JCI Institute ಜೆಸಿಐ ಸಂಸ್ಥೆಯಲ್ಲಿ ಭಾಗಿಯಾಗುವುದರಿಂದ ವ್ಯಕ್ತಿತ್ವ ವಿಕಸನದ ಜತೆಯಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಜೆಸಿಐ ವಲಯ 24ರ ವಲಯ ಅಧ್ಯಕ್ಷ ಮಧುಸೂದನ್ ನಾವಡ ಹೇಳಿದರು.
ಶಂಕರಘಟ್ಟದ ಶ್ರೀಗಂಧ ನೇಚರ್ ರೆಸಾರ್ಟ್ ನಲ್ಲಿ ಜೆಸಿಐ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಲಯ ಮತ್ತು ರಾಷ್ಟ್ರೀಯ ತರಬೇತುದಾರರಿಗೆ ತರಬೇತಿ ನೀಡುವ ವಿಶೇಷ ಕಾರ್ಯಗಾರದಲ್ಲಿ ಮಾತನಾಡಿ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಜೆಸಿಐ ಸಂಸ್ಥೆಗೆ ಸೇರಬೇಕು. ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವಲಯ ತರಬೇತಿ ನಿರ್ದೇಶಕ ಜಿ ಗಣೇಶ ಮಾತನಾಡಿ, ಜೆಸಿಐ ಸಂಸ್ಥೆ ಜೀವನ ಕೌಶಲ್ಯಗಳ ಜೊತೆಗೆ ಮನೋವಿಕಾಸ ಹಾಗೂ ಆತ್ಮವಿಶ್ವಾಸ ವೃದ್ಧಿಸುತ್ತದೆ. ಶಿಸ್ತುಬದ್ಧ ಜೀವನದ ಬಗ್ಗೆ ಹಾಗೂ ಸಂಸ್ಥೆಯನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು. ನಮ್ಮ ಜವಾಬ್ದಾರಿ ಕರ್ತವ್ಯಗಳು ಏನು ಎಂಬುದರ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದರು.
ಕೃತಕ ಬುದ್ಧಿಮತ್ತೆಯನ್ನು ಬಳಸಿ ತರಬೇತಿಯನ್ನು ನೀಡುವುದರ ಬಗ್ಗೆ ಮಾಹಿತಿಯನ್ನು ಬೆಂಗಳೂರಿನ ಸಂದೇಶ ಅವರು ನೀಡಿದರು. ಬೆಂಗಳೂರಿನ ಮನಶಾಸ್ತ್ರಜ್ಞ, ತರಬೇತುದಾರ ಕುಮಾರಸ್ವಾಮಿ ಅವರು ಮಕ್ಕಳಿಗೆ ಯಾವ ರೀತಿ ತರಬೇತಿ ನೀಡಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.
JCI Institute ಅಂತರಾಷ್ಟ್ರೀಯ ತರಬೇತುದಾರರು ಹಾಗೂ ಕಾರ್ಪೊರೇಟ್ ಟ್ರೈನರ್ ವಿಶ್ವನಾಥ ಅವರು ವಿವಿಧ ರೀತಿಯ ತರಬೇತಿ ಮತ್ತು ತರಬೇತಿಯಲ್ಲಿ ಹೊಸ ಹೊಸ ವಿಧಾನಗಳ ಅಳವಡಿಕೆ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ತರಬೇತಿ ನಡೆಸಿದರು.
ರಾಷ್ಟ್ರೀಯ ತರಬೇತುದಾರ ಚಂದ್ರಶೇಖರ್ ಎಸ್. ಮಾತನಾಡಿ, ಜೆಸಿಐ ಸಂಸ್ಥೆ ನೂರಾರು ದೇಶಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಹಾಗೂ ನಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣ ಮಾಡುವ ಅತ್ಯುತ್ತಮ ಸೃಜನಶೀಲ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯಲ್ಲಿ ತರಬೇತಿ ಪಡೆದವರು ಜೀವನದಲ್ಲಿ ಯಶಸ್ವಿಯಾಗಿ ಗುರಿ ಮುಟ್ಟುತ್ತಾರೆ ಎಂದು ತಿಳಿಸಿದರು.
25 ತರಬೇತುದಾರರು ಕಾರ್ಯಕ್ರಮದಲ್ಲಿ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಉದಯ್ ಕದಂಬ, ಜೆಸಿಐ ಪ್ರಮುಖರು ಉಪಸ್ಥಿತರಿದ್ದರು.
JCI Institute ವ್ಯಕ್ತಿತ್ವ ವಿಕಸನದ ಜತೆ ನಾಯಕತ್ವ ಗುಣ ವೃದ್ಧಿ : ಮಧುಸೂದನ್ ನಾವಡ
Date:
