ಸವಿತಾ ಸಮಾಜದ ಆರಾಧ್ಯ ದೈವವಾಗಿರುವ ಸವಿತಾ ಮಹರ್ಷಿಗಳು ಸಮಾಜದ ಮೂಲ ಪುರುಷರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸವಿತಾ ಸಮಾಜ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರ ಸವಿತಾ ಸಮಾಜದವರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಪ್ರತಿ ತಾಲ್ಲೂಕಿಗೆ 5 ರಿಂದ 10 ಜನರಿಗೆ ರೂ.50 ರಿಂದ 1 ಲಕ್ಷದವರೆಗೆ ಸಾಲವನ್ನು ನೀಡುತ್ತಿದ್ದು ಅರ್ಹರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಆಕಾಶವಾಣಿ ಸುಗಮ ಸಂಗೀತ ಕಲಾವಿದರು ಹಾಗೂ ಉಪನ್ಯಾಸಕಾರದ ಮಂಜುನಾಥ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸವಿತಾ ಎಂದರೆ ಬೆಳಕು ಅಥವಾ ಜ್ಞಾನ ಎಂದರ್ಥ. ಸವಿತಾ ಸಮಾಜದ ಮೂಲ ಪುರುಷರಾದ ಸವಿತಾ ಮಹರ್ಷಿಗಳು ಪರಶಿವನ ಬಲಗಣ್ಣಿನಿಂದ ಜನಿಸಿದವರಾಗಿದ್ದು ಸೂರ್ಯವಂಶದ ಕುಲದೈವರಾಗಿದ್ದಾರೆ. ಅಪಾರ ಜ್ಞಾನ ಹೊಂದಿದ್ದ ಇವರು ಸಾಮವೇದವನ್ನು ರಚಿಸಿದ್ದು, ಸಂಗೀತದ ಪ್ರತೀಕವಾಗಿದ್ದಾರೆ ಎನ್ನಬಹುದು. ಇವರ ಪುತ್ರಿ ಗಾಯತ್ರಿ ದೇವಿಯು ಶ್ರೇಷ್ಟ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ. ಈ ಸಮಾಜದಲ್ಲಿ 27 ಉಪಜಾತಿಗಳಿದ್ದು, 2ಎ ವರ್ಗದಲ್ಲಿ ಬರುತ್ತದೆ ಎಂದು ವಿವರಿಸಿದರು.
ಸವಿತಾ ಸಮಾಜಕ್ಕೆ ಸೇರಿದ ಬಿಹಾರಿನ ಕರ್ಪೂರಿ ಠಾಕೂರ್ರವರಿಗೆ ಭಾರತ ಸರ್ಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಇವರು ಶೋಷಿತ ವರ್ಗದವರನ್ನು ಶೈಕ್ಷಣಿಕವಾಗಿ ಮೇಲೆ ತರಲು ಹೋರಾಡಿದ್ದರು. ಇಂತಹ ವ್ಯಕ್ತಿಗಳನ್ನು ಪಡೆದ ಸಮಾಜವು ಕೀಳರಿಮೆಯನ್ನು ತೊರೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಇದರಿಂದ ಸಮಾಜದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಹಾಗೂ ಜಯಂತಿಯAತಹ ಆಚರಣೆಯ ಮೂಲಕ ಸಮುದಾಯದವರು ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಎಂ.ಜಿ.ಬಾಲು, ತಾಲ್ಲೂಕು ಅಧ್ಯಕ್ಷರಾದ ಬಿ ಎನ್ ಧರ್ಮರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಸವಿತಾ ಸಮಾಜದ ಆರಾಧ್ಯ ದೈವ ಸವಿತಾ ಮಹರ್ಷಿಗಳು : ಅಭಿಷೇಕ್ ವಿ.
Date:
