Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801 ರ ವೇಳೆಗೆ ಕೇವಲ ಐದುನೂರು ಮನೆಗಳ ಚಿಕ್ಕ ಊರಾಗಿದ್ದ ದಾವಣಗೆರೆಯು ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಇಕ್ಕೇರಿಯ ಸಾಗರ ಸೀಮೆಯ ಕಡೆಯಿಂದ ಅಡಕೆ, ಕಾಳುಮೆಣಸು ಮುಂತಾದುವನ್ನು ಖರೀದಿಸಿ ತಂದು ತಮಿಳುನಾಡಿನ ಆರ್ಕಾಟ್ ಸಮೀಪದ ವಲ್ಲಜಪೇಟೆಗೆ ದಾವಣಗೆರೆಯ ವ್ಯಾಪಾರಿಗಳು ಎತ್ತಿನಗಾಡಿಯಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಪರದೇಶಗಳಿಂದ ಮದರಾಸಿನ ಮುಖಾಂತರ ವಲ್ಲಜಪೇಟೆಗೆ ಬರುತ್ತಿದ್ದ ವಸ್ತುಗಳನ್ನು ದಾವಣಗೆರೆಗೆ ತಂದು ಮಾರಾಟ ಮಾಡುತಿದ್ದರು ಎಂದು ವಿದೇಶೀ ಯಾತ್ರಿಕ ಫ್ರಾನ್ಸಿಸ್ ಬುಕಾನೆನ್ ದಾಖಲಿಸಿದ್ದಾನೆ. ಮುಂದೆ ದಾವಣಗೆರೆಯ ಇಂತಹ ವ್ಯಾಪಾರೋದ್ಯಮಿಗಳಿಗೆ ಶ್ರೀರಕ್ಷೆಯಾಗಿ ಆಶೀರ್ವದಿಸಿ ಇಲ್ಲಿನ ವಾಣಿಜ್ಯೋದ್ಯಮವನ್ನು ಉತ್ತುಂಗಕ್ಕೇರಿಸಿದ್ದು ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದ ಎಂದು ಇಂದಿಗೂ ನಂಬಲಾಗುತ್ತಿದೆ.
ಹೆಬ್ಬಾಳು ಮಠದ ರುದ್ರೇಶ್ವರರ ಕೃಪಾಶೀರ್ವಾದದೊಂದಿಗೆ ಗುಮ್ಮನೂರಿನ ಬಸವಲಿಂಗಯ್ಯ ಪಾರ್ವತಮ್ಮನವರ ಗರ್ಭಾಂಬುದಿಯಲ್ಲಿ 1770 ರಲ್ಲಿ ಜನಿಸಿದ ಮಗುವಿಗೆ ಹುಟ್ಟುವಾಗಲೇ ತಲೆಯ ಮೇಲೊಂದು ಬೊಕ್ಕೆ ಇದ್ದುದರಿಂದ “ಬಕ್ಕೇಶ” ಎಂದು ನಾಮಕರಣ ಮಾಡಲಾಯಿತು, ಮುಂದೆ ಜಂಗಮರಾಗಿ ಪರ್ಯಟನ ಮಾಡುತ್ತಾ ಲೀಲಾ ಪವಾಡಗಳನ್ನು ಮೆರೆದ ಬಕ್ಕೇಶ್ವರರು 1802ನೇ ಇಸ್ವಿಯ ಹಾಗೆ ದಾವಣಗೆರೆಗೆ ಬಂದು ಹಳೆ ಊರಿನ ಶ್ರೀ ದುರ್ಗಾಂಬಿಕಾ ದೇವಸ್ಥಾನ ಶ್ರೀ ಹನುಮಂತ ದೇವರ ದೇವಸ್ಥಾನದ ಬಳಿ ಮಠ ಮಾಡಿಕೊಂಡವರು 1853 ರ ಸುಮಾರಿಗೆ ಲಿಂಗೈಕ್ಯರಾದಾಗ ಅವರ ಆಣತಿಯಂತೆ ಸ್ಮಶಾನ ಸದೃಶವಾಗಿದ್ದ ಚೌಕಿ ಗುಂಡಿಯ ಬಳಿ ಅವರ ಕ್ರಿಯಾ ಸಮಾಧಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಚಿತ್ರದುರ್ಗ ಬೃಹನ್ಮಠದ ಜಗದ್ಗುರುಗಳಾಗಿದ್ದ ಸಣ್ಣ ಪಾದದ ಚೆನ್ನವೀರ ಮಹಾಸ್ವಾಮಿಗಳು ಸಹಾ ಸಾನ್ನಿಧ್ಯ ವಹಿಸಿದ್ದರೆಂದು ತಿಳಿದು ಬರುತ್ತದೆ.
