ಸೊರಬ ನೂರಾರು ವರ್ಷಗಳಿಂದ ಹಿಂದೂ ರುದ್ರಭೂಮಿಯಾಗಿ ಬಳಸುತ್ತಿರುವ ಪ್ರದೇಶವನ್ನು ಇತರೆ ಉದ್ದೇಶಕ್ಕೆ ಬಳಸದಂತೆ ಆಗ್ರಹಿಸಿ ತಾಲೂಕಿನ ಜಡೆ ಗ್ರಾಪಂ ವ್ಯಾಪ್ತಿಯ ಕಾಲಿಗ್ಗೇರಿ ಗ್ರಾಮಸ್ಥರು ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಗ್ರಾಮದ ಹಿರಿಯ ಹಾಗೂ ಗ್ರಾಪಂ ಮಾಜಿ ಸದಸ್ಯ ಕೆ. ಪ್ರಭಾಕರ್ ರಾಯ್ಕರ್ ಮಾತನಾಡಿ, ಸುಮಾರು ನೂರಾರು ವರ್ಷಗಳಿಂದ ಕಾಲಿಗ್ಗೇರಿ ಗ್ರಾಮದ ಸರ್ವೆ ನಂ. 2ರ ಗೋಮಾಳ ಪ್ರದೇಶವನ್ನು ಹಿಂದೂ ರುದ್ರಭೂಮಿಯಾಗಿ ಬಳಕೆ ಮಾಡಲಾಗುತ್ತಿದೆ. ಈವರೆಗೂ ಯಾವುದೇ ಸಮಸ್ಯೆಗಳು ಎದುರಾಗಿರಲಿಲ್ಲ. ಆದರೆ ಇತ್ತೀಚೆಗೆ ಎಪಿಎಂಸಿಯವರು ಸ್ಥಳಕ್ಕೆ ಆಗಮಿಸಿ ಹಿಂದೂ ರುದ್ರಭೂಮಿಯನ್ನು ತಮ್ಮದೆಂದು ಕಾಂಪೌಂಡ್ ಹಾಕಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯ ಗ್ರಾಮಸ್ಥರು ವಿರೋಧವನ್ನು ವ್ಯಕ್ತಪಡಿಸಿದರು. ಮಾತ್ರವಲ್ಲದೇ ಜಡೆ ಗ್ರಾಪಂ ಮತ್ತು ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡಿ ಕಾಂಪೌಂಡ್ ನಿರ್ಮಾಣಕ್ಕೆ ತಡೆಯನ್ನು ಮಾಡಿದ್ದಾರೆ. ಭಾವನಾತ್ಮಕವಾಗಿ ಹಾಗೂ ಪೂರ್ವಿಜರನ್ನು ಸಂಸ್ಕಾರ ಮಾಡಿದ ಸ್ಥಳವು ಹಿಂದೂಗಳಿಗೆ ಮೀಸಲು ಮಾಡಬೇಕು ಎಂದು ಆಗ್ರಹಿಸಿದರು.
ಕಾಲಿಗ್ಗೇರಿ ಗ್ರಾಮದ ರುದ್ರಭೂಮಿಯಲ್ಲಿ ಜಡೆ, ಜಿಗರಿಕೊಪ್ಪ, ಸಾಲಿಗೆ, ಹಣಜಿ ಸೇರಿದಂತೆ ಕೆಲ ಗ್ರಾಮಸ್ಥರು ಮೃತರ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿಕೊಂಡು ಬಂದಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ರುದ್ರಭೂಮಿಗಾಗಿ ಯಾವುದೇ ಪ್ರದೇಶವಿಲ್ಲ. ಆದ್ದರಿಂದ ಅಧಿಕಾರಿಗಳು ತಲಾಂತರದಿಂದ ಬಳಕೆ ಮಾಡುತ್ತಿರುವ ರುದ್ರಭೂಮಿಯನ್ನು ರುದ್ರಭೂಮಿಗಾಗಿಯೇ ಮೀಸಲಿಟ್ಟು ಅಭಿವೃದ್ಧಿಗೊಳಿಸಬೇಕು. ಅನ್ಯತ ಯೋಜನೆಗಳಿಗೆ ಬಳಕೆ ಮಾಡಬಾರದು ಎಂದು ಒತ್ತಾಯಿಸಿದರು.
ತಾಪಂ ಮಾಜಿ ಸದಸ್ಯ ಕೋಟೆ ಬಸವಂತಪ್ಪ, ಜಡೆ ಗ್ರಾಪಂ ಮಾಜಿ ಸದಸ್ಯ ಕೆ.ಪಿ. ಜಯಕುಮಾರ್, ಪ್ರಮುಖರಾದ ಸುರೇಶ, ವೀರಪ್ಪಗೌಡ, ಮಂಜಪ್ಪ, ಶಿವಪ್ಪ, ಮೈಲಾರಪ್ಪ, ಸತೀಶ ಸೇರಿದಂತೆ ಇತರರಿದ್ದರು.
ಸೊರಬ ಕಾಲಿಗ್ಗೇರಿ ಗ್ರಾಮದ ಹಿಂದೂ ರುದ್ರಭೂಮಿಯನ್ನ ಅನ್ಯ ಬಳಕೆ ಮಾಡದಿರಲು ಮನವಿ
Date:
