ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಗೆ ಸ್ಥಾನ ನೀಡಿಲ್ಲ.
ರಾಜ್ಯಸಭಾ ಸ್ಥಾನದ ಟಿಕೆಟ್ ನಿರಾಕರಣೆಗೊಂಡಿದ್ದರಿಂದ ಪಕ್ಷದ ವಿರುದ್ಧ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದ, ಪಕ್ಷ ಸಂಘಟನೆಯಲ್ಲಿ ಯಾವುದೇ ರೀತಿಯ ಆಸಕ್ತಿ ತೋರಿಸುತ್ತಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.
ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲು ಪಕ್ಷದಿಂದ ಟಿಕೆಟ್ ನಿರಾಕರಣೆಯಾಗುತ್ತಿದ್ದಂತೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೂರವಾಣಿ ಮೂಲಕ ಕೆಲಹೊತ್ತು ಗುಲಾಂ ನಬಿ ಆಜಾದ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷೆ ನೀಡಿರುವ ಪಕ್ಷದಲ್ಲಿ 2ನೇ ಸ್ಥಾನವನ್ನು ಕೂಡ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಗುಲಾಂ ನಬಿ ಆಜಾದ್ ಅವರಿಗೆ ದೂರವಾಣಿ ಕರೆ ಮಾಡಿರುವ ಸೋನಿಯಾ ಗಾಂಧಿ, ಪಕ್ಷಕ್ಕೆ ಸಂಬಂಧಿಸಿದ ಕೆಲವೊಂದು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ನಿಮಗೆ ಪಕ್ಷದಲ್ಲಿ 2ನೇ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಇದಕ್ಕೆ ನಿರಾಕರಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ರಾಜಸ್ಥಾನದಲ್ಲಿ ನಡೆದ ಚಿಂತನ್ ಶಿವಿರ್ ನಲ್ಲಿ ಗುಲಾಂ ನಬಿ ಆಜಾದ್ ಮತ್ತು ಅವರ ಬೆಂಬಲಿಗರು ಭಾಗಿಯಾಗಿರಲಿಲ್ಲ. ಆದ್ದರಿಂದ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ಟಿಕೆಟ್ ನಿರಾಕರಣೆಯಾಗಿದೆ. ಈ ಸಲದ ಕಾಂಗ್ರೆಸ್ ಪಟ್ಟಿಯಲ್ಲಿ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ವೀರಪ್ಪ ಮೊಯ್ಲಿ ಹೆಸರು ಇಲ್ಲ. ಇವರ ಬದಲಿಗೆ ಬೇರೆಯವರಿಗೆ ಕಾಂಗ್ರೆಸ್ ಅವಕಾಶ ಕೊಟ್ಟಿದೆ.
ಕಾಂಗ್ರೆಸ್ನ ಜಿ -23 ಗುಂಪಿನ ಪ್ರಮುಖ ಸದಸ್ಯರಾಗಿರುವ ಗುಲಾಂ ನಬಿ ಆಜಾದ್ ಈಗ ಪಕ್ಷದ ವಿರುದ್ಧ ರೆಬೆಲ್ ಆಗಿದ್ದಾರೆ. ಮುಂದೆ ಯಾವ ರೀತಿಯ ನಿರ್ಧಾರ ತೆಗೆದು ಕೊಳ್ಳುತ್ತಾರೆ ಎಂಬುವುದು ಎಲ್ಲರಲ್ಲೂ ಕುತೂಹಲ ಮೂಡಿಸುವಂತಾಗಿದೆ.