ವಿಶೇಷ ಲೇಖನ:
ವಿನಯ್, ಶಿವಮೊಗ್ಗ
ಹೊಸನಗರ ತಾಲ್ಲೂಕಿನ ಕಾರಣಗಿರಿ ಸಿದ್ಧಿ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ರಾಘಣ್ಣನವರಿಗೆ ಕರ್ನಾಟಕ ಸಂಘದ ಗೌರವ ಸದಸ್ಯತ್ವ ನೀಡಿ ಗೌರವಿಲಾಯಿತು. ಖ್ಯಾತ ವಿದ್ವಾಂಸರಾದ ಡಾ. ಶಾಂತರಾಮ ಪ್ರಭು ರಾಘಣ್ಣನವರಿಗೆ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಶಂಕರನಾರಾಯಣ ಶಾಸ್ತಿçಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯದರ್ಶಿಗಳಾದ ವಿನಯ್ ಶಿವಮೊಗ್ಗ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ರಾಗಣ್ಣನವರ ಸ್ವರ ಸಂಯೋಜನೆಯ ಭಾವಗೀತೆಗಳನ್ನು ಶ್ರೀಮತಿ ಮಾನಸ ಶಿವರಾಮಕೃಷ್ಣ, ಶ್ರೀಮತಿ ಸುರೇಖಾ ಹೆಗಡೆ, ಶ್ರೀಮತಿ ಅಂಬಿಕಾ ದೇವರಾಜ್ ಮುಂತಾದ ಕಲಾವಿದರು ಹಾಡಿದರು.
“ಮೇಲೆ ನೀಲಿ ಆಗಸ ……. ಕೆಳಗೆ ತಾಯಿ ಭೂಮಿ….. ದೇವರಿತ್ತ ಗಾಳಿ ನೀರು ಹಂಗೆಲ್ಲಿದೆ ಸ್ವಾಮಿ”?!
ನಮ್ಮ ರಾಘಣ್ಣ ಹಾರ್ಮೋನಿಯಂ ಹಿಡಿದು ಕಣ್ಮುಚ್ಚಿ ಮೇಲಿನ ಸಾಲುಗಳನ್ನು ಜೀವ ತುಂಬಿ ಹಾಡುತ್ತಿದ್ದರೆ ಅದು ನಿಜಕ್ಕೂ ಹಂಗಿರದ ಆನಂದದ ಪ್ರಪಂಚ. ರಾಘಣ್ಣ ಅಸಲಿಗೆ ಈ ಹಂಗಿನ ಪ್ರಪಂಚದಲ್ಲಿ ಹಂಗಿಲ್ಲದೆ ಬದುಕಿದ ಕಲಾವಿದ . ಇಂದಿನದು ಇಂದಿಗೆ , ನಾಳೆ ನೋಡಿದರಾಯಿತು ಎಂಬ ನಿಶ್ಚಿಂತೆಯ ನೆರಳಿನಲ್ಲೇ ಬದುಕು ಕಟ್ಟಿಕೊಂಡ ಮುಗ್ಧ ಜೀವ. ಯವತ್ತೋ, ಎಲ್ಲೋ ಪ್ರೇರಣೆ ಪಡೆದು ಬರೆದ ಯಾವುದೋ ಕವಿಯ ಸಾಲುಗಳನ್ನು ಕೇಳುಗರೆದೆಯಲ್ಲಿ ಬಿತ್ತಿ ಅದು ಅವರದೇ ಭಾವವೇನೋ ಎಂಬಂತೆ ತಮ್ಮ ಹಾಡಿನಿಂದ ಕಟ್ಟಿಕೊಡುವ ಹಾಡುಗಾರ ಸಾಮಾನ್ಯದ ಕಲಾವಿದನಲ್ಲ ….. ರಾಘಣ್ಣ, ಪು. ತಿ. ನ ಸಾಲುಗಳನ್ನು ಹಾಡುತ್ತಿದ್ದರೆ ಗೋಕುಲದ ದರ್ಶನವಾಗುತ್ತದೆ. ಕುವೆಂಪು ಸಾಲುಗಳನ್ನು ಹಾಡುತ್ತಿದ್ದರೆ , ಮಲೆನಾಡ ಪ್ರಕೃತಿಯ ರಮ್ಯತೆ ಕಣ್ಣ ಮುಂದೆ ಸುಳಿಯುತ್ತದೆ. ಇದು ರಾಘಣ್ಣನಂತಹ ಬಲು ಅಪರೂಪದ ಕಲಾವಿದನ ಸತ್ವಶುದ್ಧಿ ! ಹಾಡಿನ ಅನಂದ ಹಾಡು ಹಾಡುವ ಕಲಾವಿದನದೋ? ಕೇಳುವ ಪ್ರೇಕ್ಷಕನದೋ?! ಇದೊಂದು ವಿಪರೀತ ಪ್ರಶ್ನೆಯೇ! ಅದೆಷ್ಚೋ ಬಾರಿ ಹಾಡುವವರು ಹಾಡುತ್ತಾರೆ ಕೇಳುವವರು ಕೇಳುವಂತೆ ಇರುತ್ತಾರೆ.. ರಾಘಣ್ಣ ಹಾಡಿದರೆ ಅದೊಂದು ಭಾವಾನುಭೂತಿ! ಇಲ್ಲಿ ಹಾಡುವವ-ಕೇಳುವವ ಇಬ್ಬರೂ ಕಳೆದು ಹೋಗುವಷ್ಚು ಭಾವ ಸಂಮೃದ್ಧಿ !! ಕವಿ ಓ.S. ಲಕ್ಷ್ಮೀನಾರಾಯಣ ಭಟ್ಟರ ಸಾಲಿನಂತೆ…“ನಾನು ಹಾಡುವುದು ನನಗೆಂದು.. ಎದೆ ಭಾರ ಇಳಿಯಲೆಂದು. ಎಲ್ಲ ಮರೆತು ಈ ಹಾಡ ಕೇಳುತಿಹ ನಿಮ್ಮ ಪ್ರೀತಿಗೆಂದು” ಇದು ಪರಸ್ಪರ ಪ್ರೀತಿಯ ಅವಿನಾಭಾವ. ರಾಘಣ್ಣ ದುಡ್ಡಿಗಾಗಿ ಹಾಡಿದ ಕಲಾವಿದನಲ್ಲ. ಹಾಗಾಗಿಯೇ ಅವರು ಮಲೆನಾಡ ಹಕ್ಕಿಯಾಗಿಯೇ ಉಳಿದವರು. ಮನಸ್ಸು ಮಾಡಿದ್ದರೆ ರಾಜಧಾನಿ ಸೇರಿ ದುಡ್ಡು ಮಾಡಬಹುದಿತ್ತು ಆದರೆ ಈ ಹಾಡುವ ಜೋಗಿಗೆ ಅದಾವುದರ ಪರಿವಿರಲಿಲ್ಲ. ಲಕ್ಷ್ಮೀ ಕಾಲು ಮುರಿದುಕೊಂಡು ಮನೆಯಲ್ಲೇ ಇರಲಿಲ್ಲವಾದರೂ ನಂಬಿದ ಗಾನ ಸರಸ್ವತಿ ರಾಘಣ್ಣನ ಕೈ ಬಿಡಲೇ ಇಲ್ಲ. ಮಲೆನಾಡಿಗರ ಭಾವಶುದ್ಧಿಯಲ್ಲಿ ರಾಘಣ್ಣನ ಪಾತ್ರ ದೊಡ್ಡದು. ನಮ್ಮ ನಡುವೆ ಭಾವಗೀತೆಗಳನ್ನು ಆನಂದಿಸುವ-ಆಸ್ವಾದಿಸುವ ದೊಡ್ಡ ವರ್ಗವನ್ನು ಹುಟ್ಟುಹಾಕಿದ ಹಿರಿಮೆ ರಾಘಣ್ಣನದು. ತನ್ನ ಅದ್ಭುತ ರಾಗ ಸಂಯೋಜನೆಗಳ ಮೂಲಕ ಅದೆಷ್ಟೋ ಕವಿ ಕಾವ್ಯಗಳು ಜನರಿಂದ ಜನರಿಗೆ ತಲುಪಿಸಿ ತಾನು ಏನೂ ಮಾಡಿಲ್ಲವೆಂಬತೆ ಸುಮ್ಮನಿರುವ ರಾಘಣ್ಣ ನಿಜವಾಗಿಯೂ “ ಭಾವ ತುಂಬಿಸಿದ ಮೌನ ಸಾಧಕ” ಈ ಮಾತಿನಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ರಾಘಣ್ಣನಿಗೆ ಈಗ ಸುಮಾರು ೯೦ರ ಆಸುಪಾಸು. ಒಂದು ಹಾಡು ಹಾಡಿ ಎಂದು ಒಬ್ಬನೇ ಒಬ್ಬ ಅಭಿಮಾನಿ ಕೋರಿಕೊಂಡರೂ ತನ್ಮಯತೆಯಿಂದ ಹಾಡುವ ನಿರಾಡಂಬರ ವ್ಯಕ್ತಿ. 90 ವರ್ಷ ಸಂದರೂ ಇನ್ನೂ ಕೇಳುಗರ ಎದೆಯನ್ನಾಳುತ್ತಿರುವ ಗಾನಧಣಿ ! ರಾಘಣ್ಣನಂತಹ ನಿಗರ್ವಿ ಕಲಾವಿದ ಸಮಾಜದ ಆಸ್ತಿ …ಅದೆಷ್ಟೋ ಅನಂದದ ಕ್ಷಣಗಳನ್ನು ಹಿಂತಿರುಗಿಸಲಾರದ ಸಾಲದಂತೆ ಕೊಟ್ಟ ರಾಘಣ್ಣನಂತಹ ಕಲಾವಿದನಿಗೆ ಶಿವಮೊಗ್ಗೆಯ ಪ್ರತಿಷ್ಠಿತ ಕರ್ನಾಟಕ ಸಂಘದ ಗೌರವ ಸದಸ್ಯತ್ವವನ್ನು ನೀಡುತ್ತಿರುವುದು ಅತ್ಯಂತ ಸಂತೋಷ ಹಾಗೂ ಸಮಾಧಾನದ ವಿಷಯ.
