Chamber Of Commerce Shivamogga ಕೌಶಲ್ಯಗಳ ಅಸಮಾನತೆಯಿಂದ ಉದ್ಯೋಗ ಭರ್ತಿ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಎಲ್ಲ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಏರ್ಪಡಿಸಿದ್ದ ಕೌಶಲ್ಯ ಅಂತರ ಅಧ್ಯಯನ, ವಿವಿಧ ಉದ್ಯಮ ಹಾಗೂ ಕೈಗಾರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ವಿವಿಧ ಕೌಶಲ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಂತ್ರಿಕ ಜ್ಞಾನ ಮತ್ತು ಉದ್ಯೋಗದ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಕೌಶಲ್ಯ ಅವಶ್ಯಕ. ಉದ್ಯೋಗದಾತರು ನಿರೀಕ್ಷಿಸುವ ಕೌಶಲ್ಯಗಳು ಮತ್ತು ಉದ್ಯೋಗಿಗಳು ಹೊಂದಿರುವ ನಿಜವಾದ ಕೌಶಲ್ಯಗಳ ನಡುವಿನ ಅಸಮಾನತೆ ಇದ್ದು, ಕೌಶಲ್ಯ ಕಲಿಯಲು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.
ವೃತ್ತಿಗಳನ್ನು ಗುರಿಯಾಗಿಸಿ ಮತ್ತು ಅವರಿಗೆ ಅಗತ್ಯವಾದ ತರಬೇತಿ ಒದಗಿಸಬೇಕು. ಉದ್ಯೋಗಗಳಿಗೆ ಸಂಬಂಧಿಸಿದ ಉದ್ಯಮದ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯಗಳಿಗೆ ಒತ್ತು ನೀಡಬೇಕು. ಪಠ್ಯಕ್ರಮವನ್ನು ನವೀಕರಿಸಲು ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಲು ಉದ್ಯಮ ಸಮೂಹಗಳನ್ನು ಬಳಸುವುದು ಇಂದಿನ ಅತ್ಯವಶ್ಯಕವಾಗಿದೆ ಎಂದರು.
ಕೈಗಾರಿಕೆಗಳಲ್ಲಿ ಕಾರ್ಮಿಕರ ಕೊರತೆ ಇದೆ ಎಂಬುದು ರಹಸ್ಯವಲ್ಲ. ತಾಂತ್ರಿಕ ಕೆಲಸಗಳಿಗೆ ಕೌಶಲ್ಯವಿಲ್ಲದ ಜನರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಸಾಂಪ್ರದಾಯಿಕ, ಕಡಿಮೆ ಬೇಡಿಕೆಯ ಕೌಶಲ್ಯಗಳಿಗಿಂತ ಮುಂದುವರಿದ ವಲಯಗಳ ಮೇಲೆ ಕೇಂದ್ರೀಕರಿಸುವ ಗುರಿಯನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳು ಹೊಂದಬೇಕು ಎಂದು ತಿಳಿಸಿದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಟ್ರೇಡ್ ಸ್ಕೂಲ್ ಕೌಶಲ್ಯ ಅಂತರವನ್ನು ನಿವಾರಿಸಲು ವಿದ್ಯಾರ್ಥಿಗಳು ತಮ್ಮ ಕ್ಷೇತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು ಎಂದರು
Chamber Of Commerce Shivamogga ಮೂಲಭೂತ ಸೌಕರ್ಯಗಳ ಸಮಿತಿ ಚೇರ್ಮನ್ ಗಣೇಶ್ ಎಂ ಅಂಗಡಿ ಮಾತನಾಡಿ, ಐಟಿಐ ತರಬೇತುದಾರರ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು. ಕೆಲಸಗಾರರು ನೇಮಕಗೊಳ್ಳುವ ಮೊದಲು ತಮ್ಮ ಕೆಲಸಗಳಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರಬೇಕು ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಎಸ್.ಎಸ್.ಉದಯಕುಮಾರ್, ಪ್ರದೀಪ್ ವಿ ಎಲಿ, ಎಸ್.ಪಿ.ಶಂಕರ್, ಸಿ.ಎ.ಶರತ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕಾರಿಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲರು ಇತರರು ಭಾಗವಹಿಸಿದ್ದರು.