1902 ರ ಸುಮಾರಿಗೆ ಮಾಗಾನಹಳ್ಳಿ ಮನೆತನದವರು ಮುಂತಾಗಿ ಭಕ್ತರು ಸೇರಿ ಬಕ್ಕೇಶ್ವರರ ಕ್ರಿಯಾ ಸಮಾಧಿಗೆ ಗುಡಿಯನ್ನು ನಿರ್ಮಿಸಿದರು. 1924 ರಿಂದ ಶ್ರೀ ಬಕ್ಕೇಶ್ವರ ಮಹಾಸ್ವಾಮಿಗಳವರ ರಥೋತ್ಸವ ಆರಂಭವಾಯಿತು. 1925 ರ ಸುಮಾರಿಗೆ ಹಂಜಿಗಿ ಮಠದ ವೀರಭದ್ರಯ್ಯನವರು ಬಕ್ಕೇಶ್ವರರ ಗದ್ದುಗೆಯ ಮೇಲೆ ಪೂಜಾ ಮೂರ್ತಿಯನ್ನು, ಪಾದುಕೆಗಳನ್ನು, ಹಿತ್ತಾಳೆಯ ಆನೆಯನ್ನು, ಗುಡಿಗೆ ಕಬ್ಬಿಣದ ಕಟಾಂಜನವನ್ನು, ಕಾಣಿಕೆ ಡಬ್ಬವನ್ನು ಮಾಡಿಸಿಕೊಟ್ಟರೆಂದು ತಿಳಿದು ಬರುತ್ತದೆ. ಕವಿ, ಪಂಡಿತ, ಗಾನಯೋಗಿ ಶ್ರೀ ಡಾ. ಪುಟ್ಟರಾಜ ಗವಾಯಿಗಳವರ ನಿರ್ದೇಶನದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಶಿವ ಭಕ್ತ ಸಿರಿಯಾಳ ಸಹಾಯಾರ್ಥ ನಾಟಕಗಳು ನೆರವೇರಿ ಬಂದ ಹಣದಿಂದ ಶ್ರೀ ಬಕ್ಕೇಶ್ವರರ ಮೂರ್ತಿಗೆ ಬಂಗಾರದ ಕಿರೀಟವು ಅಲಂಕೃತಗೊಂಡಿತು. ಮುಂದೆ ಕೀರ್ತಿ ಶೇಷ ಶಾಮನೂರು ಶಿವಶಂಕರಪ್ಪನವರವರೆಗೆ ಅನೇಕ ಮಹನೀಯರು ಶ್ರೀ ಬಕ್ಕೇಶ್ವರ ಮಹಾ ಸ್ವಾಮಿಯ ದೇವಸ್ಥಾನದ ಅಭಿವೃದ್ಧಿಗೆ ಅನೇಕ ರೀತಿಯ ದಾನ ದೇಣಿಗೆಗಳನ್ನು ನೀಡಿರುವುದು ತಿಳಿದೇ ಇರುತ್ತದೆ.
Bakkeshwara Swamy Rathotsava ಸ್ಮಶಾನ ಸದೃಶವಾಗಿದ್ದ ಚೌಕಿ ಗುಂಡಿ ಪ್ರದೇಶವು ಶ್ರೀ ಗುರು ಬಕ್ಕೇಶ್ವರರ ಕರ್ತೃಗದ್ದುಗೆಯಾದ ನಂತರ ದೊಡ್ಡ ವ್ಯಾಪಾರೋದ್ಯಮ ಪ್ರದೇಶವಾಗಿ, ‘ಚೌಕಿಪೇಟೆ’ಯಾಗಿ, ದಾವಣಗೆರೆಯ ವಾಣಿಜ್ಯೋದ್ಯಮದ ಹೃದಯ ಭಾಗವೇ ಆಗಿ, ರಾಜಬೀದಿಯೂ ಆಗಿ ಪ್ರಖ್ಯಾತವಾಯಿತು.
ಇಂತಹ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಮಹಾ ರಥೋತ್ಸವವು ಪ್ರತಿ ವರ್ಷ ಚೈತ್ರ ಶುದ್ಧ ಪಂಚಮಿಯ ದಿನದಂದು ನೆರವೇರುತ್ತಿದ್ದು ದಾವಣಗೆರೆಯ ಬಹುತೇಕ ಎಲ್ಲಾ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಎಪಿಎಂಸಿಯ ವರ್ತಕರು, ದಲ್ಲಾಲರು, ಗುಮಾಸ್ತರು, ಕಾರ್ಮಿಕರು, ಹಮಾಲಿಗಳು ಆದಿಯಾಗಿ ಎಲ್ಲರೂ ಕುಟುಂಬ ಸಮೇತ ಬಂದು ರಥೋತ್ಸವದಲ್ಲಿ ಭಾಗವಹಿಸುವುದು ಇಂದಿಗೂ ಮುಂದುವರೆದಿದೆ, ಅಲ್ಲದೆ ಬಕ್ಕೇಶ್ವರರ ಭಕ್ತ ಪರಂಪರೆಯವರು ಹೊರ ರಾಜ್ಯ ಹೊರ ದೇಶಗಳಲ್ಲಿ ನೆಲೆಸಿದ ಅನೇಕರು ಸಹಾ ಈ ರಥೋತ್ಸವದಲ್ಲಿ ಭಾಗವಹಿಸಲು ಬರುತ್ತಾರೆ.
ಶತಮಾನದಷ್ಟು ಹಳೆಯದಾದ ಪ್ರಾಚೀನ ರಥವು ಶಿಥಿಲಾವಸ್ಥೆ ಹೊಂದುತ್ತಿದೆ ಎಂದು ವಿಶೇಷವಾಗಿ ಸಾಂಪ್ರದಾಯಿಕವಾದ ನೂತನ ರಥವನ್ನು ನಿರ್ಮಿಸಲಾಗಿದ್ದು ಇದೇ ಮಾರ್ಚ್ 23 ಸೋಮವಾರ ಸಂಜೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯವರ ಮಹಾ ರಥೋತ್ಸವ ನೆರವೇರಿತ್ತಿದ್ದು ಇದು ದಾವಣಗೆರೆ ವ್ಯಾಪಾರೋದ್ಯಮದ ಹೃದಯ ಭಾಗದಂತಿರುವ ರಾಜಬೀದಿ ಚೌಕಿಪೇಟೆಯಲ್ಲಿ ನೆರವೇರುವ ಏಕೈಕ ಮಹಾ ರಥೋತ್ಸವವಾಗಿವೆ. ಮಹಾ ರಥೋತ್ಸವದ ಹಿಂದಿನ ದಿನ ಸ್ವಾಮಿಯ ಗಜವಾಹನೋತ್ಸವವು, ಮಹಾ ರಥೋತ್ಸವದ ಮಾರನೆಯ ದಿನ ನಂದಿವಾಹನೋತ್ಸವವು ಸಹಾ ನೆರವೇರುತ್ತದೆ. ಸ್ವಾಮಿಯ ಮಹಾರಥೋತ್ಸವವಂತೂ
ಪಾರಂಪರಿಕ ಭಕ್ತಿ ಶ್ರದ್ಧಾದಿಗಳಿಂದ ಕೂಡಿ ವೈಭವೋಪೇತವಾಗಿ ನೆರವೇರುವುದನ್ನು ವೀಕ್ಷಿಸುವ ಸದವಕಾಶ ಯಾರೂ
ತಪ್ಪಿಸಿಕೊಳ್ಳಬಾರದು.
-ಡಾ. ಎಚ್. ಬಿ. ಮಂಜುನಾಥ, ಹಿರಿಯ ಪತ್ರಕರ್ತರು-
