MESCOM ಮೆಸ್ಕಾಂನಿಂದ ಜಾರಿಗೆ ತರಲಾದ ಪೂರ್ವಾನ್ವಯದ ವಿದ್ಯುತ್ ದರ ಏರಿಕೆಗೆ ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಏಪ್ರಿಲ್ 2026ರಲ್ಲಿ ವಿತರಿಸಲಾದ ಪರಿಷ್ಕೃತ ವಿದ್ಯುತ್ ಬಿಲ್ಗಳಲ್ಲಿ ಮೇ 2025ರಿಂದ ಮಾರ್ಚ್ 2026ರವರೆಗಿನ ಬಾಕಿ ಮೊತ್ತವನ್ನು ಪೂರ್ವಾನ್ವಯದ ದರದಲ್ಲಿ ಸೇರಿಸಲಾಗಿದೆ. ಇದರಿಂದ ಶಿವಮೊಗ್ಗದ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಲಾಡ್ಜ್ ಗಳ ಮೇಲೆ ಅನಿರೀಕ್ಷಿತ ಮತ್ತು ಬಾರಿ ಆರ್ಥಿಕ ಹೊರೆ ಬಿದ್ದಿದೆ ಎಂದು ಸಂಘ ತಿಳಿಸಿದೆ.
ಹಿನ್ನೋಟದ ಬಿಲ್ಲಿಂಗ್ ಕ್ರಮವು ಅನ್ಯಾಯ. ಆರ್ಥಿಕವಾಗಿ ಹಾನಿಕಾರಕ ಮತ್ತು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಂಘದ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವ್ಯವಹಾರಗಳಿಗೆ ಮುಂಚಿತವಾಗಿ ಮಾಹಿತಿ ನೀಡಿಲ್ಲ ಅಥವಾ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡಿಲ್ಲ ಎಂದು ದೂರಿದ್ದಾರೆ.
ಕೋವಿಡ್ ನಂತರದ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿರುವ ಮತ್ತು ಕಡಿಮೆ ಲಾಭಾಂಶದಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವು ಹಠಾತ್ ಹೆಚ್ಚುವರಿ ಹೊರೆಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಸಂಘವು ಪ್ರಮುಖ ಅಂಶಗಳ ಬಗ್ಗೆ ಪ್ರಸ್ತಾಪಿಸಿದೆ. ಹಲವಾರು ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್ಗಳು ಮುಚ್ಚುವ ಭೀತಿಯಲ್ಲಿವೆ. ನೂರಾರು ಕಾರ್ಮಿಕರ ಉದ್ಯೋಗಕ್ಕೆ ಅಪಾಯ ಎದುರಾಗಿದೆ. ಸ್ಥಳೀಯ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘ ಸರ್ಕಾರದ ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಪೂರ್ವಾನ್ವಯದ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ದರ ಪರಿಷ್ಕರಣೆಯನ್ನು ಕೇವಲ ಮುಂದಿನ ದಿನಾಂಕದಿಂದ ಮಾತ್ರ ಜಾರಿಗೆ ತರಬೇಕು. ಬಿಲ್ಲಿಂಗ್ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಇರಬೇಕು. ಪ್ರಮುಖ ನೀತಿ ಬದಲಾವಣೆಗಳ ಮೊದಲು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಬೇಕು.
MESCOM ಈ ಸಮಸ್ಯೆಯು ಬಗೆಹರಿಯದಿದ್ದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವನ್ನು ಸಂಪರ್ಕಿಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಸಂಘವು ನಿರ್ಧರಿಸಿದೆ. ಈ ವಿಷಯವನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು ಮತ್ತು ಅಗತ್ಯವಿದ್ದಲ್ಲಿ ಸಾಮೂಹಿಕ ಹೋರಾಟ ಸಂಘಟಿಸಲು ಸಂಘವು ನಿರ್ಧರಿಸಿದೆ. “ನಾವು ದರ ಪರಿಷ್ಕರಣೆಯ ವಿರುದ್ಧವಿಲ್ಲ. ಆದರೆ ಪೂರ್ವಾನ್ವಯವಾಗಿ (ಹಿನ್ನೋಟದ) ದರ ಹೇರುವುದು ಸ್ವೀಕಾರಾರ್ಹವಲ್ಲ ಮತ್ತು ಅನ್ಯಾಯದಾಯಕ” ಎಂದು ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷ ಯು.ಎಂ.ಶಂಕರನಾರಾಯಣ ಹೊಳ್ಳ ಹಾಗೂ ಕಾರ್ಯದರ್ಶಿ ಎನ್.ಗೋಪಿನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
