ದಾವಣಗೆರೆ
Sri Kshetra Dharmasthala Village Development Yojana Trust ಮಾನವೀಯ ಮೌಲ್ಯಗಳ ಅರಿವಿಲ್ಲದ ಅಭಿವೃದ್ಧಿಯು ನಿರರ್ಥಕ, ಸಮಾಜದ ಹಿತ ಬಯಸುವುದರಲ್ಲಿ ಮಾನವೀಯ ಮೌಲ್ಯಗಳಿವೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾ ಸ್ವಾಮಿಗಳು ಹೇಳಿದರು.
ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಹೆಬ್ಬಾಳು ವಿರಕ್ತಮಠದಲ್ಲಿ ನೆರವೇರಿದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ, ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಟ್ಟರೆ ಸಾಲದು ಸಂಸ್ಕೃತಿ ಸಂಸ್ಕಾರವನ್ನು ಕೊಡಬೇಕು ಇದರಲ್ಲಿ ತಾಯಂದಿರ ಪಾತ್ರ ಮಹತ್ತರವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಜೀವನೋದ್ಧಾರಕ್ಕೆ ಆರ್ಥಿಕ ನೆರವು ಅವಶ್ಯ ಆದರೆ ಆತ್ಮೋದ್ಧಾರಕ್ಕೆ ಧಾರ್ಮಿಕ ಅರಿವು ಅವಶ್ಯ. ಧಾರ್ಮಿಕ ಅರಿವು ಎಂದರೆ ಸಮಾಜದಲ್ಲಿ ಅಹಂಕಾರದಿಂದ ಬೀಗದೆ ಸಂಸ್ಕಾರದಿಂದ ಬಾಗುವುದು. ಸಾಮೂಹಿಕವಾದ ಧಾರ್ಮಿಕ ಆಚರಣೆಗಳಲ್ಲಿ ‘ನಾನು’ ಎಂಬುವ ಅಹಂಭಾವ ದೂರವಾಗಿ ‘ನಾವು’ ಎಂಬುವ ವಿಶಾಲಭಾವ ಮೂಡುತ್ತದೆ ಎಂಬುದನ್ನು ಸ್ವಾರಸ್ಯಕರ ನಿದರ್ಶನಗಳ ಮೂಲಕ ವಿವರಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದಾವಣಗೆರೆ ಅಧ್ಯಕ್ಷ ಎಸ್ ಕೆ ಚಂದ್ರಶೇಖರ್ ಧಾರ್ಮಿಕ ಸಭಾದ ಉದ್ಘಾಟನೆ ನೆರವೇರಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಯ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ಪ್ರಾಸ್ತಾವಿಕ ನುಡಿಗಳ ನಾಡಿದರು. ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅಣಬೇರು ಮಂಜಣ್ಣ, ಎಂ ರುದ್ರಪ್ಪ, ನರೇಂದ್ರಬಾಬು, ಆನಂದಪ್ಪ, ಮಹಾ ರುದ್ರಯ್ಯ, ರುದ್ರಮುನಿ, ಮಹೇಂದ್ರಪ್ಪ, ಮಹಾಂತೇಶ, ಬಸವರಾಜಪ್ಪ, ಶಶಿಕಲಾ, ಬಸಮ್ಮ, ಚಂದ್ರಕಲಾ ಹಾಗೂ ಕೊಡಗನೂರು ವಲಯ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದು ಯೋಜನಾಧಿಕಾರಿ ಸತೀಶ್ ಸ್ವಾಗತ ಕೋರಿದರು. ಶಾಲಾ ಮಕ್ಕಳು ಸಾಂಪ್ರದಾಯಿಕ ನೃತ್ಯಗಳನ್ನು ಪ್ರಸ್ತುತಪಡಿಸಿದರು.
