ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ ಹೇಳಿದರು.
ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದ್ದಿಲ್ಲದೇ ಸೇವೆ ಮಾಡುತ್ತಿರುವ ಸಾಕಷ್ಟು ಜನ ಮಹಿಳೆಯರು ನಮ್ಮಲ್ಲಿ ಇರುತ್ತಾರೆ. ಅವರ ಸೇವೆ ಸಮಾಜಕ್ಕೆ ತುಂಬಾ ಅಗತ್ಯವಾಗಿರುತ್ತದೆ. ಅಂತಹ ಮಹಿಳೆಯರನ್ನು ಗುರುತಿಸಿ ಗೌರವಿಸಿದಾಗ ಸಂಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ ಎಂದು ತಿಳಿಸಿದರು.
ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಾಗ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಸಮಾಜಮುಖಿಯಾಗಿ ಸಹ ಬೆಳೆಯಲು ಅವಕಾಶ ದೊರಕುತ್ತದೆ. 40 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಅನನ್ಯ. ಇಂಥವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಒಳ್ಳೆಯ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿದಾಗ ಸಮಾಜದಲ್ಲಿ ಅಂತಹವರ ಸೇವೆ ಇನ್ನೂ ಹೆಚ್ಚಾಗುತ್ತದೆ ಎಂದು ಹೇಳಿದರು.
ಶ್ರೀ ಶಾರದಾ ಶಂಕರ ಭಜನಾ ಮಂಡಳಿ ವತಿಯಿಂದ ಶಿಕ್ಷಕಿ ರಾಜಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ರಾಜಲಕ್ಷ್ಮೀ ಅವರು 3000 ಮಹಿಳೆಯರಿಗೆ ಸೌಂದರ್ಯ ಲಹರಿ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಶಿವಾನಂದ ಲಹರಿ ಸ್ತೋತ್ರಗಳನ್ನು ಹೇಳಿಕೊಟ್ಟಿದ್ದಾರೆ. 30ನೇ ವಯಸ್ಸಿನಿಂದ ಈವರೆಗೂ ತರಬೇತಿ ನೀಡುತ್ತಿದ್ದಾರೆ.
ಸನ್ಮಾನಿತ ರಾಜಲಕ್ಷ್ಮೀ ಅವರು ಗೀತೆಗಳನ್ನು ಹಾಡಿದರು. ಶ್ರೀ ಶಾರದಾ ಶಂಕರ ಭಜನಾ ಮಂಡಳಿ ಸದಸ್ಯರು ಇದ್ದರು. ನಾಗಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ರಾಮಲಿಂಗಪ್ಪ, ಚಿತ್ರಲೇಖಾ ಉಪಾಧ್ಯ, ಸುರೇಶ್, ಇನ್ನರ್ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್ ಹಾಗೂ ವಿವೇಕ್ ಭಾಗವತ್ ಇದ್ದರು.
