B. Y. Raghavendra ದೇಶದಲ್ಲಿ ಮುಂದೆ ನೆಡಯಲಿರುವ ಓಲಂಪಿಕ್, ಪ್ಯಾರಾ ಓಲಂಪಿಕ್ಕ್ರೀಡಾಕೂಟದಲ್ಲಿ ನಾಡಿನ ಕ್ರೀಡಾಪ್ರತಿನಿಧಿಗಳು ಭಾಗವಹಿಸಿ, ನಾಡಿನ ಕೀರ್ತಿಪತಾಕೆಯನ್ನು ಹಾರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ನೌಕರ ಪ್ರತಿಭಾವಂತ ಕ್ರೀಡಾಪಟುಗಳಿಗೆ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ, ಚೆಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ದಿನನಿತ್ಯ ಒಂದಿಲ್ಲೊಂದು ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಬದುಕಿನ ಅಮೂಲ್ಯ ಸಮಯವನ್ನು ಕೆಲಸದಲ್ಲಿಯೇ ಕಳೆದು ಹೋಗುತ್ತದೆ. ಕುಟುಂಬಕ್ಕಾಗಲೀ, ತಮ್ಮ ಆರೋಗ್ಯಕ್ಕಾಗಲೀ ಸಮಯ ಕೊಡುವುದು ನಿರೀಕ್ಷಿಸಿದಂತೆ ಸಾಧ್ಯವಾಗುವುದಿಲ್ಲ. ಇಂತಹ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಭಾವಂತ ನೌಕರರಿಗೆ ಮಾನಸಿಕ ನೆಮ್ಮದಿ, ಉಲ್ಲಾಸ ದೊರೆಯುವುದಲ್ಲದೇ ದೈಹಿಕ ಚೈತನ್ಯ ಹೆಚ್ಚಿ, ಕಾರ್ಯದಲ್ಲಿ ನವೋಲ್ಲಾಸ ಹೆಚ್ಚಲಿದೆ ಎಂದವರು ನುಡಿದರು.
ನೌಕರರು ಅನೇಕ ಸಂದರ್ಭಗಳಲ್ಲಿ ತಮ್ಮ ಕಚೇರಿಯ ಮೇಲಾಧಿಕಾರಿಗಳ, ಸ್ಥಳೀಯ ಜನಪ್ರತಿನಿಧಿಗಳ ಒತ್ತಡ, ಇಂತಹ ಸಮಸ್ಯೆ-ಸವಾಲುಗಳಲ್ಲಿಯೇ ದಿನದ ಕಡತಗಳನ್ನು ನಿರ್ವಹಿಸುತ್ತಾರೆ. ಆದಾಗ್ಯೂ ನೌಕರರು ಯಾವುದೇ ಆತಂಕಗಳಿಗೆ ಒಳಗಾಗದಂತೆ ಹಾಗೂ ನೌಕರರ ಸಮಸ್ಯೆಗಳಿಗೆ ತಾವು ಸದಾ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಕಾರ್ಯಾಂಗದ ಘನತೆಯನ್ನು ಎತ್ತಿಹಿಡಿಯುವಲ್ಲಿ ನೌಕರರ ಪಾತ್ರ ಪ್ರಮುಖವಾದುದ್ದಾಗಿದೆ. ಸರ್ಕಾರಿ ನೌಕರರ ಪ್ರಾಮಾಣಿಕ ಸೇವೆಯಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾಲಿದೆ ಎಂದ ಅವರು, ಅಂತಹ ನೌಕರರೂ ಕೂಡ ಸ್ವಾಭಿಮಾನದ, ಅವರ ನೆಮ್ಮದಿ ಬದುಕಿಗೆ ಆಸರೆಯಾಗಬೇಕಾದುದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ಸದಸ್ಯ ಡಿ.ಎಸ್. ಅರುಣ್ಅವರು ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದ್ದರೂ ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ನೌಕರರ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಹಾಗೂ ಅವರ ಉತ್ಸಾಹದಲ್ಲಿ ಯಾವುದೇ ಕೊರತೆ ಕಾಣುತ್ತಿಲ್ಲ ಎಂದ ಅವರು, ನಗರದಲ್ಲಿನ ಕ್ರೀಡಾಪಟುಗಳ ಉತ್ತೇಜನ ಮತ್ತು ನಿರಂತರ ಕಲಿಕೆಗಾಗಿ ನೆಹರೂ ಕ್ರೀಡಾಂಗಣವಲ್ಲದೇ ಅನೇಕ ಕ್ರೀಡಾಂಗಣಗಳು ಪ್ರೇರಕ ಶಕ್ತಿಯಾಗಿವೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ಎಲ್ಲರಲ್ಲಿಯೂ ಕ್ರೀಡಾ ಮನೋಭಾವ ಮುಖ್ಯವಾಗಿದೆ. ಖೇಲೋ ಇಂಡಿಯ ಕಲ್ಪನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅದ್ಭುತ ಕಲ್ಪನೆಯಾಗಿದೆ. ಇದರಿಂದಾಗಿ ರಾಷ್ಟ್ರದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ಸೃಜಿಸಲು