CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರ ನಾಮಪತ್ರ ಸಲ್ಲಿಕೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯನವರು ಮಾತನಾಡಿದರು.
ರಾಜ್ಯದಲ್ಲಿ ಈಗ ಎರಡು ಉಪಚುನಾವಣೆಗಳು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ಯಾಮನೂರು ಶಿವಶಂಕರಪ್ಪ ಹಾಗೂ ಹೆಚ್ ವೈ ಮೇಟಿಯವರು ಗೆದ್ದಿದ್ದರು. ಇವರಿಬ್ಬರೂ ಅಕಾಲಿಕವಾಗಿ ಮರಣ ಹೊಂದಿದ್ದು, ಉಪಚುನಾವಣೆ ನಡೆಯುತ್ತಿದೆ ಎಂದರು.
ಹೆಚ್ ವೈ ಮೇಟಿಯವರು ಆಸ್ಪತ್ರೆಯಲ್ಲಿದ್ದಾಗ ನಾನು ಭೇಟಿಮಾಡಿದ್ದೆ, ಆಗ ಅವರು ಬದುಕುವ ನಿರೀಕ್ಷೆಯನ್ನು ಹೊಂದಿದ್ದರು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅವರು ಐದು ಬಾರಿ ಶಾಸಕರು ಹಾಗೂ ಒಮ್ಮೆ ಸಂಸದರಾಗಿದ್ದರು. ಎರಡು ಬಾರಿ ಮಂತ್ರಿಯೂ ಆಗಿದ್ದರು. ದಲಿತರ, ಅಲ್ಪಸಂಖ್ಯಾತರ, ಬಡವರ, ರೈತರ, ಕಾರ್ಮಿಕರ ಪರವಾಗಿ ಇದ್ದಂತಹ ಜಾತ್ಯತೀತ ವ್ಯಕ್ತಿಯಾಗಿದ್ದರು.
ಎಲ್ಲಾ ಜಾತಿ , ಧರ್ಮದವರನ್ನು ಸಮಾನವಾಗಿ ಕಾಣುವುದು ಮೇಟಿಯವರ ಮೇರು ಗುಣವಾಗಿತ್ತು. ಹಿಂದುಳಿದವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬಹಳ ನಿಷ್ಠಾವಂತ ವ್ಯಕ್ತಿಯಾಗಿದ್ದರು. ಯಾರನ್ನಾದರೂ ನಂಬಿಕೊಂಡರೆ ಅವರನ್ನು ಎಂದಿಗೂ ಕೈಬಿಡುತ್ತಿರಲಿಲ್ಲ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಉಪಚುನಾವಣೆ ನಡೆಯುತ್ತಿದೆ ಎಂದು ತಿಳಿಸಿದರು.
ಉಪಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ನಾನು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳು ಹೈಕಮಾಂಡ್ ಜೊತೆ ಮಾತನಾಡಿ ಮೇಟಿಯವರ ಕುಟುಂಬಕ್ಕೆ ಟಿಕೆಟ್ ಕೊಡಲು ತೀರ್ಮಾನಿಸಲಾಗಿದೆ. ಮರಣ ಹೊಂದಿದ ಅಭ್ಯರ್ಥಿಯ ಮನೆಯವರಿಗೆ ಟಿಕೆಟ್ ಕೊಡುವುದು ನಮ್ಮ ಕಾಂಗ್ರೆಸ್ ಪಕ್ಷದ ಸಂಪ್ರದಾಯ. ಹಾಗಾಗಿ ಮೇಟಿಯವರ ನಾಲ್ಕು ಮಕ್ಕಳ ಪೈಕಿ ಮೇಟಿಯವರ ಪುತ್ರ ಉಮೇಶ್ ಮೇಟಿಯವರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ಎಲ್ಲರನ್ನು ಒಳಗೊಂಡಿರುವ ಪಕ್ಷ. ಈ ದೇಶದ ಎಲ್ಲರನ್ನೂ ಪ್ರತಿನಿಧಿಸುವ ಪಕ್ಷ ಕಾಂಗ್ರೆಸ್ ಮಾತ್ರ. ಸಾಮಾಜಿಕ ನ್ಯಾಯದಲ್ಲಿ ಬದ್ಧತೆಯಿರುವ ಪಕ್ಷ ಕಾಂಗ್ರೆಸ್. ಬಸವಣ್ಣ ಈ ಕೇತ್ರದಲ್ಲಿ ಹುಟ್ಟಿದವರು. ನಮ್ಮ ಪಕ್ಷದ ನಾವೆಲ್ಲರೂ ಬಸವಣ್ಣನವರ ಅನುಯಾಯಿಗಳು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಬಿಜೆಪಿಯವರು ಹಿಂದೂಗಳ ವಾರಸುದಾರರು ಎಂದು ಬಹಳ ಮಾತನಾಡುತ್ತಾರೆ. ನಾವೆಲ್ಲಾ ಹಿಂದೂಗಳಲ್ಲವೇ? ಮೇಟಿಯವರು ಹಿಂದೂ ಅಲ್ಲವೇ? ಹಿಂದೂ ಎನ್ನುವುದು ಜನರಿಗೆ ತೋರ್ಪಡಿಸಲು ಮಾತ್ರವೇ ಹೊರತು ಬಿಜೆಪಿಯವರು ನಿಜವಾಗಿ ಬಡವರು, ಹಿಂದುಳಿದವರು ಅಲ್ಪಸಂಖ್ಯಾತರ ವಿರೋಧಿಗಳು. ಮನುವಾದದಲ್ಲಿ ನಂಬಿಕೆಯುಳ್ಳವರು.
CM Siddharamaih ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಘೋಷಣೆ ಮಾಡಲು ಹೆಚ್ ವೈ ಮೇಟಿಯವರು ಕಾರಣ. ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಯ ಸಂದರ್ಭದಲ್ಲಿ ಮೇಟಿಯವರು ಇಲ್ಲದ್ದು ದುರ್ದೈವ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಬಿಜೆಪಿ ಸರ್ಕಾರ ಇರುವ ವರೆಗೂ ಪರಿಹಾರ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ರೈತ ಮುಖಂಡರು, ಶಾಸಕರೊಂದಿಗೆ ಸಭೆ ಮಾಡಿ ಒಂದೇ ಹಂತದಲ್ಲಿ ಒಪ್ಪಂದದ ಮೂಲಕ ಪರಿಹಾರ ನೀಡಲು ತೀರ್ಮಾನಿಸಿದೆ ಎಂದರು.
ಬಜೆಟ್ ನಲ್ಲಿ ಹಣವನ್ನು ಇಟ್ಟಿಲ್ಲ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ ಅದು ಸತ್ಯಕ್ಕೆ ದೂರವಾದ ವಿಚಾರ. ಮೊನ್ನೆ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಯ ದಿನ ಪರಿಹಾರ ನೀಡಲಾಗಿದೆ. ಜಮೀನು ಕೊಡಲು ಒಪ್ಪಿ ಬರುವ ಎಲ್ಲರಿಗೂ ಪರಿಹಾರ ನೀಡಲಾಗುವುದು. ಕೇಂದ್ರದಲ್ಲಿ ಇಂದಿನವರೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ನಾನು ಹಾಗೂ ಉಪಮುಖ್ಯಮಂತ್ರಿಗಳು ಅನೇಕ ಸಾರಿ ಸಂಬಂಧಪಟ್ಟವರನ್ನು ಭೇಟಿ ಮಾಡಿದರೂ ಇಂದಿನವರೆಗೂ ಅಧಿಸೂಚನೆ ಹೊರಡಿಸಿಲ್ಲ. ಬಿಜೆಪಿಯವರಿಗೆ ನಮ್ಮನ್ನು ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ.
ಉಮೇಶ್ ಮೇಟಿಯವರು ಇಂದು ನಾಮಪತ್ರವನ್ನು ಸಲ್ಲಿಸಿದ್ದು, ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಅವರನ್ನು ಆಶೀರ್ವಾದಿಸುವುದು ನಿಮ್ಮ ಜವಾಬ್ದಾರಿ. ಬಿಜೆಪಿ ಒಡ್ಡುವ ಆಸೆ, ಆಮಿಷಗಳಿಗೆ ಒಳಗಾಗಬೇಡಿ.
ಉಮೇಶ್ ಮೇಟಿಯವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಿ. ಕ್ಷೇತ್ರದಲ್ಲಿ ನಾಲ್ಕೈದು ದಿನ ಇದ್ದು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
