ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ.
ರಾಜಕೀಯ ಬಿಕ್ಕಟ್ಟಿನ ಬಳಿಕ ಇದೇ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣಗಳು ವಿಧಾನಸಭೆಯಲ್ಲಿ ಮುಖಾಮುಖಿಯಾಗಲಿವೆ.
ಹೊಸ ಮುಖ್ಯಮಂತ್ರಿಯು ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಸಾಬೀತುಪಡಿಸಬೇಕಿದೆ. 2 ದಿನಗಳ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನದ ಮೊದಲ ದಿನವಾದ ಇಂದೇ ಸ್ಪೀಕರ್ ಸ್ಥಾನದ ಚುನಾವಣೆ ನಡೆಯಲಿದೆ.
ಶಿವಸೇನೆ ಶಾಸಕರ ಬಂಡಾಯದಿಂದಾಗಿ ಅಧಿಕಾರ ಕಳೆದುಕೊಂಡ ಉದ್ಧವ್ ಠಾಕ್ರೆ ಇದೀಗ ಪಕ್ಷದ ಮೇಲೆ ಹಿಡಿತ ಉಳಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ಮೇಲಿನ ಹಿಡಿತವನ್ನೂ ಕಳೆದುಕೊಂಡರೆ ಮಹಾರಾಷ್ಟ್ರ ರಾಜಕಾರಣದಲ್ಲಿ ಉದ್ಧವ್ ಅಪ್ರಸ್ತುತರಾಗುವ ಅಪಾಯ ಎದುರಿಸಬೇಕಾಗುತ್ತದೆ. ಶಿವಸೇನೆಯ 55 ಶಾಸಕರ ಪೈಕಿ 39 ಮಂದಿ ಉದ್ಧವ್ ಠಾಕ್ರೆ ವಿರುದ್ಧ ತಿರುಗಿಬಿದ್ದಿದ್ದರು. ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಪಕ್ಷದ ಮೇಲೆ ಉದ್ಧವ್ ಹೊಂದಿದ್ದ ಹಿಡಿತದ ಬಗ್ಗೆ ಈ ಬೆಳವಣಿಗೆಯು ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು. ಬಂಡಾಯ ಶಾಸಕರು ಬಿಜೆಪಿ ಆಡಳಿತದ ಗುಜರಾತ್, ಅಸ್ಸಾಂ ಮತ್ತು ಗೋವಾಗಳಲ್ಲಿ 10 ದಿನಗಳ ಕಾಲ ಸಂಚರಿಸಿದ ನಂತರ ಮುಂಬೈಗೆ ಹಿಂದಿರುಗಿದ್ದಾರೆ.
ಪಕ್ಷದಲ್ಲಿ ತಮಗೆ ಅಷ್ಟು ಬೆಂಬಲ ಇಲ್ಲ ಎನ್ನುವುದು ಖಚಿತವಾದ ನಂತರವೂ ಉದ್ಧವ್ ಠಾಕ್ರೆ ಬಂಡಾಯ ಶಾಸಕರಿಗೆ ಗೆಲುವು ಸುಲಭದ ತುತ್ತಾಗದಂತೆ ಮಾಡಬೇಕು ಎನ್ನುವ ಹಟವನ್ನು ಬಿಟ್ಟುಕೊಟ್ಟಿಲ್ಲ. ಶಿವಸೇನೆಯ ಶಾಸಕ ರಾಜನ್ ಸಾಲ್ವಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ತಮ್ಮ ಬಣದ ಉಮೇದುವಾರರಾಗಿ ನಿಲ್ಲಿಸಿದ್ದಾರೆ. ಬಿಜೆಪಿಯು ಶಾಸಕ ರಾಹುಲ್ ನರ್ವೆಕರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಉಮೇದುವಾರರಾಗಿ ನಿಲ್ಲಿಸಿದೆ. ಏಕನಾಥ್ ಶಿಂದೆ ಬಣದ ಬೆಂಬಲವೂ ಇವರಿಗೆ ಇದೆ.
ಬಂಡಾಯ ಶಾಸಕರು ತಮ್ಮದೇ ನಿಜವಾದ ಶಿವಸೇನೆ, ಬಹುತೇಕ ಶಾಸಕರ ತಮಗೇ ಇದೆ ಎಂದು ಪ್ರತಿಪಾದಿಸಿದ್ದಾರೆ. ಮಹಾವಿಕಾಸ್ ಅಘಾಡಿ ಸರ್ಕಾರದ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರು 16 ಬಂಡಾಯ ಶಾಸಕರ ವಿರುದ್ಧ ಅನರ್ಹತೆಯ ವಿಧಿವಿಧಾನಗಳನ್ನು ಆರಂಭಿಸಿದ್ದಾರೆ. ಈ ಪ್ರಕರಣದ ವಿಚಾರಣೆಯು ಇನ್ನೂ ಸುಪ್ರೀಂಕೋರ್ಟ್ನಲ್ಲಿ ಬಾಕಿಯಿದೆ. ಬಂಡಾಯ ಶಾಸಕರಿಗೆ ಪ್ರತಿಕ್ರಿಯಿಸಿಸಲು ಡೆಪ್ಯುಟಿ ಸ್ಪೀಕರ್ ನೀಡಿದ್ದ 48 ಗಂಟೆಗಳ ಕಾಲಮಿತಿಯನ್ನು ಸುಪ್ರೀಂಕೋರ್ಟ್ ಜುಲೈ 12ರವರೆಗೆ ವಿಸ್ತರಿಸಿತ್ತು.
ವಿಧಾನಸಭೆಯಲ್ಲಿ ನಾಳೆ ಅಧಿವೇಶನ ಆರಂಭವಾದ ತಕ್ಷಣ ಉದ್ಧವ್ ಠಾಕ್ರೆ ಬಣದ ಶಾಸಕರು ಬಂಡಾಯ ಶಾಸಕರು ತಮ್ಮ ವಿಪ್ಗೆ ಬದ್ಧರಾಗಿರಬೇಕು, ಬಿಜೆಪಿಯ ಸಾಲ್ವಿ ಅವರ ಪರವಾಗಿ ಮತ ಚಲಾಯಿಸುವಂತಿಲ್ಲ ಎಂದು ಕೂಗೆಬ್ಬಿಸಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿಯ ಬೆಂಬಲದೊಂದಿಗೆ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿಗೆ ಏಕನಾಥ್ ಶಿಂದೆ ಬಣವು ತಮಗೆ ಯಾವುದೇ ವಿಪ್ ಅನ್ವಯವಾಗುವುದಿಲ್ಲ ಎಂದು ಈಗಾಗಲೇ ಘೋಷಿಸಿದೆ. ಒಟ್ಟಿನಲ್ಲಿ ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯಲಿರುವ ಅಧಿವೇಶನವು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿವೆ.