ ಭಾರತ ಮಕ್ಕಳ ಶೈಕ್ಷಣಿಕ ಆಡಿಯೊ ಮತ್ತು ವಿಡಿಯೊ ಸಾಕ್ಷ್ಯಚಿತ್ರೋತ್ಸವ-2021ರಲ್ಲಿ 4 ಪ್ರಶಸ್ತಿಗಳನ್ನು ಪಡೆದುಕೊಂಡಿವೆ.
ಇವುಗಳನ್ನು ನಿರ್ಮಿಸುವಲ್ಲಿ ಇಎಂಆರ್ಸಿ ನಿರ್ದೇಶಕ ಪ್ರೊ.ಎಚ್.ರಾಜಶೇಖರ್, ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪಾಲಿಮರ್ ಸೈನ್ಸ್ ವಿಭಾಗದ ಪ್ರೊ.ಆರ್.ಎಲ್.ಜಗದೀಶ್ ಸಹಕಾರ ನೀಡಿದ್ದಾರೆ ಎಂದು ಗೋಪಿನಾಥ್ ತಿಳಿಸಿದ್ದಾರೆ.