CM Siddharamaiah ಸೂಫಿ ಸಂತರ ನಾಡು ಬೀದರ್ ನಲ್ಲಿ ಇಂದು ಮತ್ತು ನಾಳೆ ನಡೆಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಉದ್ಘಾಟನೆಗೂ ಮುನ್ನ ಬೀದರ್ ನಗರದಲ್ಲಿ ಸಮ್ಮೇಳನ ಮೆರವಣಿಗೆ ನಡೆಯಿತು.
ಬೀದರ್ ನಗರದ ಬಸವೇಶ್ವರ ವೃತ್ತದಲ್ಲಿ ಬೈಲಹೊಂಗಲದ ಶ್ರೀ ನಿಜಗುಣಾನಂದ ಸ್ವಾಮೀಜಿ, ಪೌರಾಡಳಿತ ಸಚಿವ ರಹೀಂ ಖಾನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಶಾಂತಿ ಸಂದೇಶವಾಗಿ ಪಾರಿವಾಳ ಹಾರಿ ಬಿಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಈ ವೇಳೆ ಮೆರವಣಿಗೆಯನ್ನುದ್ದೇಶಿಸಿ ಬೈಲಹೊಂಗಲದ ಶ್ರೀನಿಜಗುಣಾನಂದ ಸ್ವಾಮೀಜಿ ಮಾತನಾಡಿದರು. ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್ ಜಿಲ್ಲೆ ಕರ್ನಾಟಕದ ಕಿರೀಟ. ಸೂಫಿ ಸಂತರು ನೆಲೆಸಿದ್ದ ಊರು. ಇಂತಹ ಪುಣ್ಯ ಭೂಮಿಯಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಯುತ್ತಿರುವುದು ತುಂಬಾ ವಿಶೇಷವಾಗಿದೆ. ಆ ಮೂಲಕ ಪತ್ರಕರ್ತರ ಲೇಖನಿಯು ಇಲ್ಲಿನ ಜನರ ಕುಂದು ಕೊರತೆಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವುದರ ಮೂಲಕ ಈ ನೆಲಕ್ಕೆ ಶಾಂತಿ, ನೆಮ್ಮದಿ, ಸುಖ-ಸಮೃದ್ದಿ ಸಿಗುವಂತಾಗಲಿ ಎಂದರು.
ಸಮಾಜದಲ್ಲಿ ಪತ್ರಕರ್ತರ ಹೊಣೆಗಾರಿಕೆ ದೊಡ್ಡದು. ಅವರುಸಮಾಜವನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಬದಲಾದ ಸಂದರ್ಭದಲ್ಲಿ ಮಾಧ್ಯಮವು ಕೂಡ ಕೆಲವರ ಹಿಡಿತಕ್ಕೆ ಸಿಲುಕಿ ಸಮಾಜದ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪತ್ರಕರ್ತರ ಈ ರಾಜ್ಯ ಸಮ್ಮೇಳನವು ಈ ಹೊಣೆಗಾರಿಕೆ ಬಗ್ಗೆ ಹೆಚ್ಚು ಅವಲೋಕನ ನಡೆಸಿಬೇಕಿದೆ ಎಂದರು.
CM Siddharamaiah ಡೊಳ್ಳು ಕುಣಿತ, ಬಂಜಾರ ಮಹಿಳೆಯರ ವಿಶೇಷ ಕುಣಿತ, ಬಸವಣ್ಣ ಹಾಗೂ ಡಿ.ವಿ.ಗುಂಡಪ್ಪ ಭಾವಚಿತ್ರ ಹೊತ್ತಿದ್ದ ಸಾರೋಟ ಹಾಗೂ ಆರ್ಕೇಸ್ಟ್ರಾ ಮೂಲಕ ಬಸವೇಶ್ವರ ವೃತ್ತದಿಂದ ಹೊರಟ ಮೆರವಣಿಗೆಯೂ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಸಮ್ಮೇಳನನಡೆಯುತ್ತಿರುವ ಝೀರಾ ಕನ್ವೆನ್ಷನ್ ಹಾಲ್ ತಲುಪಿತು.
ಈ ಮೆರವಣಿಗೆಯಲ್ಲಿ ಎಲ್ಲ ತಾಲೂಕುಗಳಿಂದ 80ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ ಶಿವಮೊಗ್ಗ ಜಿಲ್ಲೆಯ ಪತ್ರಕರ್ತರ ತಂಡವೂ ಗಮನ ಸೆಳೆಯಿತು.
