DC Shivamogga ಶಿವಮೊಗ್ಗ ನಗರದ ಹೊರವಲಯ ಹಾಗೂ ತಾಲೂಕುಗಳಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ನೀರು, ವಿದ್ಯುತ್, ರಸ್ತೆ, ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ 194ನೇ ಏಕಗವಾಕ್ಷಿ ಸಮಿತಿ ಮತ್ತು ಜಿಲ್ಲಾ ಮಟ್ಟದ 27ನೇ ಕೈಗಾರಿಕಾ ಸ್ಪಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೈಗಾರಿಕೋದ್ಯಮಿಗಳ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲು
ಶೀಘ್ರದಲ್ಲಿ ದಿನಾಂಕ ನಿಗಧಿಗೊಳಿಸಿ, ಸಭೆ ಆಯೋಜಿಸಲಾಗುವುದು ಎಂದರು. ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಶೌಚಾಲಯ, ಸ್ವಚ್ಚತೆ, ನೀರು ಸರಬರಾಜು ಮತ್ತಿತರ ಅಗತ್ಯ ವಿಷಯಗಳಿಗಾಗಿ ಮಹಾನಗರಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಮಂಡ್ಲಿ ಕೈಗಾರಿಕಾ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಪಾಲಿಕೆಯಿಂದ ಈ ಹಿಂದೆ ಆಯೋಜಿಸಲಾಗಿದ್ದ ಇ-ಖಾತಾ ಅಭಿಯಾನವನ್ನು ಮತ್ತೊಮ್ಮೆ ಆಯೋಜಿಸುವಂತೆಯೂ ಸೂಚಿಸಿದರು.
ಸೋಗಾನೆ ಕೈಗಾರಿಕಾ ಪ್ರದೇಶದ ಅಭಿವೃದ್ಧಿಪಡಿಸಲು ಹಾಗೂ ಅತಿಕ್ರಮಣವನ್ನು ತೆರವುಗೊಳಿಸಲು ಅಗತ್ಯ ಸಹಕಾರ ನೀಡುವಂತೆ ಹಾಗೂ ತ್ವರಿತವಾಗಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕೈಗೊಂಡ ನಿರ್ಣಯದ ವರದಿಯನ್ನು ಕೂಡಲೇ ಒದಗಿಸುವಂತೆ KIADB ಅಧಿಕಾರಿಗಳಿಗೆ ಸೂಚಿಸಿದರು.
ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯ ಘಟಕಗಳಲ್ಲಿನ ಉತ್ಪನ್ನಗಳ ರಪ್ತು ವಹಿವಾಟನ್ನು ಹೆಚ್ಚಿಸಲು ಅನುಕೂಲವಾಗುವಂತೆ ಜಿಲ್ಲಾ ವ್ಯಾಪ್ತಿಯಲ್ಲಿನ ಕೈಗಾರಿಕಾ ವಸಾಹತುಗಳಲ್ಲಿ ಖಾಲಿ ಇದ್ದ ನಿವೇಶನಗಳ ಹಂಚಿಕೆಗಾಗಿ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸ್ಥಳೀಯರಿಗೆ, ಈಗಾಗಲೇ ಕೈಗಾರಿಕೆಗಳನ್ನು ಆರಂಭಿಸಿದವರಿಗೆ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ವಸ್ತುಗಳನ್ನು ಉತ್ಪಾದಿಸುವ ಘಟಕಗಳು ಸೇರಿದಂತೆ ಇಲಾಖೆಯ ಇತರ ಮಾನದಂಡಗಳನ್ನು ಅನುಸರಿಸಿ, ಹಂಚಿಕೆ ಮಾಡಲಾಗಿದ್ದುದನ್ನು ಕೂಲಂಕಶವಾಗಿ ಪರಿಶೀಲಿಸಿ ಅನುಮೋದನೆ ನೀಡಿದರು.
