ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಆರ್. ಪರಮೇಶ್ವರಪ್ಪನವರು ತಿಳಿಸಿದರು.
ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಮಾನಸ ಟ್ರಸ್ಟ್, ನಮ್ಮ ಹಳ್ಳಿ ಥಿಯೇಟರ್ ಶಿವಮೊಗ್ಗ, ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್ ನಲ್ಲಿ ಮನಸ್ಪೂರ್ತಿ ಶಿಬಿರ ಕಾರ್ಯಕ್ರಮ ಆರಂಭಗೊಂಡಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಕಾರಣದಿಂದ ಎರಡು ವರ್ಷ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗಿದೆ. ಹಲವಾರು ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದಾರೆ. ಎರಡು ವರ್ಷಗಳ ನಂತರ ಈಗ ಮತ್ತೆ ಮಕ್ಕಳೆಲ್ಲರೂ ಶಾಲೆಯತ್ತ ಮುಖ ಮಾಡಿದ್ದಾರೆ. ಇದು ಸಂತೋಷದ ವಿಚಾರ. ಐದು ವರ್ಷಗಳಿಂದ ಮನಸ್ಪೂರ್ತಿ ಶಿಬಿರವನ್ನು ಮಾನಸ ನರ್ಸಿಂಗ್ ಹೋಮ್ ನವರು ನಡೆಸುತ್ತಾ ಬಂದಿದ್ದಾರೆ. ಈಗ ಯಶಸ್ವಿಯಾಗಿ ಐದನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಶಿಬಿರದಲ್ಲಿ ಆಗಮಿಸಿದ ಎಲ್ಲಾ ಮಕ್ಕಳು 12 ದಿನಗಳ ಈ ಶಿಬಿರದಲ್ಲಿ ಯೋಗ, ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮ, ಕ್ಲೇ ಮಾಡ್ಲಿಂಗ್ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ. ಎಲ್ಲ ಮಕ್ಕಳು ಈ ಬೇಸಿಗೆ ರಜೆಯನ್ನು ವ್ಯರ್ಥ ಮಾಡದೇ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಶಿವಮೊಗ್ಗ ಎಂ.ಸಿ.ಸಿ.ಎಸ್. ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ಗಣಿತ ಇಷ್ಟವೋ ಅಥವಾ ಕತೆ ಕೇಳುವುದು ಇಷ್ಟವೋ ಎಂದು ಪ್ರಶ್ನಿಸಿದರು. ಶಾಲೆಗಳಲ್ಲಾದರೆ ಒಂದಾದ ನಂತರ ಒಂದು ತರಗತಿಗಳು ನಡೆಯುತ್ತಲೇ ಇರುತ್ತವೆ. ಪರೀಕ್ಷೆಗಳು, ಹೋಮ್ ವರ್ಕ್ ಇವುಗಳಲ್ಲಿಯೇ ಕಾಲಕಳೆಯುತ್ತಿರಾ. ಆದರೆ ಇಂತಹ ಬೇಸಿಗೆ ಶಿಬಿರಗಳಿಂದ ಪಠ್ಯೇತರ ಚಟುವಟಿಕೆಗಳಲ್ಲಿಯೂ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಇಲ್ಲಿ, ನಾಟಕ, ಗಾಯನ, ಯೋಗ, ಆಟೋಟಗಳು ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಇದರಿಂದ ಪ್ರತಿಯೊಂದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಈ ಶಿಬಿರ ಉಪಯೋಗಕರವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗ ಮಾನಸ ಟ್ರಸ್ಟ್ ನಿರ್ದೇಶಕರಾದ ಡಾ. ರಜನಿ ಎ.ಪೈ ಅವರು ಮಾತನಾಡಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಪುಟ್ಟ ಕತೆಯನ್ನು ಹೇಳಿದರು. ಮಕ್ಕಳಲ್ಲಿ ವಿವಿಧ ಬಗೆಯಲ್ಲಿ ಕಥೆಯನ್ನು ಹೇಳುವ ಮತ್ತು ತಮ್ಮ ಕಲ್ಪನೆಯ ಮುಖಾಂತರ ವಿವಿಧ ಬಗೆಯ ಕತೆಗಳನ್ನು ಸೃಷ್ಟಿಸುವ ಸಾಮರ್ಥ್ಯ ಇರುತ್ತದೆ. ಆದರೆ ಈಗಿನ ಆಧುನಿಕತೆಯಿಂದ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ವಿದ್ಯಾರ್ಥಿಗಳ ಸಾಮರ್ಥ್ಯ ಕ್ಷೀಣಿಸುತ್ತಿದೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ಮೊಬೈಲ್ ಕಂಪ್ಯೂಟರ್ ಬದಲಿಗೆ ವಿವಿಧ ಬಗೆಯ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಬೇಕು.
ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಅವರಿಗೆ ಪ್ರೋತ್ಸಾಹ ನೀಡಬೇಕು.
ಈ ನಿಟ್ಟಿನಲ್ಲಿ ಮಾನಸ ನರ್ಸಿಂಗ್ ಹೋಮ್ ಪ್ರತಿವರ್ಷವೂ ಮನಸ್ಪೂರ್ತಿ ಶಿಬಿರವನ್ನು ಹಮ್ಮಿಕೊಂಡು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 12 ದಿನಗಳ ಶಿಬಿರದಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸುವ ಮುಖಾಂತರ ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ಇದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಮಾನಸ ನರ್ಸಿಂಗ್ ಹೋಮ್ ನ ವಿವಿಧ ಸಿಬ್ಬಂದಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹಾಗೂ ಪೋಷಕರು ಉಪಸ್ಥಿತರಿದ್ದರು.