ಕಾರಣವಾಗಿದೆ. ಕ್ರೀಡಾಕೂಟಗಳು ಕ್ರೀಡಾಸಕ್ತರ ಪ್ರತಿಭೆಯ ಅನಾವರಣಕ್ಕೆ ಉತ್ತಮ ಅವಕಾಶವಾಗಿರಲಿವೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದಿಂದ ಭದ್ರಾವತಿಯ ಅವಳಿ ಕಾರ್ಖಾನೆಗಳ ಉಳಿವು-ಬೆಳವಣಿಗೆಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಕ್ರಮ ವಹಿಸುತ್ತಿದ್ದಾರೆ. ಅಂತೆಯೇ ಕಾರ್ಖಾನೆಗಳ ಆವರಣದೊಳಗೆ ಬೃಹತ್ಪ್ರಮಾಣದ ಎಲ್ಲಾ ರೀತಿಯ ಕ್ರೀಡಾಂಗಣಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಾಗಲಿದೆ. ಈ ಎಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದ ಅವರು, ನೌಕರರು ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಕ್ರೀಡೆ ಮನೋರಂಜನೆಗೆ ಮಾತ್ರವಲ್ಲ, ಪ್ರತಿಭೆಯ ಅನಾವರಣಕ್ಕೆ, ಪರಿಪಕ್ವತೆಗೆ ಸಹಕಾರಿಯಾಗಿದೆ. ಅಂತೆಯೇ ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕ್ರೀಡಾ ಸ್ಪೂರ್ತಿಯಿಂದಲೇ, ಅದರ ಘನತೆಯನ್ನು ಎತ್ತಿಹಿಡಿಯುವುದಕ್ಕಾಗಿ ಭಾಗವಹಿಸಬೇಕು. ಇವೆಲ್ಲವೂ ತಮ್ಮ ವೃತ್ತಿ ಬದುಕಿನಲ್ಲಿ ಉತ್ಸಾಹ, ಉಲ್ಲಾಸ ಹೊಮ್ಮಿಸುವಲ್ಲಿ
ಸಹಾಯಕವಾಗಲಿದೆ ಎಂದರು.
B. Y. Raghavendra ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟವು 2026ರ ಫೆಬ್ರವರಿ ಎರಡನೇ ವಾರದಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಆಯೋಜಿಸಲಾಗುತ್ತಿದ್ದು, ವಿಜೇತ ಕ್ರೀಡಾಪಟುಗಳು ಭಾಗವಹಿಸುವಂತೆ ಮನವಿ ಮಾಡಿದರು.
• ನೌಕರರ ಸಂಘದ ಪದಾಧಿಕಾರಿಗಳ ಸಂಘಟಿತ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಕೇಂದ್ರಕ್ಕೆ ಸಮಾನವಾದ ವೇತನ ಪಡೆಯಲಿದ್ದೇವೆ. ಸರ್ಕಾರದೊಂದಿಗೆ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಬೇಡಿಕೆಯನ್ನು ಪೂರೈಸಲು ವಿನಂತಿಸಲಾಗುವುದು. ಅಗತ್ಯವಿದ್ದರೆ ರಾಜ್ಯದೆಲ್ಲೆಡೆ ಹೋರಾಟ ಅನಿವಾರ್ಯವಾಗಬಹುದಾಗಿದೆ. ಇದರೊಂದಿಗೆ ಎನ್.ಪಿ.ಎಸ್.ಬದಲಾಗಿ ಓ.ಪಿ.ಎಸ್.ಸೌಲಭ್ಯವೂ ನಮ್ಮ ಪ್ರಮುಖ ಬೇಡಿಕೆಗಳಲ್ಲೊಂದಾಗಿದ್ದು, ಅದರ ಈಡೇರಿಕೆಗೂ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅದರಂತೆ ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿಲಿದೆ. ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ವಿಧಾನ ಪರಿಷತ್ಸದಸ್ಯ ಡಿ.ಎಸ್.ಅರುಣ್, ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಜಿ.ಪಲ್ಲವಿ, ರಾಜ್ಯ ಕೈಮಗ್ಗ ಮತ್ತು ಮೂಲಸೌಕರ್ಯ ಮಂಡಳಿ ಅಧ್ಯಕ್ಷ ಚೇತನ್ಕೆ.ಗೌಡ, ಅಪರ ಜಿಲ್ಲಾಧಿಕಾರಿ ಅಭಿಷೇಕ್ವಿ., ಉಪವಿಭಾಗಾಧಿಕಾರಿ ಸತ್ಯನಾರಾಯಣ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಆರ್.ಪಾಪಣ್ಣ, ಸಿದ್ಧಬಸಪ್ಪ, ದಿನೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಇದ್ದರು.
