ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮಣ್ಣು ಉಳಿಸಿ ಅಭಿಯಾನದ ಬೃಹತ್ ಸಮಾರಂಭ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸದ್ಗುರು ಜಗ್ಗಿ ವಾಸುದೇವ್ ಅವರ ನಡುವಿನ ಬಾಂಧವ್ಯ ನೆರೆದಿದ್ದವರ ಗಮನ ಸೆಳೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜಗ್ಗಿ ವಾಸುದೇವ್ ಅವರ ಕಾಲು ಮುಟ್ಟಿ ಯಡಿಯೂರಪ್ಪ ನಮಸ್ಕರಿಸಿದ್ದಾರೆ. ಅನಂತರ, ಯಡಿಯೂರಪ್ಪ ಭಾಷಣ ಮಾಡಲು ತೆರಳುವ ಸಂದರ್ಭದಲ್ಲಿಯೂ ಸದ್ಗುರು ಕಾಲಿಗೆ ನಮಸ್ಕರಿಸಿದ್ದಾರೆ.
ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಈ ಶತಮಾನದಲ್ಲಿ ನಾವು ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಪ್ರಪಂಚದಾದ್ಯಂತ ಪ್ರವಾಹ, ಅತಿವೃಷ್ಟಿ, ಪರಿಸರ ಅಸಮತೋಲನ ಹೆಚ್ಚಾಗುತ್ತಿದೆ. ನಾಗರಿಕತೆ ಹೆಚ್ಚಾಗುತ್ತಿದೆ. ಉಸಿರಾಟಕ್ಕೆ ಶುದ್ಧ ಗಾಳಿ, ನೀರೂ ಸಿಕ್ಕಿಲ್ಲ. ಗಾಳಿ, ನೀರಿಗೆ ಪರಿತಪಿಸುವ ಸನ್ನಿವೇಶ ಇದೆ ಎಂದು ವಿಷಾದಿಸಿದ್ದಾರೆ.
ಈ ಹಿಂದೆ ರಾಜರು ಸಾಮ್ರಾಜ್ಯಗಳಿಗಾಗಿ ಹೋರಾಡಿದ್ದರು. ಪೆಟ್ರೋಲ್, ಡೀಸೆಲ್, ನೀರಿಗಾಗಿ ಹೋರಾಟ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನದ ಅವಶ್ಯಕತೆ ಇದೆ. ಈ ಅಭಿಯಾನ ಸಮಯೋಚಿತವಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಮಣ್ಣು ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಭಾಷಣದ ಮಧ್ಯೆ ಯಡಿಯೂರಪ್ಪಗೆ ಕೆಮ್ಮು ಬಂದಾಗ ಸದ್ಗುರು ನೀರು ತಂದುಕೊಟ್ಟರು.