ಆಧುನಿಕತೆಯ ಅಬ್ಬರದಲ್ಲಿ ಟಿವಿ ಮತ್ತು ಮೊಬೈಲ್ ಮಾಧ್ಯಮಗಳು ಮನುಷ್ಯನನ್ನು ಆವರಿಸಿಕೊಂಡಿದ್ದರೂ, ಗ್ರಾಮೀಣ ಭಾಗದ ಸಂಸ್ಕೃತಿಯಲ್ಲಿ ಸಾಮಾಜಿಕ ನಾಟಕಗಳು ಇಂದಿಗೂ ತನ್ನ ತನ ಉಳಿಸಿಕೊಂಡಿವೆ ಎಂದು ತಾಪಂ ಮಾಜಿ ಸದಸ್ಯ ಸುನೀಲ್ ಗೌಡ ಹೇಳಿದರು.
ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿಯ ಹಿರೇಕಲಗೋಡು ಗ್ರಾಮದಲ್ಲಿ ಈಶ್ವರ ಬಸವೇಶ್ವರ ದೇವರ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಅಣ್ಣನ ಅರಮನೆ ಅರ್ಥಾತ್ ಕರ್ನಾಟಕದ ಹುಲಿ ಎಂಬ ಸಾಮಾಜಿಕ ನಾಟಕದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಜಾತಿ-ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವುದು ಶ್ಲಾಘನೀಯ. ನಾಟಕ, ಕ್ರೀಡೆ ಅಂತಹ ಕಾರ್ಯಕ್ರಮಗಳು ಗ್ರಾಮದ ಸಂಘಟನೆಗೆ ಪೂರಕವಾಗಿವೆ, ನಮ್ಮ ಮಣ್ಣಿನ ಪ್ರತಿಭೆಗಳಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುವುದು ಅಗತ್ಯವಿದ್ದು. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಗ್ರಾಮದ ಸಮಸ್ಯೆಗಳನ್ನು ಅರಿಯಲು ನೆರವಾಗುತ್ತವೆ ಎಂದರು.
ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಎಸ್ ಮಧು ಬಂಗಾರಪ್ಪ ಅವರ ಪ್ರಯತ್ನದಿಂದ ಗುಡ್ನಾಪುರದಿಂದ ಹಿರೇಕಲಗೋಡು ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಗ್ರಾಮದಲ್ಲಿ ಸಮುದಾಯ ಭವನ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಯನ್ನು ಸಚಿವ ಎಸ್.ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
