ರಷ್ಯಾ- ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸುವಂತೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾವನ್ನು ಆಗ್ರಹಿಸಿದ್ದಾರೆ.
2 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್ ಜತೆ ಪ್ರಧಾನಿ ಮೋದಿ ಸುಮಾರು 40 ನಿಮಿಷ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಯುದ್ಧ ಕೊನೆಗಾಣಿಸುವಂತೆ ಮೋದಿ, ಸರ್ಗಿ ಯವರಲ್ಲಿ ಮನವಿ ಮಾಡಿದ್ದಾರೆ. ಯುದ್ಧ ನಿಲ್ಲಿಸುವ ನಿಟ್ಟಿ ನಲ್ಲಿ ಕೈಗೊಳ್ಳಲಾಗುವ ಶಾಂತಿ ಮಾತುಕತೆಯನ್ನು ಭಾರತ ಬೆಂಬಲಿಸುತ್ತದೆ ಎಂದೂ ಹೇಳಿದ್ದಾರೆ.
ಉಕ್ರೇನ್-ರಷ್ಯಾ ನಡುವೆ ಶಾಂತಿ ಸ್ಥಾಪನೆಗಾಗಿ ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಬಂದರೆ ಅದಕ್ಕೆ ಭಾರತ ಸಿದ್ಧವಿರುವ ವಿಚಾರವನ್ನು ಮೋದಿಯವರು, ಸರ್ಗಿಯವರಿಗೆ ತಿಳಿಸಿದ್ದಾರೆಂದು ಹೇಳಲಾಗಿದೆ.
ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಗಿ, ಉಕ್ರೇನ್-ರಷ್ಯಾ ಬಿಕ್ಕಟ್ಟನ್ನು ಕೊನೆಗಾಣಿಸಲು ಭಾರತ ಮಧ್ಯಸ್ಥಿಕೆ ವಹಿಸುವುದಾದರೆ ಅದಕ್ಕೆ ಸ್ವಾಗತ. ಭಾರತವು ರಷ್ಯಾದ ಪ್ರಮುಖ ಸ್ನೇಹಿತ. ಜತೆಗೆ ಉಕ್ರೇನ್ ಹಾಗೂ ರಷ್ಯಾ ಜತೆಗೆ ಹಲವಾರು ವ್ಯವಹಾರಗಳಲ್ಲಿ ಭಾಗಿದಾರ.
ಭಾರತವು ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸುವುದಾದರೆ ಅದನ್ನು ರಷ್ಯಾ ಸ್ವಾಗತಿಸುತ್ತದೆ. ಪಾಶ್ಚಾತ್ಯ ರಾಷ್ಟ್ರಗಳು ಮರೆತುಹೋದ ಜವಾಬ್ದಾರಿಯುತ ವರ್ತನೆಯನ್ನು ಭಾರತ ತೋರ್ಪಡಿಸುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ.
ವ್ಯಾಪಾರಕ್ಕೆ ಸದಾ ಸಿದ್ಧ
ರಷ್ಯಾದಿಂದ ಯಾವುದೇ ಸಾಮಗ್ರಿಗಳನ್ನು ಯಾವುದೇ ಕ್ಷಣದಲ್ಲಿ ಭಾರತ ಖರೀದಿಸಲು ಬಯಸಿದರೂ ರಷ್ಯಾ ಸದಾ ಸಿದ್ಧವಿರುತ್ತದೆ ಎಂದೂ ರಷ್ಯಾ ಸಚಿವ ಸರ್ಗಿ ಆಶ್ವಾಸನೆ ನೀಡಿ ದ್ದಾರೆ.
ಇದೇ ವೇಳೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅವರು ಮನಸಾರೆ ಶ್ಲಾಘಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.