S. N. Channabasappa ಹಿಂದೂ ಮತ್ತು ಸಂಸ್ಕೃತಿ ಎಂಬುದು ಬೇರೆಯಲ್ಲ. ಸಂಸ್ಕೃತಿ ಎಂಬುದು ಒಂದು ಉತ್ತಮ ನಡವಳಿಕೆಯಾಗಿದೆ ಎಂದು ನಗರದ ವಿಧಾನಸಭಾ ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜ, ಶಿವಮೊಗ್ಗ ಇವರುಗಳು ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ಮನುಕುಲಕ್ಕೆ ತತ್ವ ಸಿದ್ಧಾಂತವನ್ನು ನೀಡಿ, ವಚನಗಳ ಮುಖಾಂತರ ಸಂಸ್ಕಾರವನ್ನು ಕೊಡುವಂತ ಕೆಲಸ ರೇಣುಕಾಚಾರ್ಯರು ಮಾಡಿದ್ದಾರೆ. ಗುರುಗಳು ಬರೇ ಮಠಕ್ಕೆ ಸೀಮಿತವಾಗದೆ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಮೂಲಕ ವಿಕಾಸಗೊಳಿಸುವಂತ ಕೆಲಸ ಮಾಡಬೇಕೆಂದು ತಿಳಿಸಿದರು.
ಮಾನವೀಯತೆ ಇದ್ದರೆ ಈ ಜಗತ್ತು ಚೆನ್ನಾಗಿರುತ್ತದೆ ಹಾಗೂ ಶಾಂತಿಯನ್ನು ಸಮಾಜದಲ್ಲಿ ಕಾಪಾಡಬಹುದು. ಮನುಷ್ಯನ ಮನಸ್ಸಿನಲ್ಲಿ ಪರಿಶುದ್ಧತೆ ಕಾಪಾಡಿದರೆ ಧರ್ಮದಲ್ಲಿ ವ್ಯತ್ಯಾಸವಿರದು ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್ ಮಾತನಾಡಿ, ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಒಂದು ಸಮಾಜಕ್ಕೆ ಸೀಮಿತವಾಗಿರದೆ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಆಚರಣೆ ಮಾಡಿದರೆ ಅವರ ತತ್ವಗಳು, ಸಂದೇಶಗಳು ಪ್ರತಿಯೊಬ್ಬರಿಗೆ ಮುಟ್ಟುತ್ತದೆ ಎಂದು. ಜನರು ಧರ್ಮಶ್ರದ್ಧೆ ಮತ್ತು ನಿಷ್ಠೆಯಿಂದ ಸಮಾಜದಲ್ಲಿ ಇರಬೇಕು ಎಂದರು.
S. N. Channabasappa ಜ್ಞಾನದೀಪ ಶಾಲೆಯ ಕನ್ನಡ ಉಪನ್ಯಾಸಕರಾದ ತುರುವನೂರು ಮಲ್ಲಿಕಾರ್ಜುನ ಎಂ ವಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಾನವ ಧರ್ಮ ಶೇಷ್ಠ ವಾದದ್ದು ಎಂದು ಸಮಾಜಕ್ಕೆ 8 ನೇ ಶತಮಾನದಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಸಾರಿದ್ದರು. ದೇವರನ್ನು ದೇವಾಲಯಗಳಲ್ಲಿ ಹುಡುಕುವುದಕ್ಕಿಂತ ನಿಮ್ಮ ಮನಸ್ಸಿನಲ್ಲಿ ಹುಡುಕಬೇಕು ಎಂದು ಹೇಳಿದರು. ಜಾತಿ ಬೇಧ ತೋರದೆ ಸಮಾಜದ ಎಲ್ಲರನ್ನು ಸಮನಾಗಿ ಕಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರು ಡಾ. ಧನಂಜಯ ಸರ್ಜಿ, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿ ಪ್ರಕಾಶ್, ಜಂಗಮ ಸಮಾಜದ ಜಿಲ್ಲಾಧ್ಯಕ್ಷರು ಚಂದ್ರಯ್ಯ, ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷರು ಟಿ ಬಿ ಮಲ್ಲಿಕಾರ್ಜುನಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ಹಾಗೂ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
