DVS College of Arts, Science and Commerce ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳನ್ನು ಬೆಳೆಸುವಲ್ಲಿ ಹಾಗೂ ಪ್ರೋತ್ಸಾಹಿಸುವ ಪೂರಕ ಕಾರ್ಯಕ್ರಮಗಳು ಅವಶ್ಯಕ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಎಚ್.ಕೇಶವ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ಎಫ್ಕೆಸಿಸಿಐ ಇನ್ನೋ ಮಂಥನ್ 2026 ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಹೊಸ ಉದ್ಯಮಗಳಿಗೆ ಹೆಚ್ಚಿನ ಅವಕಾಶಗಳಿದ್ದು, ಹೊಸ ಹೊಸ ಆಲೋಚನೆಗಳು ಉದ್ಯಮ ಸ್ವರೂಪ ಪಡೆಯಲು ಸೂಕ್ತ ಕಾಲಘಟ್ಟ ಇದಾಗಿದೆ. ಆದ್ದರಿಂದ ಯುವಜನರಲ್ಲಿ ಉದ್ಯಮದ ಮನೋಭಾವ ಬೆಳೆಸುವಲ್ಲಿ ಇಂತಹ ಸ್ಪರ್ಧೆಗಳು ಮಹತ್ತರ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಹೊಸ ಅವಕಾಶಗಳ ಬಗ್ಗೆ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪ ಗೌಡ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ನಿಮ್ಮ ಆಸಕ್ತಿ ಕ್ಷೇತ್ರದ ಚಿಂತನೆಗಳನ್ನು ಮಂಡಿಸಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹೊಸ ರೀತಿಯ ಅನುಭವ ದೊರೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿನ ಸಾಧ್ಯತೆಗಳ ಪರಿಚಯ ಆಗುತ್ತದೆ ಎಂದು ಹೇಳಿದರು.
DVS College of Arts, Science and Commerce ಕಾಲೇಜಿನ ಐಕ್ಯೂಎಸಿ ಘಟಕ, ವಾಣಿಜ್ಯ ಶಾಸ್ತ್ರ ವಿಭಾಗ, ಕಾಲೇಜು ಶಿಕ್ಷಣ ಇಲಾಖೆ, ಎಫ್ಕೆಸಿಸಿಐ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಬಿಸಿನೆಸ್ ಐಡಿಯಾ ಪ್ರಸ್ತುತಪಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಎಫ್ಕೆಸಿಸಿಐ ಮಂಥನ್ ಸಮಿತಿ ಸದಸ್ಯ ರಾಹುಲ್ ಬಿ.ಗೋಯಲ್ ಮಾತನಾಡಿ, ಬಿಸಿನೆಸ್ ಐಡಿಯಾ ಪ್ರಸ್ತುತಪಡಿಸುವ ಸ್ಪರ್ಧೆ ಇದಾಗಿದ್ದು, ವಿದ್ಯಾರ್ಥಿಗಳು ಹೊಸ ಐಡಿಯಾಗಳನ್ನು ಮಂಡಿಸಬೇಕು. ಶಿಕ್ಷಣ ಇಲಾಖೆ ಹಾಗೂ ಎಫ್ಕೆಸಿಸಿಐ ಸಹಯೋಗದಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ಉದ್ಯೋಗ ಸೃಷ್ಟಿಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಮುಖ್ಯ ಆಶಯ ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಕಾರ್ಯದರ್ಶಿ ಎಸ್.ಪಿ.ದಿನೇಶ್, ಉಪಾಧ್ಯಕ್ಷ ಜಿ.ಮಧುಸೂದನ್, ಸಹ ಕಾರ್ಯದರ್ಶಿ ಡಾ. ಸತೀಶ್ಕುಮಾರ್ ಶೆಟ್ಟಿ, ಕೋಶಾಧ್ಯಕ್ಷ ಎನ್.ಆರ್.ನಿತಿನ್, ನಿರ್ದೇಶಕ ಬಿ.ಗೋಪಿನಾಥ್, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಚಾಲಕ ಎನ್.ಕುಮಾರಸ್ವಾಮಿ, ಪ್ಲೇಸ್ಮೆಂಟ್ ಸೆಲ್ ಸಂಚಾಲಕ ಡಾ. ಕೆ.ಚಂದ್ರು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಿ.ಇ.ರುದ್ರೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್, ಡಿ.ಎಂ.ಶಂಕರಪ್ ಇತರರಿದ್ದರು.
