ವಿಧಾನಪರಿಷತ್ ಅಧಿವೇಶನದಲ್ಲಿ ಪಶುಸಂಗೋಪನೆ ಇಲಾಖೆಯ ಸ್ಥಿತಿಗತಿ ಕುರಿತು ಮಾತನಾಡಿದ ಶಾಸಕರಾದ ಡಿ.ಎಸ್. ಅರುಣ್ ಅವರು, ರಾಜ್ಯದಲ್ಲಿ ಪಶುವೈದ್ಯರ ತೀವ್ರ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಸರ್ಕಾರವು ಬಹುಕಾಲದಿಂದ 400 ಪಶುವೈದ್ಯರನ್ನು ನೇಮಕ ಮಾಡಲಾಗುತ್ತದೆ ಎಂದು ಘೋಷಿಸಿದ್ದರೂ ಇನ್ನೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇತ್ತೀಚೆಗೆ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಯಲ್ಲಿಯೂ ರೋಸ್ಟರ್ ಸಮಸ್ಯೆ ಉಂಟಾಗಿ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಪಶುಸಂಗೋಪನೆ ರೈತರ ಪ್ರಮುಖ ಆದಾಯ ಮೂಲವಾಗಿದ್ದರೂ, ಹಲವಾರು ಪಶುವೈದ್ಯ ಆಸ್ಪತ್ರೆಗಳಲ್ಲಿ ಪಶುವೈದ್ಯರ ಕೊರತೆ, ಅಗತ್ಯ ಔಷಧಿ ಮತ್ತು ವೈದ್ಯಕೀಯ ಸಾಧನಗಳ ಅಭಾವ ಇರುವ ಬಗ್ಗೆ ರೈತರಿಂದ ನಿರಂತರ ದೂರುಗಳು ಬರುತ್ತಿವೆ ಎಂದು ಅವರು ಹೇಳಿದರು. ಆಸ್ಪತ್ರೆಗಳು ಬೆಳಗ್ಗಿನಿಂದಲೇ ಕಾರ್ಯನಿರ್ವಹಿಸುವುದರಿಂದ ರೈತರಿಗೆ ತುರ್ತು ಸೇವೆ ಸಿಗುವಂತೆ ಮೊಬೈಲ್ ವೆಟರ್ನರಿ ಘಟಕಗಳು ಸಂಜೆ 4 ಗಂಟೆಯ ನಂತರ ಕಾರ್ಯನಿರ್ವಹಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಏಪ್ರಿಲ್ 1 ಕಳೆದ ವರ್ಷದಿಂದ ಪಶುಗಳ ಅನುಗ್ರಹ ಯೋಜನೆಯಡಿ ರೈತರಿಗೆ ನೀಡಬೇಕಾದ ಪಾವತಿಗಳು ಇನ್ನೂ ನೀಡಲಾಗಿಲ್ಲ ಎಂಬುದನ್ನು ಉಲ್ಲೇಖಿಸಿ, ರೈತರ ಸಮಸ್ಯೆಗಳ ಬಗ್ಗೆ ಪಶುಸಂಗೋಪನೆ ಇಲಾಖೆ ಗಂಭೀರವಾಗಿ ಗಮನ ಹರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