ಸಿದ್ಲೀಪುರ ಕೈಗಾರಿಕಾ ವಸಾಹತುವಿನಲ್ಲಿ 07ನಿವೇಶನಗಳಿಗಾಗಿ 11ಮಂದಿ, ಸಾಗರದ ಯಲಗಳಲೆಯಲ್ಲಿನ 01ನಿವೇಶನಕ್ಕಾಗಿ 04ಮಂದಿ ಹಾಗೂ ಹೊಸನಗರದ ಕೆರೆಹಳ್ಳಿಯಲ್ಲಿನ 11 ನಿವೇಶನಗಳಿಗಾಗಿ 07ಮಂದಿ ಕೈಗಾರಿಕೋದ್ಯಮಿಗಳು ಅರ್ಜಿ ಸಲ್ಲಿಸಿದ್ದರು. ಸಾಗರ ರಸ್ತೆಯಲ್ಲಿರುವ ಕೆ.ಎಸ್.ಎಸ್.ಐ.ಡಿ.ಸಿ. ಕೈಗಾರಿಕಾ ವಸಾಹತುವಿಗೆ ಸಂಬಂಧಿಸಿದಂತೆ ನಿತ್ಯದ ಕೆಲಸಗಳಿಗಾಗಿ ಆಗಮಿಸುವ ಕಾರ್ಮಿಕರು, ಸಾರ್ವಜನಿಕರು ಹಾಗೂ ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅಲ್ಲದೇ ಕೈಗಾರಿಕಾ ಪ್ರದೇಶಕ್ಕೆ ಬರುವ ವಾಹನಗಳ ಸಂಚಾರಕ್ಕೆ ತೀವ್ರ ತರಹದ ಅಡಚಣೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಕೈಗೊಳ್ಳಲಾಗುವುದು ಎಂದರು.
ಮಂಡ್ಲಿ-ಕಲ್ಲೂರು ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ವಿದ್ಯುತ್ಬೇಡಿಕೆ ಇದ್ದು, ಮೆಸ್ಕಾಂ ಅಥವಾ ಕೆ.ಐ.ಎ.ಡಿ.ಬಿ. ಅವರು ಕಲ್ಪಿಸಿಕೊಡಬೇಕು. ಈ ಬಗ್ಗೆ ಅಗತ್ಯವಿರುವ ಭೂಮಿಯ ಲಭ್ಯತೆ ಇದ್ದು, ವಿದ್ಯುತ್ಪ್ರಸರಣ ಉಪಕೇಂದ್ರ ಆರಂಭಿಸಬೇಕಾದ ಅಗತ್ಯವಿದೆ. ಈ ಪ್ರದೇಶದಲ್ಲಿ ಇ.ಎಸ್.ಐ.ಚಿಕಿತ್ಸಾಲಯ ತೆರೆಯಬೇಕು ಎಂದು ಕೈಗಾರಿಕೋದ್ಯಮಿಗಳಾದ ಗೋಪಿನಾಥ್ ಅವರು ತಿಳಿಸಿದರು.
DC Shivamogga ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶ್ರೀಮತಿ ಶಿಲ್ಪಾ ಅವರು ಮಾತನಾಡಿ, ಫೌಂಡ್ರಿ ಘಟಕಗಳಿಂದ ಉತ್ಪತ್ತಿಯಾಗುವ ಮರಳಿನ ತ್ಯಾಜ್ಯವನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಿಕೊಳ್ಳಬಹುದಾಗಿದೆ ಅಲ್ಲದೇ ಇಟ್ಟಿಗೆ ತಯಾರಿಕೆಯಲ್ಲಿ, ರಸ್ತೆ ನಿರ್ಮಾಣ ಮಿಶ್ರಣಗಳಲ್ಲಿ ಮರುಬಳಕೆ ಮಾಡಿಕೊಳ್ಳಬಹುದಾಗಿದೆ. ತ್ಯಾಜ್ಯ ಮರಳಿನ ಸಂಸ್ಕರಣಾ ಘಟಕವನ್ನು ಅಳವಡಿಸಿಕೊಳ್ಳುವುದರಿಂದ ಮರಳಿನ ತ್ಯಾಜ್ಯ ರಸ್ತೆ ಬದಿಗಳಲ್ಲಿ, ಇತರೆ ಜಲಮೂಲಗಳಲ್ಲಿ ಎಸೆಯುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಅಲ್ಲದೇ ಸದರಿ ತ್ಯಾಜ್ಯವನ್ನು ತಮ್ಮ ಘಟಕಗಳ ಆವರಣ ಅಥವಾ ಅವರ ನಿವೇಶನಗಳಲ್ಲಿಯೇ ವಿಲೇ ಮಾಡಿಕೊಳ್ಳಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸುರೇಶ್, ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಮಲ್ಲಿಕಾರ್ಜುನ, ರಾಮಾಚಾರ್, ವಿಶ್ವೇಶ್ವರಯ್ಯ, ಬೆನಕಪ್ಪ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
